ಚಿತ್ಪಾವನರಿಂದ ಗರುಡ ಗರ್ವಭಂಗ
**************************
ಈ ದಿನ ಅಂದರೆ ೨೮/ ೬/ ೨೦೨೬ ನೇ ಆದಿತ್ಯವಾರ ಚಿತ್ಪಾವನ ಸಮಾಜಕ್ಕೆ ಒಂದು ಹೆಮ್ಮೆಯ ದಿನ. ಇದಕ್ಕೆ ಕಾರಣ ಈ ದಿನ ಸೂಳಬೆಟ್ಟು ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಕಲಾಭಿಮಾನಿಗಳಾದ ಚಿತ್ಪಾವನರೆ ಸೇರಿ ಪ್ರಸ್ತುತ ಪಡಿಸಿದ ಚಿತ್ಪಾವನಿ ಭಾಷೆಯ ಯಕ್ಷಗಾನ. ಕಲಾ ರಸಿಕರು ಮಾತ್ರವಲ್ಲ ಕಲಾವಿದರೂ ಹಾಗೂ ಚಿತ್ಪಾವನಿ ಭಾಷೆಯ ಅಭಿಮಾನಿಗಳೂ ಆಗಿರುವ ಹವ್ಯಾಸಿ ಹಾಗೂ ವೃತ್ತಿಪರರಾದಂಥವರ ಸಂಗಮದ ಫಲರೂಪವಾಗಿ ಒಳ್ಳೆಯ ಕಾರ್ಯಕ್ರಮವೊಂದು ಸೂಳಬೆಟ್ಟು ದೆವಸ್ಥಾನದಲ್ಲಿ ಮೂಡಿ ಬಂದಾಗ ನೂರಕ್ಕೂ ಮಿಕ್ಕಿದ ಅಭಿಮಾನಿಗಳ ವರ್ಗ ನೋಡಿ ಆನಂದಿಸಿದ್ದು ಮಾತ್ರ ಸತ್ಯ. ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಏನೆಲ್ಲ ಇರಬೇಕೊ ಅದೆಲ್ಲವೂ ಕೂಡಿ ಬಂದಾಗ ಮಾತ್ರ ಇಂಥ ಯಶಸ್ಸು ಸಿಗಬಹುದು ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ.
ಯಕ್ಷಗಾನ ಎಂದಾಗ ಒಳ್ಳೆಯ ಸಾಹಿತ್ಯ ಇರುವ ಹಾಡುಗಳು, ಸುಶ್ರಾವ್ಯವಾಗಿ ಹಾಡುವಂಥ ಹಾಡುಗಾರರು, ಉತ್ತಮ ಗುಣ ಮಟ್ಟದ ಮೃದಂಗ-ಚಂಡೆ-ಚಕ್ರ ತಾಳ ಮುಂತಾದ ಪಕ್ಕ ವಾದ್ಯಗಳು, ಪ್ರೌಢಿಮೆ ಇರುವ ಅರ್ಥಗಾರಿಕೆ, ಕಥೆಯ ಚೌಕಟ್ಟನ್ನು ಮೀರದ ವಾಕ್ಚಾತುರ್ಯ, ಅಷ್ಟೇ ಆಸಕ್ತಿಯಿಂದ ಕೇಳುವ ಶ್ರೋತೃಗಳು ಮುಂತಾದ ಪೂರಕ ವಿಷಯಗಳು ಬೇಕಾಗುತ್ತವೆ. ಅದರ ಜತೆಗೆ ಸೆಕೆಯ ಹೊರತಾದ ಸಹನೀಯ ವಾತಾವರಣ, ವಾಹನ ಓಡಾಟದಂಥ ಶಬ್ದ ಮಾಲಿನ್ಯ ರಹಿತ ಪರಿಸರ, ಸುತ್ತಲೂ ಹಚ್ಚ ಹಸುರಿನ ಸ್ವಚ್ಛ ನೋಟ.. ಹೀಗೆ ಹಲವು ವಿಷಯಗಳು ಒಂದೇ ಕಡೆ ಮೇಳೈಸಿದರೆ ಮತ್ತೆ ಕೇಳಬೇಕೇ.. ಆ ನಿಟ್ಟಿನಲ್ಲಿ ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ
ನಡೆದಂಥ ಗರುಡ ಗರ್ವ ಭಂಗ ಎಂಬ ಯಕ್ಷಗಾನ ತಾಳಮದ್ದಳೆ ಕೂಡ ಈ ಎಲ್ಲ ಸಕಾರಾತ್ಮಕತೆಯಲ್ಲಿ ಪ್ರಸ್ತುತ ಗೊಂಡು ಶ್ರೋತೃ ವರ್ಗಕ್ಕೆ ಸಂಪೂರ್ಣ ಸುಖಾನಂದವನ್ನು ಕೊಟ್ಟಿದೆ ಎಂದರೆ ತಪ್ಪಾಗಲಾರದು.
advertisement:

ಇಂದಿನ ಯಶಸ್ವಿ ಪ್ರಸ್ತುತಿಯ ಬಗ್ಗೆ ನನ್ನ ಅನಿಸಿಕೆಗಳನ್ನು ಹೇಳುವುದಾದರೆ… ಮೊದಲನೆಯದಾಗಿ (ಇಲ್ಲಿ ಮೊದಲನೆ ಎರಡನೆ ಎಂದು ಹೇಳುವಾಗ ಮೊದಲ ಪ್ರಾಶಸ್ತ್ಯ ಎರಡನೇ ಪ್ರಾಶಸ್ತ್ಯವೆಂದಲ್ಲ.. ಯಾವುದನ್ನಾದರು ಮೊದಲಾಗಿ ಗುರುತಿಸಲೇಬೇಕು. ಎಲ್ಲವನ್ನೂ ಮೊದಲು ಗುರುತಿಸಲಾಗುವುದಿಲ್ಲ ತಾನೆ…) ಫದ್ಯಗಳ ರಚನೆ. ಬಹುಷ ಚಿತ್ಪಾವನಿ ಭಾಷೆಯಲ್ಲಿ ಯಕ್ಷಗಾನದ ಇಷ್ಟು ಪದ್ಯಗಳನ್ನು ರಚಿಸಿದ್ದು ಚರಿತ್ರೆಯಲ್ಲೇ ಮೊದಲ ಬಾರಿ ಎನ್ನಬಹುದು. ಚಿತ್ಪಾವನಿ ಭಾಷೆ ಬರಿದೆ ಆಡು ಭಾಷೆಯಾಗಿಯೇ ಗುರುತಿಸಿಕೊಳ್ಳುತ್ತದೆ ಹೊರತಾಗಿ ಲಿಪಿ, ಸಾಹಿತ್ಯದಿಂದಲ್ಲ. ಆದರೆ ಇತ್ತೀಚೆಗೆ ಚಿತ್ಪಾವನಿ ಭಾಷೆಯಲ್ಲಿ ಸಾಹಿತ್ಯ ರಚನೆಗೆ ಬಹಳಷ್ಟು ಜನ ತೆರೆದುಕೊಂಡಿದ್ದಾರೆ ಎಂದರೆ ವಿನಾಶದ ಅಂಚಿನಲ್ಲಿರುವ ಚಿತ್ಪಾವನಿ ಭಾಷೆಗೆ ಆಮ್ಲಜನಕ ಕೊಟ್ಟಂತೆ ಎನ್ನಬಹುದು. ಏನೇ ಇರಲಿ ಇಲ್ಲಿ ಪ್ರಸ್ತುತ ಪಡಿಸಿದ ಹಾಡುಗಳಂತು ಚಿತ್ಪಾವನಿ ಭಾಷೆಯ ಉತ್ಕೃಷ್ಟ ಸಾಹಿತ್ಯ ಎಂದರೆ ಯಾರದ್ದೂ ವಿರೋಧವಿರಲಾರದು. ಛಂದಸ್ಸು, ದ್ವಿತೀಯಾಕ್ಷರ ಪ್ರಾಸ, ಷಟ್ಪದಿಗಳ ರಚನೆ, ಕಂದ ಪದ್ಯಗಳು, ತಾಳ-ರಾಗಗಳಲ್ಲಿ ವೈವಿಧ್ಯ.. ಆಹಾ ನಿಜವಾಗಿಯೂ ಕವಿಯಾದವನಿಗೆ ಮತ್ತು ಅದರಲ್ಲಿ ಕೃಷಿ ಮಾಡಿದವನಿಗೆ ಅದಕ್ಕಿಂತಲೂ ಚಿತ್ಪಾವನಿ ಭಾಷೆಯಲ್ಲಿ ಅಭಿಮಾನವಿದ್ದವನಿಗೆ ಮಾತ್ರ ಇದು ಸಾಧ್ಯ. ಹೀಗೆ ಯಾಕೆ ಹೇಳಿದೆನೆಂದರೆ ಕನ್ನಡದಲ್ಲಿ ಬರೆಯುವಷ್ಟು ಸುಲಭವಲ್ಲ ಚಿತ್ಪಾವನಿ ಭಾಷೆ. ಇಲ್ಲಿ ಸಂಸ್ಕೃತವನ್ನೂ ಬಹಳಷ್ಟು ಉಪಯೋಗಿಸಬೇಕಾಗುತ್ತದೆ. ನಾವು ಯಾವುದೇ ಪ್ರಾಸ ಛಂದಸ್ಸು ಇಲ್ಲದೆ ಮುಕ್ತವಾಗಿ ಒಂದು ಪದ್ಯವನ್ನು ಬರೆಯಲು ಪ್ರಾರಂಭಿಸಿದರೆ ಗೊತ್ತಾಗುತ್ತದೆ ಇದು ಎಷ್ಟು ಕಷ್ಟವೆಂದು. ಅಂಥದ್ದರಲ್ಲಿ ಈ ಪದ್ಯ ರಚನೆ ಮಾಡುವುದೆಂದರೆ.. ನೀವೇ ಯೋಚಿಸಿ. ಈ ಪ್ರಕ್ರಿಯೆಯಲ್ಲಿ ಯಶಸ್ಸನ್ನು ಗಳಿಸಿದವರು ಶ್ರೀಯುತ ವೃಕ್ಷವರ್ಧನ್ ಹೆಬ್ಬಾರ್ ಇವರು. ಆದ್ದರಿಂದ ನಾವು ಇವರನ್ನು ಅಭಿನಂದಿಸಲೇ ಬೇಕು. ಮುಂದಿನ ಎಲ್ಲ ಯಶಸ್ಸಿಗೆ ಈ ಸಾಹಿತ್ಯ ಅದೆಷ್ಟು ಅನುಕೂಲವಾಗುತ್ತದೆ ಎಂದರೆ ನಾವು ಚಿತ್ಪಾವನಿ ಪದ್ಯಗಳನ್ನು ಮೊದಲ ಬಾರಿಗೆ ಕೇಳುತ್ತೇವೆ ಎಂಬ ಭಾವವೇ ಬಾರದಷ್ಟು ಮಾತ್ರವಲ್ಲ ಕೆಲವು ಪದ್ಯಗಳು ಕನ್ನಡಕ್ಕಿಂತಲೂ ಚಿತ್ಪಾವನಿ ಭಾಷೆಯಲ್ಲೇ ಸುಂದರವಾಗಿವೆ ಎಂದು ಅನ್ನಿಸುವಷ್ಟು. ಮುಂದೆ ಹೆಚ್ಚು ವಿವರಣೆ ಬೇಕಿಲ್ಲ. ಯಾಕೆಂದರೆ ಇದು ವಿವರಿಸುವುದಕ್ಕಿಂತಲೂ ಅನುಭವಿಸುವುದೇ ಹೆಚ್ಚು ಸೂಕ್ತ.
ಮುಂದೆ ಭಾಗವತಿಕೆ ಎಂಬಲ್ಲಿಗೆ ಬಂದಾಗ ಮೊದಲು ಶರತ್ ತುಳುಪುಳೆಯವರು ಸುಶ್ರಾವ್ಯವಾಗಿ ಪ್ರಾರಂಭಿಸಿದಾಗ ಚಿತ್ಪಾವನಿ ಭಾಷೆಗೆ ಸಂಗೀತದ ಲೇಪ ಅದೆಷ್ಟು ಸೊಗಸಾಗಿ ಹೊಂದಿಬರುತ್ತದೆ ಎಂಬ ಅರಿವಾಗತೊಡಗಿತ್ತು. ಒಂದರ್ಧ ಗಂಟೆಯಷ್ಟು ಅವರಿಂದ ಗಾಯನ ಬಹಳ ಖುಷಿ ಕೊಟ್ಟಿತ್ತು. ಅಂತೆಯೇ ಇವರು ಅರ್ಥಗಾರಿಕೆಯಲ್ಲೂ ಸೈ ಎನಿಸಿಕೊಂಡು ಸಾಂಬನ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಸಫಲರಾದರೆಂದೇ ಹೇಳಬಹುದು. ದ್ವಿಪಾತ್ರದಲ್ಲಿ ಮಿಂಚಿದ ತುಳುಪುಳೆಯವರು ಎಲ್ಲರಿಗೂ ಹಿತಾನುಭವ ನೀಡಿದರೆನ್ನಬಹುದು. ನಂತರದ ಭಾಗವತಿಕೆ ಶಾಲಿನಿ ಹೆಬ್ಬಾರರಿಂದ. ಇವರ ಬಗ್ಗೆ ಕೂಡ ಹೇಳುವುದಕ್ಕಿಂತ ಕೇಳುವುದೇ ಹೆಚ್ಚು ಸುಖ ಕೊಡುತ್ತದೆ. ಆದರೂ ಇಂಥ ಒಬ್ಬ ಕಲಾವಿದೆ ಚಿತ್ಪಾವನರಲ್ಲಿದ್ದಾಳೆ ಎಂದರೆ ನಿಜವಾಗಿಯೂ ನಮ್ಮ ಹೆಮ್ಮೆ. ಅದರಲ್ಲೂ ವೈಯುಕ್ತಿಕವಾಗಿ ಹೇಳುವುದಾದರೆ ಇವಳು ನನ್ನ ಅತ್ತೆಯ ಮಗಳು ಎನ್ನುವುದು ನನಗೆ ಇನ್ನೊಂದು ಅಭಿಮಾನ. ಅಂತು ಭಾಗವತಿಕೆಯಲ್ಲಿ ಶಾಲಿನಿ ಇದ್ದಾಳೆಂದರೆ ಆ ಯಕ್ಷಗಾನದ ತೂಕವೆ ಒಂದು ಹಂತ ಮೇಲೆ ಹೋದಂತೆ. ಸುಶ್ರಾವ್ಯವಾಗಿ, ಮನಸ್ಸಿಗೆ ಹಿತವಾಗಿ, ಕೆಲವು ಕಡೆಗಳಲ್ಲಿ ಕಣ್ಣಂಚಲ್ಲಿ ನೀರನ್ನು ಬರಿಸುತ್ತ ಹಾಡಿದ ಈ ಗಾನ ನಿಜವಾಗಿಯೂ ಯಕ್ಷಗಾನವೇ ಆಗಿತ್ತು.
ಮೃದಂಗದಲ್ಲಿ ಶ್ರೇಯಸ್ ಪಾಳಂದ್ಯೆ.. ಯಕ್ಷಗಾನದ ಶ್ರೇಯಸ್ಸಲ್ಲಿ ಬಹುಮುಖ ಪ್ರತಿಭೆಯ ಈ ತರುಣನ ಪಾಲು ಕೂಡ ಬಹಳಷ್ಟು ದೊಡ್ಡದು. ಮೃದಂಗದ ನುಡಿಸುವಲ್ಲಿ ಶ್ರೇಷ್ಠ ಕಲಾವಿದರ ಸಾಲಲ್ಲಿ ನಿಲಬಲ್ಲಂಥ ಪ್ರತಿಭೆ. ಕೆಲವು ಕಡೆಗಳಲ್ಲಿ ಹಿರಿಯ ಮೃದಂಗ ವಾದಕರಾದ ವಿದ್ವಾಂಸ ಎ.ಪಿ.ಫಾಟಕರ ನೆನಪು ಬರುವಂಥ ನಡೆಗಳೆ ಇದಕ್ಕೆ ಸಾಕ್ಷಿ. ಇನ್ನು ಚಂಡೆ ವಾದನದಲ್ಲಿ ಶಿಥಿಕಂಠ ಶೆಂಡ್ಯೆ.. ಇವರು ಕೂಡ ಬಹುಮುಖ ಪ್ರತಿಭೆಯೇ. ಇವರ ಚಂಡೆ ವಾದನ ಅದೆಷ್ಟು ಗಂಭೀರವೋ ಅಷ್ಟೇ ಸೂಕ್ಷ್ಮವೂ ಇದೆ. ನಾನು ಗಮನಿಸಿದಂತೆ ಕೆಲವು ಕಡೆಗಳಲ್ಲಿ ಚಂಡೆ ವಾದನವು ಮೃದಂಗದಷ್ಟೆ ಸೂಕ್ಷ್ಮವಾಗಿ ಅಥವಾ ಕೇಳುವ ಶಬ್ದ ಮೃದಂಗದಿಂದ ಬಂದದ್ದೊ ಚಂಡೆಯಿಂದ ಬಂದದ್ದೊ ಎಂಬ ಭೇದವೇ ಇರದಷ್ಟು ಅನ್ಯೋನ್ಯತೆ ಇದೆ ಎಂದರೆ ನುಡಿಸುವಿಕೆಯಲ್ಲಿನ ಪ್ರೌಢಿಮೆಯೇ ಕಾರಣ. ಇಂಥ ಕಲಾವಿದರು ಚಿತ್ಪಾವನರೇ ಎಂಬುದು ಇನ್ನೊಂದು ಹಿರಿಮೆ. ಜತೆಗೆ ಚಕ್ರ ತಾಳ ನುಡಿಸಿದ ಯುವಕನ ಕೈ ಚಳಕವನ್ನು ಮರೆಯುವಂತಿಲ್ಲ. ಪರಸ್ಪರ ಅರಿತುಕೊಂಡ ದಂಪತಿಗಳಂತೆ, ಗೆಳೆಯರಂತೆ, ಚಂಡೆ ಮತ್ತು ಮೃದಂಗದ ಹೊಂದಾಣಿಕೆ ಇತ್ತು. ಒಟ್ಟಾರೆಯಾಗಿ ಈ ನಾದ ಯಕ್ಷಗಾನ ಮುಗಿದ ಮೇಲೆ ಕೂಡ ಕಿವಿಯೊಳಗೆ ಗುಯ್ಗುಡುತ್ತಲೇ ಇತ್ತು.
ಇನ್ನು ಮುಮ್ಮೇಳದಲ್ಲಿ ನಾರದನ ಪಾತ್ರದಲ್ಲಿ ಹಿರಿಯ ಕಲಾವಿದರಾದ ಮಹಾದೇವ ಶೆಂಡ್ಯೆಯವರ ಪ್ರಸ್ತುತಿ. ಎಂದಿನಂತೆ ಬಹಳ ಸೊಗಸಾದ ಭಾಷಾ ಬಳಕೆ. ವಿನೋದದಿಂದ ಒಡಗೂಡಿದ ನಾರದನಿಗೆ ಚಿತ್ಪಾವನಿ ಭಾಷೆಯೇ ಸೂಕ್ತ ಎನ್ನುವಷ್ಟು ಸಹಜತೆ. ನಗುಮೊಗದ ಶೆಂಡ್ಯೆಯವರನ್ನು ನೋಡುವುದೇ ಒಂದು ಖುಷಿ. ಎಲ್ಲಿಯೂ ಕಥೆಯನ್ನು ಬಿಡದೆ, ಅಪ್ರಸ್ತುತವಾಗದಂತೆ ಕಥೆಯನ್ನು ಜತೆಗೆ ನೋಡುಗರನ್ನೂ ಹಿಡಿದಿಟ್ಟು ಕೊಳ್ಳುವ ಅರ್ಥಗಾರಿಕೆ ನಾರದನೆ ಮಾತಾಡುವಷ್ಟು ಸೊಗಸಾಗಿತ್ತು. ಮಧ್ಯೆ ಮಧ್ಯೆ ಕೇಳುವ ಪ್ರಶ್ನೆಗಳು, ಎದುರಾಳಿಗೆ ಮುಜುಗರವಾಗದಂತೆ ಹೇಳುವ ಉತ್ತರಗಳು, ನಡುವೆ ಕೊಡುವ ಪಂಚ್, ನಿರರ್ಗಳ ಮಾತುಗಾರಿಕೆ ಬಹಳ ಖುಷಿ ಕೊಟ್ಟಿತು. ಮುಂದೆ ದಿನಕರ ಗೋಖಲೆಯವರ ಹನುಮಂತನ ಪಾತ್ರ. ದಿನಕರ ಗೋಖಲೆಯವರ ಅರ್ಧಾಯುಷ್ಯ ಯಕ್ಷಗಾನದಲ್ಲೇ ಕಳೆದಿರಬಹುದು. ಇದು ಅವರ ಪ್ರೌಢವಾದ ವಾಕ್ಸರಣಿ ನೋಡುವಾಗ ಅರಿವಾಗುತ್ತದೆ. ಚಿತ್ಪಾವನ ಭಾಷೆಯ ಗರಿಷ್ಠ ಮಟ್ಟದ ಪದ ಬಳಕೆಯೊಂದಿಗೆ ಎಲ್ಲರಿಗೂ ಅರ್ಥವಾಗುವಂಥ ಅರ್ಥಗಾರಿಕೆ ಇನ್ನಷ್ಟು ಕೇಳಬೇಕೆನ್ನಿಸುತ್ತಿತ್ತು. ಮಾತ್ರವಲ್ಲ ಹೊಸತಾಗಿ ಕಲಿಯುವವರಿಗೆ ಇವರ ಪ್ರಸ್ತುತಿ ಮಾರ್ಗದರ್ಶನವೆ ಎಂಬುದರಲ್ಲಿ ಸಂಶಯವಿಲ್ಲ. ಇಂಥ ಕಲಾವಿದರಿದ್ದರೆ ಚಿತ್ಪಾವನಿ ಭಾಷೆ ಯಾವ ಭಾಷೆಗೂ ಕಡಿಮೆ ಇಲ್ಲವೆಂಬ ಭಾವ ನಮ್ಮದಾಗುತ್ತದೆ.
ಇನ್ನೊಬ್ಬ ಕಲಾವಿದ ವರದ ಶಂಕರ ದಾಮ್ಲೆ. ಶ್ರೀಕೃಷ್ಣನಾಗಿ ಉತ್ತಮ ನಿರ್ವಹಣೆ. ಮೂಲತಹ ಒಳ್ಳೆಯ ವಾಗ್ಮಿಗಳಾದ ಇವರು ಕೃಷ್ಣನ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಪೀಠಿಕೆಯಿಂದ ತೊಡಗಿ ಕೊನೆವರೆಗೂ ಇವರು ಎಲ್ಲ ಕಲಾಭಿಮಾನಿಗಳಿಗೂ ಕೃಷ್ಣನ ಎಲ್ಲ ಆಯಾಮಗಳನ್ನು ತೋರಿಸಿಕೊಡುವಲ್ಲಿ ಸಫಲರಾಗಿದ್ದಾರೆ ಎನ್ನಬಹುದು. ಯಕ್ಷಗಾನದ ಒಟ್ಟು ಸೌಂದರ್ಯದಲ್ಲಿ ಇವರ ಕೊಡುಗೆಯೂ ಬಹಳಷ್ಟಿದೆ. ಬಲರಾಮನಾಗಿ ಮುಂಡಾಜೆಯ ನಾರಾಯಣ ಫಡ್ಕೆಯವರು ಖುಷಿಯನ್ನು ಕೊಟ್ಟರು. ಇವರು ಕನ್ನಡದಲ್ಲಿ ಹೆಚ್ಚು ಅರ್ಥಗಾರಿಕೆ ಮಾಡಿದ್ದರಿಂದ ಹಾಗೂ ಅವರ ವೃತ್ತಿಯಲ್ಲಿ ಕನ್ನಡವೇ ಪ್ರಧಾನವಾದ್ದರಿಂದ ಮಾತಾಡುವ ಲಹರಿಯಲ್ಲಿ ಕೆಲವೊಮ್ಮೆ ಕನ್ನಡ ಶಬ್ದಗಳು ಬಂದದ್ದೂ ಇದೆ (ಇದು ಅಕ್ಷಮ್ಯವಲ್ಲ. ಅಥವಾ ಕೊರತೆ ಎಂದು ಹೇಳಿದ್ದಲ್ಲ. ನನ್ನ ಗಮನಕ್ಕೆ ಬಂದದ್ದನ್ನು ಹೇಳಿದೆ ಅಷ್ಟೆ.) ಎನ್ನುವುದನ್ನು ಬಿಟ್ಟರೆ ಒಟ್ಟಾರೆಯಾಗಿ ಉನ್ನತ ಶ್ರೇಣಿಯ ಕಲಾವಿದರಾಗುವ ಎಲ್ಲ ಲಕ್ಷಣಗಳೂ ಫಡ್ಕೆಯವರಲ್ಲಿವೆ. ಅವರ ಭಾಷಣಗಳನ್ನು ಬಹಳಷ್ಟು ಕೇಳಿದ್ದೇನೆ ಒಳ್ಳೆಯ ಮಾತುಗಾರ ಮಾತ್ರವಲ್ಲ ಒಳ್ಳೆಯ ನಿರೂಪಣೆ ಮಾಡುವವರು ಕೂಡ. ಅಂತು ಬಲರಾಮನ ಬಲವನ್ನು ತೋರಿಸಿ ಸೈ ಸೈ ಎನಿಸಿಕೊಂಡಿದ್ದಾರೆ ಎಂದೇ ಹೇಳಬಹುದು.
ಈ ಯಕ್ಷಗಾನದ ಇನ್ನೊಂದು ವೈಶಿಷ್ಟ್ಯ ಎಂದರೆ ಮಾತೆಯರ ಆಗಮನ.. ಬಹಳಷ್ಟು ಆನಂದದಾಯಕವಾದ ವಿಷಯ. ಅರ್ಥ ಮಾತಾಡುವ ಮಹಿಳೆಯರು ಬೆರಳೆಣಿಕೆಯಷ್ಟು ಮಂದಿ ಇದ್ದಾರೆ ಅದರಲ್ಲೂ ಚಿತ್ಪಾವನಿ ಭಾಷೆಯಲ್ಲಿ ಅರ್ಥ ಹೇಳುವುದೆಂದರೆ ಅದು ವಿಶೇಷವೇ. ಅಂಥ ವಿಶೇಷಣವುಳ್ಳ ಮೂವರು ಮಾತೆಯರು ಯಕ್ಷಗಾನದ ಸೌಂದರ್ಯಕ್ಕೆ ಕಲಶವಿಟ್ಟಂತೆ ಎಂದು ಹೇಳಬಹುದು. ವನ ಪಾಲಕನಾಗಿ ಸುಗುಣಾ ಭಿಡೆಯವರು ಮಿಂಚಿದರು. ಮಾತುಗಾರಿಕೆಯಲ್ಲಿ ನಿರ್ಭೀತಿ, ಹಾವ ಭಾವ, ಸಣ್ಣದಾದ ತಮಾಷೆ, ಪ್ರಸ್ತುತ ವಿದ್ಯಮಾನಗಳೊಡನೆ ಪಾತ್ರದ ಬೆಸುಗೆ, ಎದುರಾಳಿ ಯಾರೆ ಇರಲಿ ತಾನು ವನಪಾಲಕನಾಗಿ ಶ್ರೇಷ್ಠ ನಿರ್ವಹಣೆಗೆ ಭಿಡೆ ಸೋದರಿಗೆ ನಮಿಸಲೇ ಬೇಕು. ಗರುಡನಾಗಿ ಸುಮಿತ್ರಾ ದಾಮ್ಲೆ ಮತ್ತು ಸತ್ಯಭಾಮೆಯಾಗಿ ರಕ್ಷಾ ದಾಮ್ಲೆ ಅತ್ಯುತ್ತಮ ನಿರ್ವಹಣೆ. ಎಲ್ಲಕ್ಕಿಂತ ಖುಷಿಯಾದ ವಿಚಾರವೆಂದರೆ ಈ ರಂಗಕ್ಕೆ ಮಹಿಳೆಯರ ಆಗಮನ. ಚಿತ್ಪಾವನರಲ್ಲಿ ಕಲಾವಿದರಿಗೆ ಎಂದಿಗೂ ಕೊರತೆ ಇಲ್ಲ ಎನ್ನುವದು ಸಾರ್ವಕಾಲಿಕ ಸತ್ಯ. ಅವಕಾಶದ ಕೊರತೆಯಿಂದ ಮುಂದೆ ಬಾರದೆ ಇರುವ ಪ್ರತಿಭೆಗಳು ಅದೆಷ್ಟಿವೆಯೊ ದೇವರೆ ಬಲ್ಲ. ಎಲ್ಲರಿಗೂ ಅವಕಾಶ ಸಿಕ್ಕಿದರೆ ಇಂಥ ಕೂಟಗಳನ್ನು ಪ್ರತಿಯೊಂದು ವಠಾರದಲ್ಲಿ ಮಾಡುವಷ್ಟು ಸಂಖ್ಯೆಯಂತು ನಮ್ಮಲ್ಲಿದೆ ಎನ್ನುವುದಕ್ಕೆ ಸಂಶಯವೇ ಇಲ್ಲ.
ಇದಕ್ಕೆ ಪೂರಕವಾಗಿ ಧ್ವನಿವರ್ಧಕ ವ್ಯವಸ್ಥೆ, ತಾಳ್ಮೆಯ ಮೂರ್ತಿಯಾದ ದಿನೇಶ ಅಭ್ಯಂಕರ್ ಇವರಿಂದ ಉತ್ತಮ ಲಘು ಉಪಹಾರದ ವ್ಯವಸ್ಥೆ.. ಹೀಗೆ ಬಂದವರೆಲ್ಲ ಮಳೆಗಾಲದ ಈ ಒಂದು ಸುಂದರ ಸಂಜೆಯನ್ನು ಅನುಭವಿಸಿದರು ಎನ್ನಬಹುದು. ಬಾರದೆ ಇದ್ದವರು ಮಾತ್ರ ಈ ಅವಕಾಶವನ್ನು ಖಂಡಿತ ಕಳಕೊಂಡಂತೆಯೆ.. ಹಾಗಾದರೆ ಇಡೀ ಕಾರ್ಯಕ್ರಮದಲ್ಲಿ ನ್ಯೂನತೆಯೇ ಇರಲಿಲ್ಲವೇ ಎನ್ನುವವರೂ ಇಲ್ಲದೆ ಇರಲಿಕ್ಕಿಲ್ಲ. ಶ್ರೀಕೃಷ್ಣ ಪರಮಾತ್ಮನಿದ್ದ ಕಾಲದಲ್ಲೂ ಸವ್ಯ ಅಪಸವ್ಯಗಳು ಇದ್ದವು. ಆದ್ದರಿಂದ ಮಾನವರಾದ ನಾವು ಆಯೋಜಿಸಿದ ಕಾರ್ಯಕ್ರಮದಲ್ಲಿ ನ್ಯೂನತೆಗಳು ಇರುವುದು ಸಹಜವೆ. ಆದರೆ ಅದೆಲ್ಲ ದೊಡ್ಡ ಶ್ರೇಯಸ್ಸಿನ ಮುಂದೆ ಗೌಣವೆನ್ನಬಹುದು. ಯಾಕೆಂದರೆ ಯಾವುದು ನ್ಯೂನತೆ ಎನ್ನುವುದು ಆಯೋಜಕರಿಗೆ ತಿಳಿದರೆ ಸಾಕು. ಮುಂದಿನ ಬಾರಿ ಸರಿ ಮಾಡಿಕೊಳ್ಳುತ್ತಾರೆ. ತಿಳಿಯದಿದ್ದರೆ ತಿಳಿಸಿಯೂ ಉಪಯೋಗವಿಲ್ಲ. ಏನೇ ಇರಲಿ ಮುಂದಿನ ಕಾರ್ಯಕ್ರಮದ ನಿರೀಕ್ಷೆಯಲ್ಲಿ…..
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ















