***********************
ಈ ಜಗತ್ತು ಬಹಳ ವಿಚಿತ್ರ. ನಾವಿಂದು ವೈಜ್ಞಾನಿಕವಾಗಿ ಬಹಳ ಮುಂದುವರಿದಿದ್ದೇವೆ ಎನ್ನುವ ಭ್ರಮೆಯಲ್ಲಿದ್ದೇವೆ. ಆದರೆ ನಾವು ಕಲಿತದ್ದು ಬರಿದೆ ಒಂದು ಭಾಗವಿರಬಹುದು. ಕಲಿಯಬೇಕಾದದ್ದು ತೊಂಭತ್ತೊಭತ್ತು ಭಾಗವಿದೆ. ನಾವು ಯಾವ ದೃಷ್ಟಿಕೋನದಿಂದ ನೋಡಿದರೂ ನಮಗೆ ಒಂದಿಂಚೂ ರಹಸ್ಯವನ್ನು ಭೇದಿಸಲಾಗದ ಲಕ್ಷಾಂತರ ವಿಷಯಗಳು ಈ ಪ್ರಕೃತಿಯಲ್ಲಿ ಅನಾದಿ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಮುಂದೆಯೂ ನಡೆಯುತ್ತಲೇ ಇರುತ್ತವೆ. ಸಣ್ಣ ಸಣ್ಣ ವಿಷಯಗಳನ್ನು ಅರಿತುಕೊಂಡು ನಾವು ರಹಸ್ಯವನ್ನು ಭೇದಿಸಿದ್ದೇವೆ ಎಂದು ನಾವಂದುಕೊಂಡರೆ ಪ್ರಕೃತಿ ಮನಸ್ಸಿನೊಳಗೆ ನಗುತ್ತಲೇ ಇರುತ್ತದೆ ನಮ್ಮ ಮುಗ್ಧತನಕ್ಕೆ. ಏನೇ ಇರಲಿ ಇಲ್ಲಿ ನನಗಾದ ವಿಚಿತ್ರ ಅನುಭವವನ್ನು ಮಾತ್ರ ನಾನು ನಿಮ್ಮ ಮುಂದಿಡಬಲ್ಲೆ ಹೊರತು ಅದಕ್ಕೆ ತಾರ್ಕಿಕವಾಗಿ ಉತ್ತರಿಸಲಾರೆ. ನಿಮಗೇನಾದರು ಉತ್ತರ ಸಿಕ್ಕರೆ ಸಿಗಲೂಬಹುದು.
ಸಾಧಾರಣ ಐದು ವರ್ಷದಷ್ಟು ಹಿಂದೆ ಹೋಗೋಣ. ನನ್ನ ಪತ್ನಿಯಾದ ಮಹಾಲಕ್ಷ್ಮಿಯ ಅನಾರೋಗ್ಯದ ಕಾರಣ ನಮಗೆ ಅಂದು ಆಸ್ಪತ್ರೆ ಮತ್ತು ಮನೆಯ ಹೊರತಾದ ಇನ್ನೊಂದು ಪ್ರಪಂಚವಿರಲಿಲ್ಲ. ಆದ್ದರಿಂದ ಸಮಾಜದಲ್ಲಿ ಆಗುವಂಥ ಯಾವುದೇ ಸಾವು ನೋವುಗಳು, ಸಂಭ್ರಮಗಳು, ರಾಜಕೀಯ ಚಟುವಟಿಕೆಗಳು, ಮನೋರಂಜನೆಗಳು ನಮ್ಮ ಹತ್ತಿರಕ್ಕೂ ಬರುತ್ತಿರಲಿಲ್ಲ. ವಾರ್ತಾ ಪತ್ರಿಕೆ, ಟಿ.ವಿ. ಮಾಧ್ಯಮವಂತು ನೇಪಥ್ಯಕ್ಕೇ ಸೇರಿಹೋಗಿತ್ತು.
ಮಹಾಲಕ್ಷ್ಮಿಗೆ ತಲೆಯ ಶಸ್ತ್ರಚಿಕಿತ್ಸೆಯಾಗಿ ಎರಡು ತಿಂಗಳು ಆಸ್ಪತ್ರೆಯಲ್ಲಿದ್ದು ಗುಣಮುಖವಾಗುತ್ತಿದ್ದಂತೆ ವೈದ್ಯರು ಹೇಳಿದ್ದರು ಸ್ವಲ್ಪ ದಿವಸ ಮನೆಗೆ ಕರಕೊಂಡು ಹೋಗಿ ವಾತಾವರಣ ಬದಲಾದಾಗ ಬೇಗನೆ ಗುಣಮುಖಳಾಗಬಹುದು ಎಂದು. ಅಂತೆಯೇ ಅವಳನ್ನು ಮನೆಗೆ ಕರಕೊಂಡು ಬಂದೆವು. ಆದರೆ ಯಾವ ಅಂಗಾಂಗವೂ ಸ್ವಾಧೀನವಿಲ್ಲದ್ದರಿಂದ ಪ್ರತಿಯೊಂದು ಕ್ಷಣದಲ್ಲೂ ಹತ್ತಿರ ಒಬ್ಬರು ಬೇಕಾಗಿರುತ್ತಿತ್ತು. ಹಾಗೆಂದು ತಲೆಯ ಒಳಗಿನ ಬುದ್ಧಿ, ಪ್ರಜ್ಞೆ, ವ್ಯವಹಾರ ಜ್ಞಾನ ಚೆನ್ನಾಗಿಯೇ ಇತ್ತು. ಓದಲು ಬರೆಯಲು ಸಾಧ್ಯವಾಗದಿದ್ದರೂ ಯಾರಾದರು ಓದಿ ಹೇಳಿದರೆ ಒಂದೆರಡು ನಿಮಿಷ ಕೇಳುವಷ್ಟು ತಾಳ್ಮೆಯೂ ಇತ್ತು. ಆದರೆ ಬರಬರುತ್ತ ಬರಬರುತ್ತ ಇವೆಲ್ಲ ಕ್ರಿಯೆಗಳೂ ದಿವಸದಿಂದ ದಿವಸಕ್ಕೆ ಕ್ಷೀಣವಾಗುತ್ತಿದ್ದವು. ಮಾತು ಅಸ್ಪಷ್ಟವಾಗಿ ಇದ್ದರೂ ನಮಗೆ ಅರ್ಥವಾಗುವಂತಿತ್ತು. ಈ ಸ್ಥಿತಿಯಲ್ಲಿರುವಾಗ
ಒಂದು ದಿನ ಬೆಳಗ್ಗೆ ಅವಳಿಗೆ ಕಾಫಿ ಕುಡಿಸುತ್ತಿರುವಾಗ ‘ಇವತ್ತು ಬೆಳಗ್ಗಿನ ಜಾವ ಬನ್ನಂಜೆ ಗೋವಿಂದಾಚಾರ್ಯರು ತೀರಿ ಹೋದರೆಂದು ಕನಸು ಬಿತ್ತು’ ಎಂದಳು. ಕನಸುಗಳೆಂದರೆ ಅದು ಹೀಗೇ. ಅದಕ್ಕೆ ಯಾವ ವಿಶೇಷಾರ್ಥಗಳಿಲ್ಲವೆಂದು ನಾನು ಪರಿಗಣಿಸಿದ್ದರಿಂದ ನನಗಿದು ವಿಶೇಷವೆಂದು ಕಾಣಲಿಲ್ಲ. ‘ಇರಲಿ ಬಿಡು ಈಗ ಕಾಫಿ ಕುಡಿ’ ಎಂದು ಹೇಳಿ ಆ ವಿಷಯವನ್ನು ಮರೆ ಮಾಚಲು ಯತ್ನಿಸಿದೆ. ಆದರೆ ಮಹಾಲಕ್ಷ್ಮಿ ಮಹಾಲಕ್ಷ್ಮಿ ‘ಇಲ್ಲ ನನಗೆ ಈಗಲೂ ಆ ಚಿತ್ರಣ ನೆನಪಿದೆ. ಬನ್ನಂಜೆಯವರ ಹೆಣವನ್ನು ಮಲಗಿಸಿದ್ದರು. ಸುತ್ತ ಮುತ್ತ ಪಾಣಿ ಪಂಚೆಯನ್ನ ಧರಿಸಿಕೊಂಡು ಪುರೋಹಿತರು ಹಿಂದೆ ಮುಂದೆ ತಿರುಗುತ್ತಿದ್ದರು. ಬಾಯಲ್ಲೇನೋ ಮಂತ್ರ ಹೇಳುತ್ತಿದ್ದರು. ಮಾತ್ರವಲ್ಲ ಅವರ ಮನೆಯ ಹೆಸರು ಕೂಡಾ ನೆನಪಿದೆ’ ಎಂದಾಗ ‘ಏನು ಹೆಸರು ಹೇಳು’ ಎಂದೆ. ಕೂಡಲೆ ಆಕೆ ‘ಈಶಾವಾಸ್ಯ’ ಎಂದು ಹೇಳಿದರು. ಅಲ್ಲಿಗೆ ನನಗೆ ಏನೋ ಒಂದು ಸತ್ಯವಿದೆ ಎಂಬ ಅರಿವಾಗತೊಡಗಿತ್ತು. ಯಾಕೆಂದರೆ ಮಹಾಲಕ್ಷ್ಮಿ ಬನ್ನಂಜೆಯವರ ಮನೆಗೆ ಒಂದು ಬಾರಿಯೂ ಹೋಗಿರಲಿಲ್ಲ. ಆದ್ದರಿಂದ ಅವರ ಮನೆಯ ಹೆಸರು ಗೊತ್ತಿರಲು ಸಾಧ್ಯವೇ ಇಲ್ಲ. ನಾನಾದರೊ ಹಲವಾರು ಬಾರಿ ಬನ್ನಂಜೆಯವರ ಮನೆಗೆ ಹೋಗಿದ್ದರು ಅವರ ಮನೆಯ ಹೆಸರು ಜ್ಞಾಪಕದಲ್ಲಿರಲಿಲ್ಲ. ಅದಲ್ಲದೆ ನಮ್ಮ ಮನೆಗೂ ಅವರ ಮನೆಗೂ ಯಾವುದೇ ಸಂಪರ್ಕವೂ ಇರಲಿಲ್ಲ. ಅಂಥದ್ದರಲ್ಲಿ ಆಕೆ ಏಕಾಏಕಿ ಬನ್ನಂಜೆಯವರ ಸಾವಿನ ಕನಸು ಹೇಳುವಾಗ ಒಂದು ವೇಳೆ ಹೌದಾದರೂ ಅಲ್ಲಿಗೂ ಇಲ್ಲಿಗೂ ಅದ್ಯಾವ ಸಂಬಂಧವೆಂದೇ ತಿಳಿಯಲಿಲ್ಲ. ಏನೆ ಇರಲಿ ಇದು ಕನಸು ಎಂದು ಸುಮ್ಮನಾದೆ. ಅಲ್ಲಿಗೆ ಅವಳು ಕೂಡಾ ಅದನ್ನು ಗಂಭೀರವಾಗಿ ತೆಗೆದು ಕೊಳ್ಳುವಂಥ ಮನಸ್ಥಿತಿಯನ್ನು ಹೊಂದಿರಲಿಲ್ಲ.
ಆದರೂ ನನ್ನ ಮನಸ್ಸಿನೊಳಗೊಂದು ಹುಳ ಸೇರಿದ್ದು ಸುಳ್ಳಲ್ಲ. ಹಾಗೆಯೆ ಅಂಗಡಿಗೆ ಹೋದವನು ಅಂದಿನ ವಾರ್ತಾ ಪತ್ರಿಕೆಯೊಂದನ್ನು ಪಡಕೊಂಡೆ. ಓದುವಾಗ ನನಗೆ ವಿಸ್ಮಯವೇ ಆಗಿತ್ತು. ಯಾಕೆಂದರೆ ಬನ್ನಂಜೆಯವರ ಸಾವಿನ ಸುದ್ದಿಯ ಬದಲಿಗೆ ಅವರ ಮಗನ ಸಾವಿನ ಸುದ್ದಿ ಆ ಪತ್ರಿಕೆಯಲ್ಲಿತ್ತು. ಸೀದಾ ಮನೆಗೆ ಬಂದು ಮಹಾಲಕ್ಷ್ಮಿಗೆ ‘ನಿನ್ನ ಕನಸಿನಂತೆ ಬನ್ನಂಜೆಯಲ್ಲಿ ಒಂದು ಮರಣವಾಗಿದೆ. ಆದರೆ ಅದು ಬನ್ನಂಜೆಯವರ ಮಗನದ್ದು’ ಎಂದು ಸುದ್ದಿಯನ್ನು ಓದಿ ಹೇಳಿದೆ. ಅದಕ್ಕವಳು ಶುಷ್ಕ ಭಾವದಿಂದ ‘ಅದಲ್ಲ ಗೋವಿಂದಾಚಾರ್ಯರೇ ತೀರಿದ ಕನಸು ಬಿತ್ತು’ ಎಂದು ಸುಮ್ಮನಾದಳು. ಆದರೆ ನಿಜವಾಗಿ ಗೊಂದಲ ಉಂಟಾದದ್ದು ಮಾತ್ರ ನನಗೆ. ಇರಲಿ ಇದಕ್ಕೆ ತಲೆ ಕೆಡಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲವೆಂಬ ಭಾವದಿಂದ ಅದನ್ನು ಅಲ್ಲಿಗೇ ಬಿಟ್ಟುಬಿಟ್ಟೆ. ಈ ಘಟನೆಯಾಗಿ ಕೆಲವೇ ದಿನಗಳಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಎರಡು ಸಾವಿರದ ಇಪ್ಪತ್ತನೇ ದಶಂಬರ್ ಹದಿಮೂರನೇ ತಾರೀಕಿನಂದು ತೀರಿದರೆಂಬ ಅಸಲಿ ಸುದ್ದಿ ಬಂದಾಗ ಅಂತು ನಾವು ಮನೆಯವರೆಲ್ಲರೂ ಆಶ್ಚರ್ಯಚಕಿತರಾದದ್ದಂತು ಸತ್ಯವೆ.
ನನಗೆ ಈ ಘಟನೆ ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ. ನಾನೊಬ್ಬನೇ ಇದ್ದಿದ್ದರೆ ಇದೊಂದು ಭ್ರಮೆ ಎನ್ನಬಹದಿತ್ತೋ ಏನೊ. ಆದರೆ ನನ್ನ ಜತೆ ಮಕ್ಕಳಾದ ನವಮಿ ಮತ್ತು ಶಾರ್ವರಿಯೂ ಇವಳು ಹೇಳುತ್ತಿದ್ದ ಕನಸನ್ನು ಕೇಳಿದ್ದರಿಂದ ಭ್ರಮೆಯಾಗಲು ಸಾಧ್ಯವೇ ಇಲ್ಲ. ಹಾಗೆಂದು ಮಹಾಲಕ್ಷ್ಮಿ ಜ್ಯೋತಿಷ್ಯ ಅಥವಾ ಭವಿಷ್ಯವನ್ನು ತಿಳಿದಿರಲಿಲ್ಲ. ಅಚಾನಕ್ಕಾಗಿ ಆಕೆಗೆ ಬಿದ್ದ ಕನಸಿನ ಹಿಂದೆ ಅದ್ಯಾವ ಲೆಕ್ಕಾಚಾರವಿತ್ತೋ ಆ ದೇವರೇ ಬಲ್ಲ. ಹಾಗಾದರೆ ಇದು ತರ್ಕಕ್ಕೆ ನಿಲುಕದ್ದು ಎಂದೇ ಹೇಳಬೇಕಾಗುತ್ತದೆ. ನೀವೇನಂತೀರಿ..?
***************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ















