Saturday , 25 July 2026

ಅಳಂಬ (Alamba)..ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ. – ಭಾಗ-೧,೨,೩,೪,೫,೬,೭,೯,೧೦,೧೧,೧೨,೧೩,೧೪

ಅಳಂಬ… ೧೪
*************
ಅಷ್ಟರಲ್ಲಿ ನಾಯಿಗಳು ಬೊಗಳಲಾರಂಭಿಸಿದವು. ಹತ್ತಾರು ನಾಯಿಗಳ ವಿವಿಧ ಲಯ ಶುೃತಿಯ ಬೊಗಳುವಿಕೆಗೆ ಒಂದು ಕ್ಷಣ ಮೂವರೂ ಅಂಗಳದ ಪ್ರವೇಶಕ್ಕಿರುವ ಸರಗೋಲಿನ (ತುಳುವಿನಲ್ಲಿ ಉರ್ವೊಳು ಎನ್ನುತ್ತಾರೆ) ಹತ್ತಿರ ಭೀತರಾಗಿ ನಿಂತಾಗ ನಾಯಿಗಳನ್ನು ಹಚ್ ಹಚ್ ಎಂದು ಗದರಿಸುತ್ತ ಹುಡುಗನೊಬ್ಬ ಮನೆಯೊಳಗಿಂದ ಹೊರಬಂದು ನಿಂತಂಥ ಮೂವರನ್ನು ನೋಡಿ ಒಳಗೆ ಬರುವಂತೆ ಸೂಚಿಸಿದ. ಯಜಮಾನನ ಗದರಿಕೆಗೆ ನಾಯಿಗಳು ಆಗಂತುಕರ ಕಡೆಗೆ ನೋಡುತ್ತ ನೋಡುತ್ತ ಅಸಮಾಧಾನದಿಂದ ಗುರ್ ಗುರ್ ಎನ್ನುತ್ತಲೆ ದೂರಕ್ಕೆ ಹೋಗಲಾರಂಭಿಸಿದವು. ನೇರವಾಗಿ ಮೂವರೂ ವಿಶಾಲವಾದ ಅಂಗಳವನ್ನು ದಾಟಿ ಮನೆಯ ಜಗುಲಿಯ ಮೇಲೆ ಕುಳಿತುಕೊಂಡರು. ಅಷ್ಟರಲ್ಲಿ ಮನೆಯ ಯಜಮಾನರಾದ ನೀಲಯ ಗೌಡರು ತಲೆಯ ಮುಂಡಾಸನ್ನು ತೆಗೆದು ಮೈಮೇಲಿನ ಬೆವರನ್ನು ಒರೆಸುತ್ತ ಬಂದಂಥವರಲ್ಲಿ ರಾಮಯ್ಯ ಗೌಡರನ್ನುದ್ದೇಶಿಸಿ “ಕೂತುಕೊಳ್ಳಿ.. ಜಗಲಿ ಯಾಕೆ ಒಳಗೇ ಬನ್ನಿ” ಎಂದು ಉಪಚರಿಸಿದರು. ರಾಮಯ್ಯ ಗೌಡ್ರು “ಇಲ್ಲ ಇಲ್ಲಿಯೇ ಒಳ್ಳೆ ಗಾಳಿ ಬರುತ್ತದೆ ಅಲ್ಲದೆ ಹಲಸಿನ ಮರದ ನೆರಳು ಕೂಡ ಬಹಳ ಹಿತವಾಗಿದೆ” ಎಂದು ಜಗಲಿಯಲ್ಲೇ ಕೂತಾಗ ನೀಲಯ ಗೌಡರು ಒಳಗೆ ಹೋಗಿ ಬೆಲ್ಲದ ಜತೆಗೆ ತಾಮ್ರದ ಚೊಂಬಲ್ಲಿ ತಣ್ಣನೆಯ ನೀರನ್ನು ತಂದು ಅತಿಥಿಗಳ ಮುಂದಿಟ್ಟರು. ಆದಿತ್ಯ ಮತ್ತು ಕಾರ್ತಿಕ ಬೆಲ್ಲದ ತುಂಡಿನೊಡನೆ ತಣ್ಣನೆಯ ನೀರನ್ನು ದೇವತೆಗಳು ಅಮೃತವನ್ನು ಕುಡಿದಂತೆ ಕುಡಿದಾಗ ಬೆಟ್ಟವನ್ನು ಹತ್ತಿ ಬಂದಂಥ ಸುಸ್ತು ಕಡಿಮೆಯಾಗತೊಡಗಿತ್ತು. ಎಲ್ಲರೂ ಸಾವರಿಸಿಕೊಂಡ ಮೇಲೆ ಅವರೊಡನೆ ನೀಲಯ ಗೌಡರು ಸೇರಿಕೊಂಡರು. ರಾಮಯ್ಯ ಗೌಡರು ಕಾರ್ತಿಕ ಮತ್ತು ಆದಿತ್ಯರ ಪರಿಚಯವನ್ನು ಮಾಡಿ ಇವರು ನಿಮ್ಮ ಊರನ್ನು ನೋಡಬೇಕೆಂಬ ಆಸೆಯಿಂದ ಬಂದಿದ್ದಾರೆ ಎಂದಾಗ ನೀಲಯ ಗೌಡರಿಗೆ ಖುಷಿಯಾಗಿತ್ತು.

“ಈ ಹಳ್ಳಿಗೆ ಈ ರೀತಿ ಯಾರೂ ಬರುವುದಿಲ್ಲ. ನಿಮ್ಮ ಆಸಕ್ತಿ ಒಳ್ಳೆಯದು. ನಮಗೂ ನಿಮ್ಮ ಪರಿಚಯವಾದದ್ದು ಖುಷಿಯಾಗಿದೆ”

ಹಿರಿಯನಾದ ಕಾರ್ತಿಕನು ಗೌಡರನ್ನುದ್ದೇಶಿಸಿ “ನಮಸ್ಕಾರ ಗೌಡ್ರೆ. ನಾನು ಕಾರ್ತಿಕ ಇವನು ನನ್ನ ಚಿಕ್ಕಪ್ಪನ ಮಗ ಆದಿತ್ಯ ಎಂದು ಹೆಸರು. ನಾವು ಇದೇ ಗ್ರಾಮದ ನೆಲ್ಲಿತಡ್ಕ ಎಂಬಲ್ಲಿ ವಾಸಿಸುವವರು. ಫಂಜಾಲಿನ ಬಗ್ಗೆ ನಮಗೆ ಸಣ್ಣಂದಿನಿಂದಲೂ ಕುತೂಹಲವಿತ್ತು. ನಮ್ಮ ತಂದೆ, ಅಜ್ಜಿ ಇಲ್ಲಿಯ ವಿಷಯಗಳನ್ನು ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಸುತ್ತ ಮುತ್ತ ಗುಡ್ಡಗಳು, ಒಂದೇ ಮನೆಯಲ್ಲಿ ನೂರಾರು ಜನರ ವಾಸ, ಪರಿಶುದ್ಧವಾದ ಪರಿಸರ, ಹೇರಳವಾದ ನೀರು, ಕಪಟವರಿಯದ ಮುಗ್ಧ ಜನರು, ಆತ್ಮಾಭಿಮಾನದ ಜತೆ ಸ್ವಾವಲಂಬಿಗಳಾದ ದೃಢಕಾಯದ ಜನಾಂಗ.. ಹೀಗೆ ಅನೇಕ ವಿಷಯಗಳನ್ನು ಹಿರಿಯರಿಂದ ಕೇಳಿದಾಗ ಎಂದಾದರು ಒಂದು ದಿನ ನಿಮ್ಮಲ್ಲಿಗೆ ಬರಲೇಬೇಕೆಂದು ಮನಸ್ಸಲ್ಲಿ ಸಂಕಲ್ಪ ಮಾಡಿಕೊಂಡಿದ್ದೆವು. ಅಂತೆಯೇ ನಮಗೆ ಆತ್ಮೀಯರಾದ ರಾಮಯ್ಯ ಗೌಡರ ಜತೆಗೆ ಇವತ್ತು ನಿಮ್ಮ ಈ ಭೂಮಿಯನ್ನು ನೋಡುವ ಭಾಗ್ಯ ನಮಗೆ ಒದಗಿ ಬಂತು.”

“ಒಳ್ಳೆಯ ವಿಷಯ. ನೀವು ತಿಳಿದುಕೊಂಡದ್ದು ಸರಿ. ಇದೇ ಮನೆಯಲ್ಲಿ ನಾವು ಸಣ್ಣವರಿರುವಾಗ ಎಪ್ಫತ್ತೈದರಷ್ಟು ಜನರಿದ್ದೆವು. ಮತ್ತೆ ನೀವಂದಂತೆ ನೂರೈವತ್ತರಷ್ಟು ಜನರಿದ್ದದ್ದೂ ಹೌದು ಆದರೆ ಅದು ನಾವು ಹುಟ್ಟುವುದಕ್ಕೂ ಹಿಂದಿನ ಕಾಲ ಅಂದರೆ ಸಾಧಾರಣ ನೂರು ವರ್ಷಕ್ಕೂ ಹಿಂದೆ ಇರಬಹುದು.”

ತುಂಡು ಪಂಚೆಯೊಂದು ಸೊಂಟಕ್ಕೆ ಅಂಟಿಕೊಂಡಂತಿದ್ದುದರ ಹೊರತು ಬರಿದೆ ಮೈಯಲ್ಲಿ ಆಜಾನು ಬಾಹುವಿನಂತಿದ್ದ ನೀಲಯ ಗೌಡರು ಆದಿತ್ಯ ಮತ್ತು ಕಾರ್ತಿಕನನ್ನು ಆಕರ್ಷಿಸುವುದರ ಜತೆಗೆ ಅವರ ಮಾತಿನ ಮುಗ್ಧತೆ, ಕಪಟವರಿಯದ ಆತ್ಮಾಭಿಮಾನದ ಗಾಂಭೀರ್ಯ, ಯಾರನ್ನೂ ಹಿಡಿದು ನಿಲ್ಲಿಸುವಂಥ ತೀಕ್ಷ್ಣ ಕಣ್ಣುಗಳು, ಆರೋಗ್ಯವಂತ ಕ್ರೀಡಾಪಟುವಿಗೆ ಇರುವಂಥ ಆರಡಿ ಎತ್ತರದ ನೀಳ ಕಾಯ, ಕೃಷ್ಣ ವರ್ಣ, ಎಲೆ ಅಡಿಕೆ ತಿಂದು ಕೆಂಪಾದರೂ ಆಕರ್ಷಕವಾದ ದಂತ ಪಂಕ್ತಿ, ಮಾತಾಡಿದರೆ ಇನ್ನೂ ಕೇಳುತ್ತಿರಬೇಕು ಎನ್ನುವಂಥ ಮಾತಿನ ಓಘ.. ಇಂಥ ಅನೇಕ ವಿಷಯಗಳಿಂದ ಕಾರ್ತಿಕನಿಗೂ ಆದಿತ್ಯನಿಗೂ ಗೌರವಾನ್ವಿತರಂತೆ ಕಂಡದ್ದು ವಿಶೇಷವಲ್ಲ.

“ಗೌಡ್ರೆ ನಿಮಗೆ ತೊಂದರೆ ಇಲ್ಲದಿದ್ದರೆ ನಿಮ್ಮ ಜೀವನಾನುಭವದ ಕೆಲವು ವಿಷಯಗಳನ್ನು ನಮ್ಮೊಡನೆ ಹಂಚಿಕೊಳ್ಳಬಹುದೇ”

ಎಂದು ಕಾರ್ತಿಕನು ವಿನಮ್ರವಾಗಿ ಕೇಳಿದನು. ಅದಕ್ಕೆ ಗೌಡರು ಕೂಡ ಅಷ್ಟೇ ವಿನಯದಿಂದ

“ಅದಕ್ಕೇನಂತೆ ಹೇಳುತ್ತ ಹೋದರೆ ಬಹಳಷ್ಟು ಇದೆ. ನೀವು ಸಣ್ಣವರು ನಿಮಗೆ ಈಗಿನ ಪ್ರಪಂಚದ ಅರಿವಿದೆ. ರಾಮಯ್ಯ ಗೌಡರಿಗಾಗಲಿ ಅಥವಾ ನಿಮ್ಮ ಮನೆಯ ಹಿರಿಯರಿಗಾಗಲಿ ನಮ್ಮ ಹಿಂದಿನ ಜೀವನದ ಅರಿವು ಇರಲೂ ಬಹುದು. ಆದರೆ ಅಂದಿನಿಂದ ಇಂದಿನವರೆಗೂ ನಮ್ಮಲ್ಲಿ ನಮ್ಮ ಕ್ಷೇಮ ಸಮಾಚರಾಗಳನ್ನಾಗಲಿ, ಕಷ್ಟ ಸುಖಗಳನ್ನಾಗಲಿ, ನಮ್ಮ ಸ್ನೇಹವನ್ನಾಗಲಿ ಕೇಳಿಕೊಂಡು ಯಾರೂ ಬಂದದ್ದಿಲ್ಲ. ಅಥವಾ ನಾವು ಕೂಡ ವ್ಯವಹಾರದ ಹೊರತು ಇತರರ ಮನೆಗಳಿಗೆ ಹೋಗುತ್ತಲೂ ಇರಲಿಲ್ಲ. ಕಾರಣಗಳು ಅನೇಕವಿರಬಹುದು. ಅದರಲ್ಲಿ ನಮ್ಮ ಅಸ್ತಿತ್ವವನ್ನು ಮನಗಂಡು ನಮ್ಮನ್ನೇ ನೋಡಬೇಕೆಂಬ ಆಸಕ್ತಿಯಿಂದ ಇಲ್ಲಿವರೆಗೆ ನಡೆದುಕೊಂಡು ಬಂದದ್ದಕ್ಕೆ ನನಗೆ ಬಹಳ ಖುಷಿಯಾಗುತ್ತಿದೆ. ಅದರಲ್ಲೂ ನಿಮ್ಮಂಥ ಸಣ್ಣ ಪ್ರಾಯದ ಹುಡುಗರಿಗೆ ಇಂಥ ಮನಸ್ಸಿದೆ ಎಂದರೆ ನಿಜವಾಗಿಯೂ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ.”

“ಹೌದು ಗೌಡ್ರೆ ಇವರು ಇಬ್ಬರೂ ಬಹಳ ಗುಣವಂತ ಹುಡುಗರು. ಮಾತ್ರವಲ್ಲ ಎಲ್ಲದರಲ್ಲೂ ಕುತೂಹಲವಿರುವವರು. ನಾನು ಇವರಲ್ಲಿ ಆಗಾಗ್ಗೆ ಕೆಲಸಕ್ಕಾಗಿ ಅಥವಾ ಬೇರೇನಾದರು ಆರ್ಥಿಕ ವಿಚಾರಗಳಿಗೆ ಹೋಗುತ್ತಲೇ ಇರುತ್ತೇನೆ. ಇವರು ತಮ್ಮ ಹಿರಿಯರಿಂದ ನಿಮ್ಮ ಫಂಜಾಲಿನ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡ ದಿನದಿಂದ ನನ್ನಲ್ಲಿ ಹಲವಾರು ಸಲ ಫಂಜಾಲನ್ನು ನೋಡಬೇಕೆಂದು ಒತ್ತಾಯಿಸುತ್ತಲೇ ಇದ್ದರು. ನೋಡಿ ಕಾಲ ಇಂದು ಕೂಡಿ ಬಂದಿದೆ.” ಎಂದು ರಾಮಯ್ಯ ಗೌಡರು ಈ ಭೇಟಿಯ ಹಿನ್ನೆಲೆಯನ್ನು ವಿವರಿಸಿದರು.

ನೀಲಯ್ಯ ಗೌಡರು ಮಗನನ್ನು ಕರೆದು ತೋಟಕ್ಕೆ ಹೋಗಿ ನಾಲ್ಕು ಎಳನೀರನ್ನು ತರುವಂತೆ ಸೂಚಿಸಿದರು. ಅಷ್ಟರಲ್ಲಿ ಕಾರ್ತಿಕನು “ಪರವಾಗಿಲ್ಲ ಗೌಡ್ರೆ. ನಿಮಗ್ಯಾಕೆ ತೊಂದರೆ” ಎಂದಾಗ “ತೊಂದರೆ ಏನಿಲ್ಲ. ನೀವು ಅಷ್ಟು ದೂರದಿಂದ ನಮ್ಮ ಮೇಲೆ ಅಭಿಮಾನದಿಂದ ಬಂದಿದ್ದೀರಿ. ನಮ್ಮ ಮನೆಗೆ ಬಂದಂಥ ಅತಿಥಿಗಳನ್ನು ಅವರವರ ಸಂಪ್ರದಾಯಕ್ಕೆ ಉಚಿತವಾಗಿ ಸತ್ಕರಿಸುವುದು ನಮ್ಮ ಧರ್ಮ.” ಎಂದು ಹೇಳಿದಾಗ ಕಾರ್ತಿಕನಿಗೆ ವಾಪಸು ಹೇಳಲು ಏನೂ ಉಳಿದಿರಲಿಲ್ಲ. ಮತ್ತೊಮ್ಮೆ ಫಂಜಾಲಿನ ಗತ ಕಾಲದ ವಿಚಾರಗಳ ಬಗ್ಗೆ ಪರಸ್ಪರ ಮಾತು ಹೊರಳಿತು.

“ಇಲ್ಲಿ ಹುಲಿ ಕರಡಿ ಮುಂತಾದ ಪ್ರಾಣಿಗಳು ನಿಮಗೆ ಕಾಣ ಸಿಗುತ್ತವೆಯೋ ಅಥವಾ ಅದರಿಂದ ಏನಾದರೂ ಅಪಾಯಗಳು ಆದದ್ದಿದೆಯೊ” ಎಂದು ಕಾರ್ತಿಕನ ಕುತೂಹಲಕಾರಿಯಾದ ಪ್ರಶ್ನೆಗೆ ನೀಲಯ ಗೌಡರು ನಿಟ್ಟುಸಿರೊಂದನ್ನು ಬಿಟ್ಟು ಮುಗುಳ್ನಗೆಯೊಂದಿಗೆ ತಮ್ಮ ಅನುಭವವನ್ನು ವಿವರಿಸಲು ಮುಂದಾದರು. ಅಷ್ಟರಲ್ಲಿ ನೀಲಯ್ಯ ಗೌಡರ ಮಗ ಎಳನೀರನ್ನು ತಂದಿಟ್ಟನು. ಕೆಂಬಣ್ಣದ ಎರಡು ಕೈಯಲ್ಲೂ ಹಿಡಿಯಬೇಕಾದಂಥ ಬೃಹತ್ ಗಾತ್ರದ ಎಳನೀರು ನೋಡುವಾಗಲೆ ಬಾಯಾರಿಕೆ ಇನ್ನೂ ಹೆಚ್ಚಾದಂತೆ ಅನ್ನಿಸುವ ಭಾವ ಬಂದದ್ದಂತು ಸುಳ್ಳಲ್ಲ. ಲೀಟರಿನಷ್ಟು ಇದ್ದಂಥ ಸಿಹಿಯಾದ ನೀರು, ನೀರು ದೋಸೆಯಂತಿದ್ದ ತೆಂಗಿನ ಒಳಪದರ ಇದೆಲ್ಲವೂ ಉದರ ಸೇರಿದಾಗ ಬಾಯಾರಿಕೆಯೊಡನೆ ಹಸಿವೂ ಇಲ್ಲದಂತಾಗಿ ಹೊಸ ಲವಲವಿಕೆ ಎಲ್ಲರಲ್ಲೂ ಉಂಟಾಗಿತ್ತು.
ಎಳನೀರನ್ನು ಕುಡಿದು ಮತ್ತೆ ನೀಲಯ್ಯ ಗೌಡರ ಮಾತುಗಳನ್ನು ಕೇಳಲು ಎಲ್ಲರೂ ತಯಾರಾದರು.. ಓದಿ… ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ.
****************************

(ಮೇಲಿನ ಪ್ರಕೃತಿಯ ಭಾವಚಿತ್ರ ಇವತ್ತಿನ ಫಂಜಾಲಿನ ನೈಜತೆಯ ಸೊಬಗನ್ನು ತೋರಿಸುತ್ತದೆ. ಈ ಕಾದಂಬರಿಗಾಗಿಯೇ ಅಲ್ಲಿಗೆ ಹೋಗಿ ಮೊಬೈಲಿನಲ್ಲಿ ಸೆರೆ ಹಿಡಿದ ದೃಶ್ಯ. ಫಂಜಾಲಿನ ಸೊಬಗು ಅದನ್ನು ನೋಡಿದವರಿಗೆ ಮಾತ್ರ ತಿಳಿದೀತು… ಪ್ರಕೃತಿ ಪ್ರಿಯರಿಗೆ ಇಂಥ ಹಲವಾರು ದೃಶ್ಯಗಳು ಇಲ್ಲಿವೆ..)

————————————————————————————————————————————————————————————————————

ಅಳಂಬ.. ೧೩
************
ಕಾರ್ತಿಕನಿಗೆ ಹುಲಿಯ ಹೆದರಿಕೆ ಇರಲಿಲ್ಲ. ಆದರೆ ರಾಮಯ್ಯ ಗೌಡ ಹೇಳುವುದರಲ್ಲಿ ಸತ್ಯವಿದೆ ಎಂಬುದನ್ನು ಒಪ್ಪಿಕೊಂಡ. ಮುಂದಿನ ಶನಿವಾರ ನಾರಾವಿಗೆ ಹೋಗಿ ಬೇಕಾದ ಸಾಮನುಗಳನ್ನು ಖರೀದಿಸಿ ಆದಿತ್ಯವಾರ ಫಂಜಾಲಿಗೆ ಹೋಗುವುದೆಂದು ರಾಮಯ್ಯ ಗೌಡ ಮತ್ತು ಕಾರ್ತಿಕ ನಿರ್ಧರಿಸಿದರು. ರಾಮಯ್ಯ ಗೌಡನ ಜತೆಗೆ ಕಾರ್ತಿಕನೂ ನಾರಾವಿ ಸಂತೆಗೆ ಹೋಗಿ ತನಗೂ ಮನೆಗೂ ಬೇಕಾದ ಸಾಮಾನುಗಳನ್ನು ತರುವುದೆಂದೂ ನಿರ್ಧಾರವಾಯಿತು. ಪ್ರತಿ ವಾರವು ಅಲ್ಲದಿದ್ದರೂ ತಿಂಗಳಿಗೊಂದೆರಡು ಸಾರಿ ಕಾರ್ತಿಕನೂ ಅಳಂಬಕ್ಕಾಗಿ ಸಂಕ್ರೇ ಗೌಡರ ಮನೆಯವರೊಡನೆ ಸಂತೆಗೆ ಹೋಗಿ ಬರುವ ಕ್ರಮವಿತ್ತು. ತುಳು ಜನರಂತೆ ತಾನು ಕೂಡ ತಲೆ ಹೊರೆಯಲ್ಲಿ ಬೇಕಾದಂಥ ಸಾಮಾನುಗಳನ್ನು ತರುವುದು ಹಿಂದಿನಿಂದಲೂ ಇದ್ದಂಥ ರೂಢಿಯಾಗಿತ್ತು.

ಅಂತೆಯೇ ಶನಿವಾರದಂದು ಪೂರ್ವ ತಯಾರಿ ಮಾಡಿಕೊಂಡು ಆದಿತ್ಯವಾರ ಬೆಳಗ್ಗೆ ರಾಮಯ್ಯ ಗೌಡ, ಕಾರ್ತಿಕ, ಜತೆಗೆ ನೆರೆಕರೆಯವನಾದ ಕಾರ್ತಿಕನ ಚಿಕ್ಕಪ್ಪ ಗೋಪಾಲ ಹೆಬ್ಬಾರರ ಮಗನಾದ ಆದಿತ್ಯ ಹೀಗೆ ಮೂವರು ಫಂಜಾಲನ್ನು ಗುರಿಯಾಗಿಸಿಕೊಂಡು ಕುತೂಹಲ ಮಿಶ್ರಿತ ಭಾವದಿಂದ ಪಶ್ಚಿಮ ಘಟ್ಟಗಳನ್ನು ಹತ್ತ ತೊಡಗಿದರು. ಹಸಿವಾದಾಗ ತಿನ್ನಲೆಂದು ಅವಲಕ್ಕಿ-ಬೆಲ್ಲ-ತೆಂಗಿನ ಕಾಯಿ ಜತೆಗೆ ರಕ್ಷಣೆಗೆಂದು ಕೈಯಲ್ಲೊಂದು ಹರಿತವಾದ ಕತ್ತಿ-ದೊಣ್ಣೆಯನ್ನೂ ಇಟ್ಟುಕೊಂಡಿದ್ದರು. ಹೀಗೆ ದಾರಿಯಲ್ಲಿ ಮೊದಲಾಗಿ ಸಿಗುವಂಥ ಕುಳ್ಳಾಲಿಗೆ ಕಾರ್ತಿಕನಾಗಲಿ ಆದಿತ್ಯನಾಗಲಿ ಹಲವಾರು ಸಲ ಬಂದು ಹೋಗಿದ್ದರಿಂದ ಎಲ್ಲವೂ ಪರಿಚಯದ ಜಾಗಗಳೇ ಆಗಿದ್ದವು. ಆದರೆ ನಿಜವಾದ ಪಶ್ಚಿಮ ಘಟ್ಟಗಳ ಪರಿಚಯವಾಗಬೇಕಾದರೆ ಕುಳ್ಳಾಲು ದಾಟಿ ಮುಂದೆ ಹೋಗಬೇಕು..

ಮಧ್ಯಾಹ್ನವಾದರೂ ಬಿಸಿಲು ನೆಲವನ್ನು ಮುಟ್ಟದಿರುವಂಥ ದಟ್ಟವಾದ ಮರಗಳು, ನೋಡಿಯೆ ಅನುಭವಿಸಬೇಕೆನ್ನುವ ಅಗಾಧವಾದ ಹಾಗೂ ಶತಮಾನಗಳಿಗೆ ಸಾಕ್ಷಿಯಾದ ಹೆಮ್ಮರಗಳು, ಅಂಥ ಹೆಮ್ಮರಗಳನ್ನು ಸದಾ ಆಶ್ರಯಿಸಿರುವ ಬಳ್ಳಿಗಳು, ಅಲ್ಲಲ್ಲಿ ಅಲ್ಲಲ್ಲಿ ಸಹಜವಾಗಿಯೋ ಗಾಳಿ ಮಳೆಗೋ ಬಿದ್ದಂಥ ಮರದ ಟೊಂಗೆಗಳು, ದೊಡ್ಡ ದೊಡ್ಡ ಕಲ್ಲುಗಳೊಳಗೆ ಪ್ರಕೃತಿ ಸಹಜವಾದ ಗವಿಯಂತಿರುವ ಮಾಟೆಗಳು, ಹಾವುಗಳು ತಿರುಗಿದುದಕ್ಕೆ ಸಾಕ್ಷಿಯಾದ ಹಾವಿನ ಹಾದಿಗಳು, ಎರಡು ಬೆಟ್ಟಗಳ ಸಂದುಗಳಲ್ಲಿ ಹರಿಯುವ ಸಣ್ಣ ಸಣ್ಣ ನೀರಿನ ಝರಿಗಳು, ನೀರ ಪಸೆ ಇರುವಲ್ಲಿ ಸದಾಕಾಲ ವಾಸಿಸುವ ಜಿಗಣೆ (ಇಂಬುಳ) ಎಂಬ ರಕ್ತ ಹೀರುವ ಜೀವಿಗಳು, ಮರದಿಂದ ಮರಕ್ಕೆ ಹಾರಾಡುವ ಚಿಟ್ಟೆ-ಹಕ್ಕಿ-ಓತಿಕ್ಯಾತವೇ ಮುಂತಾದ ಪ್ರಕೃತಿಯ ಮಡಿಲ ಶಿಶುಗಳು, ಅರಣ್ಯವೇ ನಮ್ಮದು ಎನ್ನುವಂತೆ ಸ್ವಚ್ಛಂದವಾಗಿ ಹಾರುವ ಕೋತಿಗಳು, ಅಲ್ಲೊಮ್ಮೆ ಇಲ್ಲೊಮ್ಮೆ ಸಿಗುವ ಮೊಲ, ಅಳಿಲು ಮುಂತಾದ ಮುದ್ದು ಜೀವಿಗಳು, ಕಣ್ಣಿಗೆ ಕಾಣದಿರುವ ಆದರೆ ಕಿವಿಗಳಿಗೆ ಸದಾ ಕೇಳಿಸುತ್ತಿರುವ ವಿಧವಿಧದ ಶಬ್ದಗಳಿಂದ ತಮ್ಮ ಇರುವನ್ನು ಜಗತ್ತಿಗೆ ತೋರಿಸುವ ಜೀರುಂಡೆಗಳು-ಕೀಟಗಳು, ಎಲ್ಲೆಲ್ಲೂ ಇದ್ದರೂ ಅಪರೂಪಕ್ಕೆ ಕಾಣುವಂಥ ಹಾವುಗಳು, ಈಗ ತಾನೆ ಕಾಡು ಕೋಣಗಳೋ ಕಡವೆ ಜಿಂಕೆಗಳೋ ನೀರಲ್ಲಿ ಉರುಳಿ ಹೊರಳಿಕೊಂಡು ಹೋಗಿರುವುದಕ್ಕೆ ಸಾಕ್ಷಿಯಾಗಿ ಇರುವಂಥ ಕೆಂಪಾದ ನೀರಿನ ಕೊಳಗಳು, ಪಕ್ಕದಲ್ಲೆ ನಡೆದಾಡಿದ ಹುಲಿ ಹೆಜ್ಜೆಯ ಗುರುತುಗಳು, ಎಲ್ಲಿಯೂ ಸಮತಟ್ಟಾಗಲಿ-ಇಳಿಯುವುದಾಗಲಿ ಇರದೆ ಏಕ ಪ್ರಕಾರವಾಗಿ ಹತ್ತಿಕೊಂಡೇ ಹೋಗಬೇಕಾದ ಕಾಲು ದಾರಿಯ ಕುರುಹುಗಳು, ಮನುಷ್ಯ ಸಂಚಾರದ ಹಾದಿಯಂತೆ ವನ್ಯ ಜೀವಿಗಳು ನಿರಂತರ ಸಾಗುವ ಗುಪ್ತವಾದ ಹಾಗೂ ಸೂಕ್ಷ್ಮವಾದ ರಾಜ ಪಥಗಳು, ಯಾವುದೋ ವನ್ಯ ಜೀವಿಗಳ ಕಾದಾಟದಲ್ಲಿ ಹುಡಿಯಾದ ಗಿಡಗಳು-ತುಂಡಾದ ಬಳ್ಳಿ-ಮಗುಚಿದ ಕಲ್ಲುಗಳ ರಾಶಿ, ದೀರ್ಘಕಾಲ ದಾಂಪತ್ಯದಲ್ಲಿದ್ದಂಥ ಜೋಡಿಯಲ್ಲಿ ಯಾವೊಂದು ಜೀವ ಕಳಚಿದರೂ ಉಳಿದ ಜೀವ ಸೊರಗುವಂತೆ ಅಲ್ಲಲ್ಲಿ ಅಲ್ಲಲ್ಲಿ ಜೀವ ಕಳಕೊಂಡ ಮರದೊಡನೆ ಉಳಿದಂಥ ಜೀವಂತ ಬಳ್ಳಿಗಳು, ಸಹಜವೋ ಅಸಹಜವೋ ಯವುದೋ ಕಾಲದಲ್ಲಿ ಸತ್ತು ಬಿದ್ದಂಥ ಪ್ರಾಣಿಗಳ ಕಳೇಬರಗಳು.. ಹೀಗೆ ಅನೇಕ ಕಾಡಿನೊಳಗಷ್ಟೆ ಕಾಣುವ ದೃಶ್ಯಗಳನ್ನು ಕುತೂಹಲದಿಂದ ನೋಡುತ್ತ, ಭಯದಿಂದ ಅನುಭವಿಸುತ್ತ ರಾಮಯ್ಯ ಗೌಡನ ನೇತೃತ್ವದಲ್ಲಿ ಮೂವರು ಕಾಡಿನೊಳಗೊಂದಾಗಿ ನಡೆಯುತ್ತಿದ್ದರು.

ದಾರಿಯಲ್ಲಿ ಸಿಗುವ ಬರೆಂಗಾಡಿ, ಕುರ್ಯಾಡಿ.. ಮುಂತಾದ ಸಣ್ಣ ಸಣ್ಣ ಊರುಗಳ ಹೊರಗಿನಿಂದಲೇ ಇರುವಂಥ ದಾರಿಯಲ್ಲಿ ನಡೆದು ಹೋಗುವಾಗ ಆ ಊರುಗಳ ದರ್ಶನದ ಜತೆ ಅವರ ಮನೆಗಳು, ಓಡಾಡುವ ಮಕ್ಕಳು, ಕೆಲಸಗಳಲ್ಲಿ ನಿರತರಾದ ಹೆಂಗಸರು, ಅಪರೂಪಕ್ಕೆ ಇರುವಂಥ ಗಂಡಸರು (ಅಪರೂಪಕ್ಕೆ ಯಾಕೆಂದರೆ ಇಂಥ ಹಳ್ಳಿಗಳಲ್ಲಿ ಗಂಡಸರು ರಾತ್ರಿಗೆ ಮಾತ್ರ ಮನೆಗೆ ಬರುವುದು. ಹಗಲಿಡೀ ಅವರವರ ಕೆಲಸಗಳಲ್ಲಿ ನಿರತರಾಗಿಯೇ ಇರುತ್ತಾರೆ.) ಮನೆಗಳ ಹಿಂದೆ ಮುಂದೆ ಇರುವ ಸಣ್ಣ ಸಣ್ಣ ಬೆಟ್ಟಗಳಲ್ಲಿ ಹುಲ್ಲು ಮೇಯುತ್ತಿರುವ ಜಾನುವಾರುಗಳು, ಸದಾ ಬೊಗಳಿಕೊಂಡೇ ಇರುತ್ತವೋ ಏನೊ ಎಂಬಂತೆ ಭಾವ ಬರಿಸುವ ಹಿಂಡು ಹಿಂಡು ನಾಯಿಗಳು, ಮರಿಗಳೊಡನೆ ಆಹಾರ ಹುಡುಕಿಕೊಂಡು ಹೋಗುತ್ತಿರುವ ದೊಡ್ಡ ದೊಡ್ಡ ಕೋಳಿಗಳ ಮೆರವಣಿಗೆಯ ದೃಶ್ಯಗಳು, ಹಸಿರು ಗದ್ದೆಗಳು, ಅಡಿಕೆ ತೆಂಗಿನ ತೋಟಗಳು, ತರಕಾರಿ ಬೆಳೆಸುವ ಗದ್ದೆಗಳು, ಗದ್ದೆಗಳ ಸುತ್ತಲೂ ಹರಿಯುವ ಶುಭ್ರ ನೀರಿನ ಸಣ್ಣ ಸಣ್ಣ ತೋಡುಗಳು.. ಹೀಗೆ ನೋಡುತ್ತ ಸಾಗುವಾಗ ಯಾವ ದಣಿವು ಕೂಡ ಹತ್ತಿರವೂ ಸುಳಿಯದೇ ಇರುವ ಲವಲವಿಕೆ ಮಾತ್ರ ಎಲ್ಲರಲ್ಲೂ ಇದ್ದದ್ದು ವಿಶೇಷವೂ ಹೌದು ಸಹಜವೂ ಹೌದು.

ಮತ್ತಷ್ಟು ಮೇಲೆ ಹತ್ತಿದಾಗ ಕೈಗೆ ಸಿಗುವುದೋ ಏನೊ ಎನ್ನುವಂಥ ಪಶ್ಚಿಮ ಘಟ್ಟಗಳ ಕಿರೀಟದಂತಿರುವ ಹುಲ್ಲು ಗುಡ್ಡೆಗಳ ಸರಣಿಗಳು ಪ್ರಾರಂಭವಾಗುತ್ತವೆ. ಇನ್ನಷ್ಟು ಹತ್ತಿರ ಹೋದಂತೆ ಮತ್ತೆ ಪರ್ವತದ ಇಳಿಜಾರು ಪ್ರಾರಂಭವಾಗುತ್ತದೆ. ಆ ಇಳಿಜಾರಿನ ಕೊನೆಯೇ ಫಂಜಾಲು ಎಂಬ ಸ್ವರ್ಗ. ಅಲ್ಲಿಂದ ಇನ್ನೊಂದು ಪರ್ವತ ಪ್ರಾರಂಭಕ್ಕೆ ಮುನ್ನ ಇರುವಂಥ ಭೂಮಿ ಫಂಜಾಲಿನ ಮೂಲನಿವಾಸಿಗಳ ಫಲವತ್ತಾದ ಕರ್ಮ ಭೂಮಿ. ದೂರದಿಂದಲೇ ರಾಮಯ್ಯ ಗೌಡ “ನೋಡಿ ಭಟ್ರೆ ಮುಂದೆ ಕಾಣುವುದೇ ಫಂಜಾಲು” ಎಂದಾಗ ಕಾರ್ತಿಕ ಮತ್ತು ಆದಿತ್ಯ ಇಬ್ಬರಿಗೂ ರೋಮಾಂಚನವಾಗಿತ್ತು. ಕಾರ್ತಿಕ ಮನದೊಳಗೇ ಅಂದುಕೊಂಡ. ‘ಆಹಾ ಅದೆಂಥ ಸೊಗಸು. ಬಹುಷ ದೇವ ಭೂಮಿಯಾದ ಬದರಿ, ಕೇದಾರ ಬಿಟ್ಟರೆ ಮತ್ತೊಂದು ಈ ಫಂಜಾಲೇ ಇರಬಹುದೊ ಏನೊ ಎಂಬಷ್ಟು ಸೌಂದರ್ಯ ಈ ಫಂಜಾಲಿನಲ್ಲಿದೆ ಎಂದು ಇಬ್ಬರಿಗೂ ಅನ್ನಿಸಿತ್ತು. ಭಾರತ ಮಾತೆಗೆ ಉತ್ತರದ ಭಾಗದಲ್ಲಿ ಹಿಮಾಲಯವು ರಕ್ಷಿಸುವಂತೆ ಈ ಫಂಜಾಲಿಗೆ ನಾಲ್ಕು ದಿಕ್ಕುಗಳಲ್ಲೂ ಈ ಪರ್ವತ ಶ್ರೇಣಿ ರಕ್ಷಣೆ ಕೊಡುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಫಂಜಾಲಿನ ಬಹಳ ದೊಡ್ಡದಾದ ಈ ಮನೆಯಲ್ಲಿ ಒಂದೇ ಕುಟುಂಬದ ಇಪ್ಪತ್ತಕ್ಕೂ ಮಿಕ್ಕಿ ಸದಸ್ಯರಿರುವುದು ವರ್ತಮಾನವಾದರೂ ಹಿಂದೆ ಇದೇ ಅವಿಭಕ್ತ ಕುಟುಂಬದಲ್ಲಿ ನೂರಕ್ಕೂ ಹೆಚ್ಚು ಜನರು ವಾಸವಾಗಿರುತ್ತಿದ್ದದ್ದೂ ಸತ್ಯವೆ. ಇದನ್ನು ರಾಮಯ್ಯ ಗೌಡ ಈ ಹಿಂದೆಯೇ ಹೇಳಿದ್ದರೂ ಕಾರ್ತಿಕನಾಗಲಿ ಆದಿತ್ಯನಾಗಲಿ ಇದನ್ನು ಪೂರ್ತಿ ನಂಬಿರಲಿಲ್ಲ. ಆದರೆ ದೂರದಿಂದ ಈ ಮನೆಯನ್ನು, ಅಲ್ಲಿಯ ಅಗಾಧ ಗದ್ದೆಗಳನ್ನು, ತೋಟಗಳನ್ನು ನೋಡುವಾಗ ಇಬ್ಬರಿಗೂ ನಂಬಿಕೆ ಬರಲಾರಂಭಿಸಿತು. ನೂರಾರು ಜಾನುವಾರುಗಳು ಒಟ್ಟಿಗೆ ಮೇಯುವುದೇ ಒಂದು ಸುಂದರ ನೋಟ. ಅದರಲ್ಲೂ ಸಣ್ಣ ಕರುಗಳು ತುಂಟಾಟದಿಂದ ಬಯಲು ಪ್ರದೇಶದಂತಿರುವ ವಿಶಾಲವಾದ ಹಸಿರು ಹುಲ್ಲಿನ ಗುಡ್ಡಗಳ ಮೇಲೆ ಅತ್ತಿಂದಿತ್ತ ಇತ್ತಿಂದತ್ತ ಓಡಾಡಿಕೊಂಡು, ಒಂದಕ್ಕೊಂದು ಹಾದು ಕೊಂಡು, ಕುತೂಹಲದಿಂದ ಎಲ್ಲೊ ನೋಡಿಕೊಂಡು, ಹಟಾತ್ತನೆ ದಿಕ್ಕನ್ನು ಬದಲಿಸಿಕೊಂಡು, ಬಾಲವನ್ನು ಏರಿಸಿಕೊಂಡು ಜಿಗಿಯುತ್ತಿರುವುದನ್ನು ನೋಡುವಲ್ಲಿ ಕಣ್ಣುಗಳು ಸೋಲದಿರಬಹುದೆ ಓದಿ… ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ..
*****************************
————————————————————————————————————————————————————————————————-

ಅಳಂಬ.. ೧೨
************
ಸಂಕ್ರೇ ಗೌಡರ ಮನೆಯಲ್ಲಿ ಓದು ಬರಹ ಕಲಿತಿರುವ ಪ್ರಥಮ ಸದಸ್ಯೆಯೇ ಕಮಲಿ. ಯಾವುದೇ ಪತ್ರ ವ್ಯವಹಾರಕ್ಕೆ ಅಥವಾ ಹೊರಗಿನ ಪ್ರಪಂಚದ ಕನ್ನಡ ಭಾಷೆಗೆ ಸಂಕ್ರೇಗೌಡರ ಮನೆಯವರು ಹೆಬ್ಬಾರರ ಮನೆಯವರನ್ನೇ ಆಶ್ರಯಿಸಬೇಕಿತ್ತು. ಅಂತೆಯೇ ಕುತ್ಲೂರು ಗ್ರಾಮದ ಒಳಗಿರುವ ಪಶ್ಚಿಮ ಘಟ್ಟದ ಮಡಿಲಲ್ಲಿರುವ ಎಲ್ಲ ಸಣ್ಣ ಪುಟ್ಟ ಹಳ್ಳಿಗಳೂ ಅವಿದ್ಯಾವಂತರಿಂದಲೇ ತುಂಬಿಕೊಂಡಿರುವುದು ಅಸಹಜವೇನಲ್ಲ. ಅಂತಿರುವಾಗ ಕಮಲಿ ನಿಜವಾಗಿಯೂ ಅವರೊಳಗೆ ಹೆಚ್ಚಿನವಳಾಗುತ್ತಾಳೆ. ಅಂತೆಯೇ ವಿದ್ಯೆ ಕಲಿಯದಿದ್ದರೂ ಈ ಜನರು ಸುಸಂಸ್ಕೃತರಾಗಿದ್ದರು ಎನ್ನುವುದೂ ವಿಶೇಷವೆ.
ಕಮಲಿ ಈಗ ವಿದ್ಯಾವಂತೆ ಮಾತ್ರವಲ್ಲ ಮದುವೆಗೆ ಸಿದ್ಧಳಾದವಳು ಕೂಡ ಹೌದು. ಸಂಕ್ರೇ ಗೌಡರು ಹುಡುಗನನ್ನು ಹುಡುಕುತ್ತಲೇ ಇದ್ದರೂ ಯಾವುದೂ ಕೂಡಿ ಬರಲಿಲ್ಲ. ಅಕ್ಕ ಗುಲಾಬಿಗೆ ಇಪ್ಪತ್ತನೇ ವರ್ಷಕ್ಕೆ ಮದುವೆ ಆಗಿ ಒಂದು ಮಗುವೂ ಆಗಿತ್ತು. ರಾಮಯ್ಯ ಗೌಡನಿಗೂ ಮದುವೆ ವಯಸ್ಸು ಮೀರುತ್ತಿದೆ. ಆದರೆ ಆತನೂ ಕಮಲಿಗೆ ಸಂಬಂಧ ಕೂಡಿ ಬಂದರೆ ಒಟ್ಟಿಗೆ ಅಣ್ಣ ತಂಗಿಯರ ಮದುವೆ ಮಾಡಿಬಿಡಬಹುದು ಎಂಬ ಯೋಚನೆಯಲ್ಲಿದ್ದನು. ಸಂಕ್ರೇ ಗೌಡರಿಗೂ ಇದು ಸರಿಯೆಂದು ಕಂಡಿತ್ತು.

ಅಂತೆಯೆ ಸಂಕ್ರೇ ಗೌಡರು ಒಂದು ದಿನ ಕಮಲಿಯಲ್ಲಿ “ಮಗಳೆ ಕಮಲಿ.. ಅಣ್ಣನಿಗೆ ಮದುವೆ ವಯಸ್ಸು ಮೀರುತ್ತಿದೆ. ಈ ವರ್ಷವಾದರೂ ಮದುವೆ ಆಗಬೇಕು. ಜತೆಗೆ ನಿನಗೂ ಒಪ್ಪಿಗೆ ಇದ್ದರೆ ಗಂಡು ನೋಡೋಣ ಆಗದೆ. ಒಟ್ಟಿಗೇ ಇಬ್ಬರದೂ ಆದರೆ ನಮಗೂ ಖರ್ಚು ಕಡಿಮೆ ಮಾತ್ರವಲ್ಲ ನಿನಗೂ ಮದುವೆ ಎಂಬ ಸಂಸ್ಕಾರ ಆಗುತ್ತದೆ. ನಾವಾದರೊ ಇನ್ನು ವೃದ್ಧಾಪ್ಯದ ಕಡೆ ಸರಿದವರು. ನಾವಿರುವಾಗಲೆ ನಿನಗೊಂದು ಮದುವೆ ಆದರೆ ನಮ್ಮ ಜವಾಬ್ದಾರಿಯೂ ಈಡೇರಿದಂತಾಗುತ್ತದೆ.” ಎಂದಾಗ ಕಮಲಿಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. “ಅಪ್ಪ ನನಗೆ ಈಗ ಮದುವೆ ಬೇಡ. ಅಣ್ಣನಿಗೆ ಆಗಲಿ. ನನಗೂ ಬಹಳ ಖುಷಿಯೇ. ಅತ್ತಿಗೆ ಮನೆಗೆ ಬಂದರೆ ಅವರೊಟ್ಟಿಗೆ ಒಂದೆರಡು ವರ್ಷ ಕಳೆದು ನಿಧಾನವಾಗಿ ಸಾಕು. ನನಗೀಗಲೆ ನಿಮ್ಮನ್ನೆಲ್ಲ ಬಿಟ್ಟಿರಲು ಮನಸ್ಸಿಲ್ಲ. ಅಷ್ಟಾಗಿ ನನಗೇನು ಮದುವೆ ಮಕ್ಕಳು ಎಂಬ ವಿಚಾರದಲ್ಲಿ ಯೋಚಿಸುವಷ್ಟು ಪ್ರಾಯವೂ ಆಗಿಲ್ಲ. ಯಾಕಪ್ಪ ನಾನು ನಿಮಗೆ ಇಲ್ಲಿರುವುದು ಇಷ್ಟವಿಲ್ಲವೆ” ಎಂದ ಕಮಲಿಗೆ “ಛೆ!! ಛೇ!! ಹಾಗೇನಿಲ್ಲ ಮಗಳೆ. ನೀನು ನಮಗೊಂದು ಹೊರೆಯೇ? ಖಂಡಿತ ಇಲ್ಲ. ಹಾಗೆ ತಿಳಿದುಕೊಳ್ಳಬೇಡ. ನಿನಗೆ ಒಪ್ಪಿಗೆ ಇಲ್ಲದಿದ್ದರೆ ನಮ್ಮದೇನು ಒತ್ತಾಯವಿಲ್ಲ. ನಿನಗೆ ಯಾವಾಗ ಬೇಕೊ ಆವಾಗಲೇ ಆಗಲಿ. ನಮ್ಮದೇನೂ ಅಭ್ಯಂತರವಿಲ್ಲ. ಆದರೆ ನಿನ್ನ ಒಳ್ಳೆಯ ಭವಿಷ್ಯಕ್ಕಾಗಿ ನಮ್ಮ ಮನಸ್ಸು ಮಿಡಿಯುತ್ತಿರುವುದರಿಂದ ನಿನಗೊಬ್ಬ ಒಳ್ಳೆಯ ವರ ಸಿಗುವಲ್ಲಿವರೆಗೆ ಕಾಯುವ ತಾಳ್ಮೆಯೂ ನಮಗಿದೆ. ಸರಿ ಮಗಳೆ ಹೀಗೆ ಕೇಳಿದೆನೆಂದು ಬೇಸರಿಸಬೇಡ. ಎಷ್ಟಾದರು ನೀನು ನಮ್ಮೆಲ್ಲರ ಮುದ್ದಿನ ಕೂಸು ತಾನೆ” “ಬೇಸರ ಇಲ್ಲಪ್ಪ. ನಿಮ್ಮ ಕಾಳಜಿ ನನಗೆ ಅರ್ಥವಾಗುತ್ತದೆ.” ಹೀಗೆ ಆ ಮಾತುಕತೆ ಅಲ್ಲಿಗೇ ಮುಗಿದಿತ್ತು.

Advertisement:

ಕಾರ್ತಿಕನಿಗೆ ತೋಟದ ಕೆಲಸಗಳೆಂದರೆ ಪಂಚ ಪ್ರಾಣ. ಅದೆಷ್ಟು ಕಷ್ಟದ ಕೆಲಸಗಳೇ ಇರಲಿ ವೃತ್ತಿಪರರಂತೆ ಲೀಲಾಜಾಲವಾಗಿ ಮಾಡುತ್ತಿದ್ದ. ಅವನೊಡನೆ ಕೆಲಸಕ್ಕೆ ಬರುವ ರಾಮಯ್ಯ ಗೌಡನಾಗಲಿ ಪಕ್ಕದ ಮನೆಯಲ್ಲಿರುವ ಲೋಕೇಶ ಪೂಜಾರಿಯಾಗಲಿ ಮಟ್ಕ್ಯೆಯಲ್ಲಿರುವ ಚೆನ್ನಯ ಗೌಡನಾಗಲಿ ಯಾರೇ ಬಂದರು ಅವರಿಂದ ಎಲ್ಲ ಕೆಲಸಗಳ ಸೂಕ್ಷ್ಮತೆಗಳನ್ನು ಅರಿತು ಅವರಂತೇ ಕೌಶಲ್ಯದಿಂದ ಮುಂದುವರಿಯುವಷ್ಟು ಕಾರ್ತಿಕನು ಚಾಣಾಕ್ಷನಾಗಿದ್ದನು. ಅಂತೆಯೇ ಕಾಡಿನಲ್ಲಿ ಸಿಗುವಂಥ ಜೇನನ್ನು ತರಲು ಕೆಲಸದವರ ಜತೆಗೆ ತಾನೂ ಹೋಗುತ್ತಿದ್ದ ಮಾತ್ರವಲ್ಲ ಜೇನನ್ನು ಹೇಗೆ ಪತ್ತೆ ಮಾಡುವುದು, ಹೇಗೆ ನೊಣಗಳನ್ನು ಓಡಿಸುವುದು, ಪುನಹ ಆ ನೊಣಗಳು ವಾಪಸು ಬರುವುದರೊಳಗೆ ಹೇಗೆ ಉಪಾಯದಿಂದ ಜೇನನ್ನು ತೆಗೆಯುವುದು ಮುಂತಾದ ವಿಷಯಗಳನ್ನು ಅದರಲ್ಲು ಜೇನು ಸಾಕಣೆಯಲ್ಲಿ ವಿಶೇಷ ಪರಿಣಿತಿ ಇದ್ದ ಮುತ್ತೇ ಗೌಡನಿಂದ ತಿಳಿದು ಕೊಂಡಿದ್ದ. ಆದರೆ ಈ ಜ್ಞಾನ ಕಾರ್ತಿಕನಿಗೆ ಇತ್ತೇ ಹೊರತು ಮರ ಹತ್ತಿ ಜೇನು ತೆಗೆಯುವ ಕಾಯಕ ಮಾತ್ರ ಆತನಿಂದ ಆಗುತ್ತಿರಲಿಲ್ಲ. ಕಾರಣ ಕಾರ್ತಿಕನಿಗೆ ಮರ ಹತ್ತುವ ಕಲೆ ಸಿದ್ಧಿಸಲಿಲ್ಲ. ಸಿದ್ಧಿಸಲಿಲ್ಲ ಎನ್ನುವುದಕ್ಕಿಂತಲೂ ಆತನಿಗೆ ಮರ ಹತ್ತುವಲ್ಲಿ ಹೆದರಿಕೆ ಆಗುತ್ತಿದ್ದುದರಿಂದ ಆ ಸಾಹಸಕ್ಕೇ ಕೈ ಹಾಕಲಿಲ್ಲ. ಅದಕ್ಕೂ ಒಂದು ಕಾರಣವಿದೆ. ಕೆಲಸದವರೆಲ್ಲ ಮರಕ್ಕೆ ಹತ್ತುವುದನ್ನು ನೋಡಿ ಕಲಿತಂಥ ಕಾರ್ತಿಕ ತನ್ನ ತೋಟದೊಳಗಿರುವ ಸಣ್ಣ ಪುಟ್ಟ ಮರಗಳಿಗೆ ಹತ್ತುತ್ತಿದ್ದ. ಅಷ್ಟೇನೂ ಹೆದರಿಕೆ ಆಗುತ್ತಿರಲಿಲ್ಲ. ಒಂದು ಸಲ ಮಳೆಗಾಲದಲ್ಲಿ ಹಲಸಿನ ಹಣ್ಣು ಕೊಯ್ಯಲೆಂದು ಮರ ಹತ್ತಿದಾಗ ಅದ್ಯಾವುದೊ ಅಚಾತುರ್ಯದಲ್ಲಿ ಸಾಧಾರಣ ಇಪ್ಪತ್ತು ಅಡಿ ಎತ್ತರದಿಂದ ಕಾಲು ಜಾರಿದವನು ಮರದ ಬುಡದವರೆಗೂ ಜಾರಿಕೊಂಡೇ ಬಂದಾಗ ಕೈ, ಕಾಲು, ತೊಡೆ, ಎದೆಗೆಲ್ಲ ಮರ ಉಜ್ಜಿದಂತಾಗಿ ಚರ್ಮವೆಲ್ಲ ಎದ್ದು ಹೋಗಿತ್ತು. ಮೈಯೆಲ್ಲ ರಕ್ತ ಸೋರುತ್ತಿರುವಂತೆ ಮನೆಗೆ ಬರುವಾಗ ಮನೆಯವರೆಲ್ಲ ಗಾಬರಿಯಿಂದ ಆಸ್ಪತ್ರೆಗೆ ಹೋಗುವ ತಯಾರಿಯಲ್ಲಿದ್ದರು. ಆದರೆ ಆ ಕ್ಷಣ ಯಾವುದೊ ಕೆಲಸದ ನಿಮಿತ್ತ ಮಟ್ಕ್ಯೆಯ ಚೆನ್ನಯ ಹೆಬ್ಬಾರರ ಮನೆಗೆ ಬಂದದ್ದರಿಂದ ನಾಟಿ ಔಷಧ ಕೊಡುವಲ್ಲಿ ಸಿದ್ಧ ಹಸ್ತನಾದ ಆತ ಕಾರ್ತಿಕನಿಗೆ ದೊಡ್ಡ ಮಟ್ಟದ ಗಾಯಗಳೇನು ಆಗಿಲ್ಲವೆಂದರಿತು ತಾನೇ ಇದಕ್ಕೆ ಔಷಧ ಕೊಡುತ್ತೇನೆ ಆಸ್ಪತ್ರೆ ಹೋಗುವುದು ಬೇಡವೆಂದಾಗ ಕಾರ್ತಿಕನಿಗೆ ಧೈರ್ಯವೂ ಬಂದಿತ್ತು. ಕೂಡಲೆ ಕಾಡಿಗೆ ಹೋಗಿ ಅದೇನೋ ಔಷಧಿಯನ್ನು ತಂದು ಗಾಯಗಳಿಗೆ ಹಚ್ಚುವುದರ ಜತೆಗೆ ನೋವು ಕಡಿಮೆಯಾಗಲು ಕಷಾಯವೊಂದನ್ನು ಕೊಟ್ಟಿದ್ದ. ಒಂದು ವಾರದೊಳಗೇ ಕಾರ್ತಿಕ ಹುಷಾರಾಗಿ ಗಾಯಗಳ ಕಲೆಗಳ ಹೊರತಾಗಿ ಮುಂಚಿನಂತೆ ಆಗಿದ್ದ. ಅಂದಿನಿಂದ ಈ ಮರ ಹತ್ತುವ ಸಾಹಸಕ್ಕೆ ಕಾರ್ತಿಕ ಹೊರಡಲೇ ಇಲ್ಲ.

ಇಲ್ಲಿ ಚೆನ್ನಯನ ಬಗ್ಗೆ ಹೇಳುವುದಾದರೆ ಆತ ಬೇಸಾಯಗಾರನೂ ಹೌದು ನಾಟಿ ಔಷಧ ಕೊಡುವ ನಾಟಿ ವೈದ್ಯನೂ ಹೌದು. ಅದರಲ್ಲೂ ವಿಶೇಷವಾಗಿ ಕಣ್ಣಿನ ಸಂಬಂಧಿ ಸಮಸ್ಯೆಗಳಿಗೆ ಚೆನ್ನಯನ ಔಷಧಿ ನೂರಕ್ಕೆ ನೂರರಷ್ಟು ಪರಿಣಾಮಕಾರಿ ಎಂದರೆ ಆತನ ನಾಟಿ ಔಷಧದ ಜ್ಞಾನ ಅದೆಷ್ಟಿರಬಹುದು ಎಂದು ಹೇಳಬಹುದು. ನುರಿತ ವೈದ್ಯರು ಆಗದು ಎಂದು ಕೈ ಬಿಟ್ಟಂಥ ಪ್ರಕರಣಗಳು ಚೆನ್ನಯನ ಔಷಧಿ ಸೇವಿಸಿ ಗುಣಮುಖಾಗಿ ರೋಗಿಗಳು ಪ್ರಪಂಚವನ್ನು ಮತ್ತೊಮ್ಮೆ ಕಾಣುವಂತಾದ ಉದಾಹರಣೆಗಳು ಹಲವಾರಿವೆ. ಆದರೂ ಜನ್ಮತಃ ಕುರುಡಾದರೆ ಸರಿ ಮಾಡಲಾಗದು ಎಂದು ಗೌಡರು ಹೇಳುತ್ತಿದ್ದರು. ಚೆನ್ನಯ ಗೌಡರಲ್ಲಿ ಕಣ್ಣಿನ ಸಮಸ್ಯೆ ಎಂದು ಬಂದವರಿಗೆ ಅವರ ಪರೀಕ್ಷೆಯು ವಿಶಿಷ್ಟ ರೀತಿಯದ್ದು ಮತ್ತು ಸರಳ. ರೋಗಿಯ ಕಣ್ಣಿನ ಒಳಗೆ ಪ್ರತಿಬಿಂಬ ಕಂಡರೆ ಮಾತ್ರ ಗೌಡರು ಔಷಧಿ ಕೊಡುತ್ತಿದ್ದರು ಮತ್ತು ಅದು ಪರಿಣಾಮಕಾರಿಯೂ ಆಗುತ್ತಿತ್ತು. ಯಾರ ಕಣ್ಣಲ್ಲಿ ಪ್ರತಿಬಿಂಬ ಕಾಣುವುದಿಲ್ಲವೊ ಅವರಿಗೆ ಮತ್ತೆ ದೃಷ್ಟಿ ಬರುವ ಸಾಧ್ಯತೆ ಇಲ್ಲವೆಂಬ ಅಭಿಪ್ರಾಯ ಗೌಡರದ್ದು. ಅದೇರೀತಿ ಹಲವಾರು ರೋಗಗಳಿಗೆ ಅವರದ್ದೇ ಆದ ವಿವಿಧ ರೀತಿಯ ಪರೀಕ್ಷೆಗಳೊಂದಿಗೆ ಪರಿಹಾರ ನೀಡುವ ಚೆನ್ನಯ ಗೌಡರು ಮಾತ್ರ ಒಂದು ತಪ್ಪು ಮಾಡಿದ್ದರು. ಮತ್ತು ಅದು ಭಾರಿ ಬೆಲೆಯನ್ನು ತೆರೆಯಬೇಕಾದದ್ದೂ ಹೌದು. ಅದೇನೆಂದರೆ ಅವರಿಗೆ ಗೊತ್ತಿದ್ದಂಥ ಅತ್ಯಮೂಲ್ಯವಾದ ಗಿಡಮೂಲಿಕೆಗಳ ಪರಿಚಯವಾಗಲಿ, ಮಾಡುವ ಪರೀಕ್ಷೆಯ ಗುಟ್ಟಾಗಲಿ, ಕೊಡುವ ಔಷಧಿಯಾಗಲಿ ಇದರ ರಹಸ್ಯವನು ಯಾರಲ್ಲೂ ಹೇಳದೆ ಗೌಪ್ಯ ಕಾಪಾಡಿಕೊಂಡು ಬಂದದ್ದರಿಂದ ಮುಂದೆ ಈ ಎಲ್ಲ ಜನೋಪಯೋಗಿ ವಿಷಯಗಳು ಅವರೊಡನೆಯೇ ಸಮಾಧಿಯಾಗುತ್ತದೆ ಎನ್ನುವುದು ಬಹಳ ಬೇಸರದ ವಿಷಯವೆ.

ಅಂತೆಯೇ ಕಾರ್ತಿಕನಿಗೆ ಕಾಡಿನೊಳಗಿರುವ ಮೂಲನಿವಾಸಿಗಳಾದ ಈ ಗೌಡ್ರುಗಳ ಜನಜೀವನ, ಅವರ ವೇಷ ಭೂಷಣಗಳು, ಭಾಷೆ, ಆಚಾರ ವಿಚಾರಗಳು, ಅವರ ದೈವಾರಾಧನೆ, ನಂಬಿಕೆಗಳು.. ಹೀಗೆ ಅನೇಕ ವಿಷಯಗಳ ಬಗ್ಗೆ ಕುತೂಹಲವೂ ಇತ್ತು ನೋಡಿ ತಿಳಿಯಬೇಕೆಂಬ ಆಸೆಯೂ ಇತ್ತು. ನೆಲ್ಲಿತಡ್ಕಕ್ಕೆ ಹತ್ತಿದಲ್ಲಿರುವ ಮಟ್ಕ್ಯೆ, ಅಳಂಬ, ಬರೆಂಗಾಡಿ ಮುಂತಾದ ಕಡೆಗೆ ಹಲವು ಸಲ ಹೋಗಿದ್ದನಾದರೂ ಕುತ್ಲೂರು ಗ್ರಾಮದ ಕೊನೆಯ ಮನೆಯಾದ ಫಂಜಾಲಿಗೆ ಒಂದು ಬಾರಿ ಹೋಗಬೇಕೆನ್ನುವ ಆಸೆ ಬಹಳಷ್ಟಿತ್ತು. ರಾಮಯ್ಯ ಗೌಡನಲ್ಲಿ ಒಂದು ದಿನ ತನ್ನಾಸೆಯನ್ನು ಹೇಳಿಕೊಂಡಾಗ “ಅದಕ್ಕೇನು ಅಡ್ಡಿ.. ನಾಳೆಯೇ ಬೇಕಾದರೆ ಹೋಗೋಣ. ಆದರೆ ಐದು ಮೈಲಿಗಳಷ್ಟು ಕಾಡುದಾರಿಯಲ್ಲಿ ಅದು ಕೂಡ ಹತ್ತಿಕೊಂಡು ಹೋಗುವಂಥ ಕಲ್ಲು-ಮುಳ್ಳು-ಗಿಡಗಂಟಿಗಳ ಮಧ್ಯದಲ್ಲಿ ಹೋಗಬೇಕಾಗುವುದು. ನಾವು ಕೂಡ ವರುಷಕ್ಕೊಂದೆರಡು ಸಾರಿ ಹೋಗುತ್ತೇವೆ. ಅದಲ್ಲದೆ ಬುಟ್ಟಿಗೆ ಬೆತ್ತ ತರಬೇಕಾದರೆ ಅದೇ ದಾರಿಯಿಂದ ಹೋಗಬೇಕಾಗುವುದರಿಂದ ಘಟ್ಟದ ತಪ್ಪಲಿನಲ್ಲಿರುವ ಎಲ್ಲ ಮನೆಗಳೂ ನಮಗೆ ಪರಿಚಿತವೆ.” ಎಂದಾಗ ಕಾರ್ತಿಕನಿಗೆ ಬಹಳ ಖುಷಿಯಾಗಿ “ಹಾಗಾದರೆ ನಾಳೆಯೇ ಹೋಗೋಣ” ಎಂದು ಕಾರ್ತಿಕ ಹೊರಡಲು ತಯಾರಾದ. ಆಗ ರಾಮಯ್ಯ ಗೌಡರು.
“ನಾನು ನಾಳೆಯೇ ಹೋಗೋಣ ಎಂದು ಮಾತಿಗೆ ಹೇಳಿದೆ. ಆದರೆ ನಾಳೆಯೇ ಹೋಗಬೇಕಾದರೆ ಒಂದಷ್ಟು ತಯಾರಿಗಳು ಬೇಕು. ಉದಾಹರಣೆಗೆ ಅಲ್ಲಿ ನೀವು ಊಟ ಮಾಡಲಾರಿರಿ. ಹೋಗಿ ಬರಬೇಕಾದರೆ ಬೆಳಗ್ಗಿನಿಂದ ಸಾಯಂಕಾಲದವರೆಗೆ ಆಗುತ್ತದೆ. ಆದ್ದರಿಂದ ಹಸಿವಿಗೆ ಅವಲಕ್ಕಿ ಬೆಲ್ಲವೊ ಅಥವಾ ಇನ್ನೇನಾದರು ಬುತ್ತಿ ಕೊಂಡು ಹೋಗಬೇಕು. ಅಂತೆಯೇ ನನ್ನಲ್ಲಿ ಕೋವಿ ಇದೆ ಅದಕ್ಕೆ ಔಷಧಿ ತರಬೇಕಷ್ಟೆ ಅದನ್ನು ನಾರಾವಿಯಿಂದ ತರಬೇಕು. ದಾರಿಯಲ್ಲಿ ಎಲ್ಲಾದರು ಕಾಡುಬೆಕ್ಕೊ, ಹಂದಿಯೋ ಸಿಕ್ಕಿದರೂ ಸಿಗಬಹುದು”

” ಈ ನಡುವೆ ನಿಮಗೆ ಇದೂ ಆಗಬೇಕೆ ” ಎಂದು ಕಾರ್ತಿಕ ತಮಾಷೆ ಮಾಡಿದ.

“ಹಾಗೇನಿಲ್ಲ ಭಟ್ರೆ. ಆದರೆ ಕೋವಿಯೊಂದು ಕೈಯಲ್ಲಿದ್ದರೆ ನಮಗೆ ಧೈರ್ಯವೆ. ಕೆಲವೊಮ್ಮೆ ಹುಲಿ ಸಿಕ್ಕಿದರೂ ಸಿಗಬಹುದು. ಯಾತಕ್ಕೂ ಇರಲಿ ಕೋವಿಯೊಡನೆ ಹೋಗುವುದು ಒಳಿತು” ಎಂದು ರಾಮಯ್ಯ ಗೌಡ ಆತನ ಅನುಭವವನ್ನು ಹೇಳಿದ. ಓದಿ… ಪ್ರಚೋದಿಸಿ… ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ.
*****************************
————————————————————————————————————————————————————————————————————————–

ಅಳಂಬ.. ೧೧
************
ವಾರದಲ್ಲಿ ಮೂರು ನಾಲ್ಕು ದಿನ ಕಮಲಿಯ ಜತೆಯಲ್ಲಿ ರಾಮಯ್ಯ ಗೌಡ ಅಳಂಬದಿಂದ ನೆಲ್ಲಿತಡ್ಕಕ್ಕೆ ಕೆಲಸಕ್ಕೆ ಬರುತ್ತಿದ್ದ. ದಿನ ಒಂದಕ್ಕೆ ಐದು ರೂಪಾಯಿ ಕೂಲಿ ಮಜೂರಿ. (ಅದು ಮಣ್ಣಿನ ಕೆಲಸವಿರಲಿ, ಗೊಬ್ಬರ ಹೊರುವುದಿರಲಿ, ತೆಂಗಿನ ಮರ ಏರುವುದಿರಲಿ, ತೋಟದ ಕೆಲಸವಿರಲಿ, ಸೊಪ್ಪು ಹುಲ್ಲು ಮಾಡುವುದಿರಲಿ ಸಂಬಳದಲ್ಲಿ ಏರು ಪೇರಿಲ್ಲ.) ಪ್ರತಿ ಶನಿವಾರವೂ ನಾರಾವಿ ಪೇಟೆಯಲ್ಲಿ ಸಂತೆ ಇರುತ್ತಿತ್ತು. ಅಂದಿಗಾಗುವಾಗ ಸಾಧ್ಯವಾದಷ್ಟು ಹಣ ಒಟ್ಟು ಮಾಡಿ ಜತೆಗೆ ತಾವು ಕಾಡಿನಿಂದ ಸಂಗ್ರಹಿಸಿದ ದ್ರವ್ಯಗಳನ್ನು ವಿಕ್ರಯಿಸಿ ಬಂದ ಹಣವನ್ನೂ ಸೇರಿಸಿ ಸಂತೆಯಿಂದ ದಿನಸಿ, ಹೊಗೆಸೊಪ್ಪು, ಮೀನು, ಸೊಸೈಟಿಯಿಂದ ದೊರಕುವ ಚಿಮಿಣಿ ಎಣ್ಣೆ-ಸಕ್ಕರೆ ಇತ್ಯಾದಿಗಳನ್ನು ಮನೆಗೆ ತರುವುದು ವಾಡಿಕೆ. ಸಾಧಾರಣವಾಗಿ ಕುತ್ಲೂರು ಗ್ರಾಮದ ಎಲ್ಲ ಮನೆಗಳ ಸದಸ್ಯರು ನಾರಾವಿ ಸಂತೆಯನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.

ಸಂತೆ ಎಂದ ಮೇಲೆ ಅಲ್ಲಿ ಏನುಂಟು ಏನಿಲ್ಲ.. ಎಲ್ಲವೂ ಲಭ್ಯವಿತ್ತು. ಮಣ್ಣಿನ ಪಾತ್ರೆಗಳು, ಅಲ್ಯುಮಿನಿಯಂ ಪಾತ್ರೆಗಳು, ಬಟ್ಟೆ ಅಂಗಡಿಗಳು, ಹಳ್ಳಿ ಔಷಧಿಗಳು, ತರಕಾರಿಗಳು, ಕೊಡೆ ರಿಪೇರಿ-ಚಪ್ಪಲಿ ರಿಪೇರಿ-ಲೈಟು ರಿಪೇರಿ ಮುಂತಾದ ಸಣ್ಣ ಸಣ್ಣ ವ್ಯವಹಾರಗಳ ಜತೆ ಹಳ್ಳಿಯಿಂದ ತಂದಂಥ ಜೇನು, ಕಾಳುಮೆಣಸು, ಬೆತ್ತದ ಬುಟ್ಟಿ ಮುಂತಾದ ಕಾಡುತ್ಪತ್ತಿಯ ವಿಕ್ರಯ, ಕೋಳಿ ಅಂಕ, ಬೇಸಿಗೆಯಲ್ಲಾದರೆ ಸೈಕಲ್ ಸರ್ಕಸ್, ಡೊಂಬರಾಟ, ಶೇಂದಿ ಶರಾಬು ಕುಡಿದವರ ತೂರಾಟ, ಹಳೆ ದ್ವೇಷಗಳು ನೆನಪಾಗಿ ಹೊಡೆದಾಟ, ಹೊಸ ಸ್ನೇಹಗಳ ಸಂಪಾದನೆ, ಹದಿ ಹರೆಯದವರು ಪರಸ್ಪರ ಆಕರ್ಷಣೆಯಿಂದ ಹಿರಿಯರ ಕಣ್ತಪ್ಪಿಸಿ ಗುಸುಗುಸು ಪಿಸಪಿಸ ಮಾತುಗಳನ್ನು ವಿನಿಮಯ ಮಾಡಿಕೊಂಡು ಮನದೊಳಗೇ ಖುಷಿ ಪಡುವ ಪರಿ…. ಹೀಗೆ ಹಲವಾರು ವಿಷಯಗಳು ಶನಿವಾರ ಸಂತೆಯಲ್ಲಿ ಇರುತ್ತಿದ್ದ ಕಾರಣ ಕುತ್ಲೂರಿನಲ್ಲಿ ಶನಿವಾರ ಯಾರೂ ಕೆಲಸ ಮಾಡುತ್ತಿರಲಿಲ್ಲ. ಅಂತೆಯೇ ಮದುವೆ, ಆಸ್ತಿ, ಜಾನುವಾರು ಮುಂತಾದ ವ್ಯವಹಾರಗಳ ಮಾತುಕತೆಗಳೂ ಸಂತೆಯ ದಿನವೇ ಆಗಿ ಹೋಗುತ್ತಿದ್ದವು. ಅಂದರೆ ವಾರಕ್ಕೊಂದು ಸಲ ಪ್ರಪಂಚ ದರ್ಶನವಾಗುವ ಅವಕಾಶ. ಸಾಯಂಕಾಲಕ್ಕಾಗುವಾಗ ಸಂತೆಯಿಂದ ಮನೆಗೆ ತೆರಳುವ ಸಂದರ್ಭ ಕುಡಿತದ ದಾಸರಾಗಿರುವ ಕೆಲವರು ದಾರಿ ಮಧ್ಯದಲ್ಲಿ ಅತ್ತ ಮನೆಗೂ ಹೋಗಲಾಗದೆ ಇತ್ತ ನಿಲ್ಲಲೂ ಆಗದೆ ದಾರಿ ಮಧ್ಯದಲ್ಲೇ ಅಮಲು ಇಳಿಯುವಲ್ಲಿವರೆಗೆ ಮಲಗಿ ಮರುದಿವಸ ಬೆಳಗ್ಗಿನ ಜಾವ ಎದ್ದು ಮನೆಗೆ ಹೋಗುವವರು ಕೂಡ ಬಹಳಷ್ಟು ಜನರಿರುವುದು ವಿಶೇಷವಲ್ಲ. ಹಾಗೆಂದು ಅವರಲ್ಲಿದ್ದಂಥ ಸಾಮಾನುಗಳನ್ನು ಯಾರೂ ಮುಟ್ಟದಿರುವುದೂ ಸುಳ್ಳಲ್ಲ.

ಕಮಲಿಯೂ ಕೆಲವೊಮ್ಮೆ ಅಣ್ಣನ ಜತೆಗೋ ತಂದೆಯ ಜತೆಗೋ ಸಂತೆಗೆ ಹೋಗುವುದಿದೆ.
ಅಣ್ಣಂದಿರ ಜತೆ ತಾನು ಕೂಡ ತಲೆ ಹೊರೆಯಲ್ಲಿ ಕೂಡಿದಷ್ಟು ಕಾಳುಮೆಣಸೊ, ರಾಮಪತ್ರೆಯೊ ಹೊತ್ತು ಕೊಂಡು ಹೋಗುತ್ತಿದ್ದಳು. ಅದೇರೀತಿ ಸಂತೆಯಿಂದ ಬಳೆ, ಚಪ್ಪಲಿ, ರಿಬ್ಬನ್.. ಹೀಗೆ ಅವಳಿಗೆ ಬೇಕಾದುದನ್ನು ಪಡಕೊಂಡು ಬರುವುದು ಅಂತೆಯೇ ಸಂತೆಯಲ್ಲಿ ರಾಜಣ್ಣನ ಅಂಗಡಿಯ ಕಬ್ಬಿನಹಾಲು, ಕಮ್ತಿಯವರ ಹೋಟೇಲಿನ ಚಹಾ ತಿಂಡಿ ಇದನ್ನು ತಪ್ಪಿಸುತ್ತಿರಲೂ ಇಲ್ಲ. ಅದರಲ್ಲೂ ಕಮ್ತಿಯವರ ಮಸಾಲೆ ದೋಸೆ ಎಂದರೆ ಕಮಲಿಗೆ ಮಾತ್ರವಲ್ಲ ಸಂತೆಗೆ ಬರುವ ಎಲ್ಲರಿಗೂ ಬಾಯಲ್ಲಿ ನೀರೂರಿಸುವ ತಿನಿಸೇ ಆಗಿತ್ತು. ಹಾಗೆಯೇ ಅಂಗಡಿ ಸುತ್ತುವುದು ಕೂಡ ಕಮಲಿಗೆ ಬಹಳ ಇಷ್ಟವಾದ ಸಂಗತಿಗಳಾಗಿದ್ದವು. ಇತ್ತೀಚೆಗೆ ಓದು ಬರಹ ಕಲಿತಿದ್ದರಿಂದ ಪುಸ್ತಕದ ಅಂಗಡಿಗಳಿಂದ ಕಥೆ ಪುಸ್ತಕಗಳೊ, ರಂಗೋಲಿ ಪುಸ್ತಕಗಳೊ, ಹಾಡಿನ ಪುಸ್ತಕಗಳೊ ಇವಳ ಸಂಗಾತಿಗಳಾಗಿದ್ದವು. ಅಣ್ಣಂದಿರಾಗಲಿ ತಂದೆ ಸಂಕ್ರೇ ಗೌಡರಾಗಲಿ ಕಮಲಿಯ ಆಸೆಗಳನ್ನು ಈಡೇರಿಸುವಲ್ಲಿ ಹಿಂದೆ ಮುಂದೆ ನೋಡುತ್ತಿರಲಿಲ್ಲ.

ಸಾಧಾರಣವಾಗಿ ಸಂತೆಗೆ ಹೋದವರು ಮನೆಗೆ ವಾಪಸು ಬರುವುದು ರಾತ್ರಿಯೇ. ಬೆಳಗ್ಗೆ ಮನೆಯ ಕೆಲಸಗಳನ್ನೆಲ್ಲ ಮಾಡಿ ಹೊರಡುವಾಗಲೇ ಹನ್ನೊಂದು ಗಂಟೆಯಾಗುತ್ತದೆ. ಎರಡರಿಂದ ಐದು ಮೈಲಿಗಳಷ್ಟು ದೂರವಿರುವ ನಾರಾವಿಗೆ ಹೋಗುವಾಗಲೇ ಮಧ್ಯಾಹ್ನವಾಗುವುದರಿಂದ ಮುಂದಿನ ಅರ್ಧ ದಿನ ಸಂತೆಗೆಂದೇ ಮೀಸಲು. ಆದರೆ ಕಮಲಿ ಜತೆಗಿದ್ದರೆ ಗೌಡರ ಮನೆಯವರು ಸಾಯಂಕಾಲದೊಳಗೆ ಮನೆ ಸೇರುವುದು ಕೂಡ ಸಹಜವಾಗಿತ್ತು. ಸಂತೆಗೆ ಹೋಗುವಾಗ ಮತ್ತು ಬರುವಾಗ ತಲೆ ಹೊರೆ ಇದ್ದೇ ಇರುತ್ತಿತ್ತು. ಆದರೆ ಅದು ಅನಿವಾರ್ಯವಾದ್ದರಿಂದ ಯಾರಿಗೂ ಬೇಸರವಾಗಲಿ ಸುಸ್ತಾಗಲಿ ಆಗುತ್ತಿರಲಿಲ್ಲ.

ಅಂತೆಯೇ ರಾಮಯ್ಯ ಗೌಡನಿಗೆ ಕುಡಿತದ ಚಟವಿಲ್ಲದಿದ್ದರೂ ಶನಿವಾರ ಆತನಿಗೆ ಒಂದಷ್ಟು ಬೇಕಾಗುತ್ತದೆ. ಆದರೆ ಅದು ಅಳತೆ ಮೀರದಂತಿರುವುದು ಕೂಡ ಸತ್ಯವೆ. ಆದರೆ ಕಮಲಿ ಜತೆಯಲ್ಲಿದ್ದರೆ ರಾಮಯ್ಯ ಗೌಡ ಸಂತೆಯಿಂದ ನೇರವಾಗಿ ಮನೆಗೆ ಯಾವುದೇ ಕುಡಿತದ ಮೋಹಕ್ಕೆ ಒಳಗಾಗದೆ ಬರುತ್ತಿದ್ದನಾದರೂ ಮನೆಯಲ್ಲಿ ಊಟವಾದ ಮೇಲೆ ಅದನ್ನು ಪೂರೈಸಿಕೊಳ್ಳುತ್ತಿದ್ದ. ಯಾಕೆಂದರೆ ಆಗೊಮ್ಮೆ ಈಗೊಮ್ಮೆ ಕಮಲಿಯನ್ನು ಸಂತೆಯಲ್ಲಿ ಕಂಡವರು ರಾಮಯ್ಯ ಗೌಡನಲ್ಲಿ ಆಕೆಯ ಮದುವೆ ಪ್ರಸ್ತಾಪ ಮಾಡಿದ್ದೂ ಇದೆ. ಆದರೆ ಕಮಲಿಯು ಸದ್ಯ ಮದುವೆಯ ಯೋಚನೆ ತನಗಿಲ್ಲವೆಂದು ಮನೆಯವರಲ್ಲಿ ಖಂಡಿತವಾಗಿ ಹೇಳಿದ್ದರಿಂದ ಅಂತೆಯೇ ಕಮಲಿ ಇನ್ನೂ ಸಣ್ಣವಳೆ ಆದ್ದರಿಂದ ಮನೆಯಲ್ಲೂ ಆಕೆಗೆ ಯಾರೂ ಈ ವಿಷಯದಲ್ಲಿ ಬಲವಂತ ಮಾಡುತ್ತಿರಲಿಲ್ಲ. ಆದರೆ ಮನೆಯವರಿಗೆ ಆಕೆ ಚಿಕ್ಕವಳಾದರೂ ಲೋಕದ ದೃಷ್ಟಿಗೆ ಆಕೆ ಹರೆಯದ ಹೆಣ್ಣು. ಆದ್ದರಿಂದ ಆಕೆಯ ರಕ್ಷಣೆ ತಮ್ಮ ಹೊಣೆಯೆಂದರಿತ ರಾಮಯ್ಯಗೌಡನಾಗಲಿ ಮುತ್ತೇ ಗೌಡನಾಗಲಿ ಕಮಲಿ ತಮ್ಮೊಡನೆ ಇರುವಾಗ ಗಂಭೀರವಾಗಿಯೇ ಇರುತ್ತಿದ್ದರು. ಮಾತ್ರವಲ್ಲ ಅಪರೂಪದ ಕುಡಿತ, ಕೋಳಿ ಅಂಕಕ್ಕೂ ದಾಸರಾಗುತ್ತಿರಲಿಲ್ಲ. ಆದ್ದರಿಂದ ಕಮಲಿಗೂ ಇವರ ಮೇಲೆ ಗೌರವವಿತ್ತು.

ಸಂತೆಯಿಂದ ಬಂದವರು ಹೆಚ್ಚಿನವರು ಮೀನು ತರುತ್ತಿದ್ದುದರಿಂದ ಆ ದಿವಸ ಎಲ್ಲರ ಮನೆಯಲ್ಲೂ ಮೀನಿನ ಭರ್ಜರಿ ಊಟವೇ ತಯಾರಾಗುತ್ತಿತ್ತು. ಆದರೆ ಕಮಲಿ ಹೆಬ್ಬಾರರ ಮನೆಗೆ ಹೋಗುತ್ತಿದ್ದುದರಿಂದ ಅಥವಾ ಬ್ರಾಹ್ಮಣರ ಮನೆಯ ಸಹವಾಸದಿಂದ ಮೀನು ಮಾಂಸದೂಟವೆಂದರೆ ಅಷ್ಟಾಗಿ ಇಷ್ಟ ಪಡುತ್ತಿರಲಿಲ್ಲ. ಮುಂಚಿನಿಂದಲೂ ಕಮಲಿಗೆ ಸಸ್ಯಾಹಾರದಲ್ಲಿದ್ದಂಥ ಪ್ರೀತಿ ಇತರ ಆಹಾರದಲ್ಲಿರಲಿಲ್ಲ. ಹಿರಿಯರ ಒತ್ತಾಯಕ್ಕೊ ಅಥವಾ ಬೇರೇನೂ ವ್ಯಂಜನಗಳಿಲ್ಲದಿರುವಾಗ ಅನಿವಾರ್ಯವೊ ಎಂಬಂತೆ ಸ್ವೀಕರಿಸುತ್ತಿದ್ದಳಷ್ಟೆ. ಹೆಬ್ಬಾರರ ಮನೆಯಲ್ಲಿಯೂ ವಿನೋದಾ ಅಥವಾ ವಾರಿಜಾ ಕೂಡಾ ಕಮಲಿಯಲ್ಲಿ ತಮಾಷೆಗೆಂದು “ನಿನಗೆ ಮಾಂಸದೂಟ ಇಷ್ಟವೊ ತರಕಾರಿಯೋ” ಎಂದು ಕೇಳಿದಾಗಲೂ ಕಮಲಿ ತನಗೆ ತರಕಾರಿಯೇ ಇಷ್ಟವೆನ್ನುತ್ತಿದ್ದಳು ಮಾತ್ರವಲ್ಲ ನಿಮ್ಮಲ್ಲಿ ಮಾಡುವ ಸಾಂಬಾರು, ಪಲ್ಯ, ಪಾಯಸಗಳೆಂದರೆ ನನಗೆ ಭಾರಿ ಇಷ್ಟವೆಂದು ಹೇಳುತ್ತಿದ್ದಳು. ಇದರಿಂದ ಹೆಬ್ಬಾರರ ಮನೆಯವರಿಗೂ ಕಮಲಿಯಲ್ಲಿ ಒಂದು ಆತ್ಮೀಯತೆ ಉಂಟಾಗಿತ್ತು.

ಇದರ ನಡುವೆ ವಿನೋದಾಳ ಮದುವೆ ಮಾಡುವುದೆಂದು ಹೆಬ್ಬಾರರ ಮನೆಯವರು ನಿಶ್ಚಯಿಸಿದರು. ಹೊಸ್ಮಾರಿಗೆ ಹತ್ತಿರದ ಕೊಪ್ಪಲ ಎಂಬಲ್ಲಿ ಗೋವಿಂದ ಭಟ್ಟರ ಮಗನಾದ ರಾಮಚಂದ್ರ ಭಟ್ಟ ಎನ್ನುವ ಹುಡುಗ. ತೋಟ, ಗದ್ದೆ ಇತ್ಯಾದಿ ಸಮೃದ್ಧಿಯಿಂದ ಕೂಡಿದ ಮನೆತನ. ಮತ್ತೊಂದು ವಿಶೇಷವೆಂದರೆ ಸಂಕ್ರೇ ಗೌಡರ ಮಗಳಾದ ಗುಲಾಬಿಯ ಮನೆಗೆ ಹತ್ತಿರದಲ್ಲೇ ಗೋವಿಂದ ಭಟ್ಟರ ಮನೆಯೂ ಇರುವುದರಿಂದ ಆ ಮನೆಯ ಎಲ್ಲ ವಿಚಾರಗಳೂ ಗುಲಾಬಿಗೆ ಗೊತ್ತಿದ್ದವು. ತವರಿಗೆ ಹೋದಂಥ ಗುಲಾಬಿ ಹೆಬ್ಬಾರರ ಮನೆಗೆ ಹೋಗಿ ಈ ಸಂಬಂಧ ಬಿಡಬೇಡಿ ಬಹಳ ಒಳ್ಳೆಯ ಮನೆತನ. ಮಾತ್ರವಲ್ಲ ಹುಡುಗನೂ ಬಹಳ ಬುದ್ಧಿವಂತನಿದ್ದು ಮನೆ ವಾರ್ತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾನೆ. ಎಂದು ಹೇಳಿದ್ದರಿಂದ ವಿನೋದಾಳ ಮನೆಯವರಿಗೂ ಬಹಳ ಧೈರ್ಯದ ಜತೆಗೆ ಖುಷಿಯೂ ಆಗಿತ್ತು.
****************************
————————————————————————————————————————————————————————————————————–

ಅಳಂಬ… ೧೦
*************
“ನನಗೆ ಬಹಳ ಖುಷಿಯಾಗುತ್ತಿದೆ ಅಣ್ಣ. ಆದರೆ ಅಪ್ಪನಲ್ಲೊಂದು ಮಾತು ಕೇಳಬೇಕು ತಾನೆ”

“ಅದರ ಬಗ್ಗೆ ಯೋಚನೆ ಬೇಡ ಕಮ್ಲಿ. ಅವರು ಅದಕ್ಕೆಲ್ಲ ಖಂಡಿತ ಬೇಡವೆನ್ನಲಾರರು. ಹಾಗೊಂದು ವೇಳೆ ಹೇಳಿದರೆ ನಾನೆ ಒಪ್ಪಿಸುತ್ತೇನೆ”

ಎಂದಾಗ ಕಮಲಿಗೆ ಹೊಸ ಆತ್ಮವಿಶ್ವಾಸ ಮೂಡಿ ತನ್ನ ಜೀವನದಲ್ಲಿ ಏನೋ ಒಂದು ಹೊಸತನ ಉಂಟಾಗುತ್ತಿದೆ ಎಂದು ಸುಪ್ತ ಪ್ರಜ್ಞೆಯೊಂದು ನುಡಿದಂತಾಗಿತ್ತು.

ಅಷ್ಟರಲ್ಲಿ ಮುತ್ತೇ ಗೌಡನ ಜತೆಗೆ ಸಂಕ್ರೇ ಗೌಡರೂ ಮನೆ ಸೇರಿದರು. ಹೆಬ್ಬಾರರಲ್ಲಿ ಹೇಳಿದ ವಿಚಾರಗಳು ಅವರ ಕಿವಿಗೂ ಬಿತ್ತು. ಕಮಲಿ ವಿದ್ಯೆ ಕಲಿಯಬಹುದೆಂಬ ಕಲ್ಪನೆಯೇ ಸಂಕ್ರೇ ಗೌಡರ ಜತೆ ಸುಂದ್ರಿಗೂ ಬಹಳ ಆನಂದದಾಯಕವೇ ಆಗಿತ್ತು. ಕಮಲಿಗಂತು ತಾನು ಬಾಲ್ಯದಲ್ಲಿ ಕಳಕೊಂಡದ್ದನ್ನು ಈ ರೀತಿಯಾಗಿ ಪಡೆಯಬಹುದೆಂಬ ಕಲ್ಪನೆಗೂ ಸಿಗದ ವಿಷಯಕ್ಕೆ ದೇವರ ಕರುಣೆಯೇ ಕಾರಣವೆಂದು ಅಂದುಕೊಂಡಳು.

ಮರುದಿವಸದಿಂದಲೇ ಕಮಲಿ ಅಣ್ಣ ರಾಮಯ್ಯ ಜತೆ ಹೆಬ್ಬಾರರ ಮನೆಗೆ ಹೋಗಲು ಪ್ರಾರಂಭಿಸಿದಳು. ಮನದಲ್ಲಿ ಏನೋ ಭೀತಿ, ಕುತೂಹಲದ ಜತೆಗೆ ಅದು ಹೇಗೆ ಅಕ್ಷರ-ಒದು ಕಲಿಯುವುದು ಎಂಬುದೆ ಮನಸ್ಸು ಯೋಚಿಸುತ್ತಿತ್ತು. ಜತೆಗೆ ತನಗಿಂತ ಹಿರಿಯರಾದ ವಿನೋದಕ್ಕ ನನ್ನಷ್ಟೇ ಪ್ರಾಯದ ವಾರಿಜಾ ಇದುವರೆಗೆ ತನ್ನೊಡನೆ ಸಲುಗೆಯಿಂದಿದ್ದರೆ ಇನ್ನು ಹೇಗೆ ವರ್ತಿಸಬೇಕು, ಹೆಬ್ಬಾರರ ಮನೆಯಲ್ಲಿ ನಿತ್ಯವೂ ಊಟ ತಿಂಡಿ ಮಾಡುವಾಗ ಮುಜುಗರವಾಗದೆ, ಬೆಳಗ್ಗಿನಿಂದ ಸಂಜೆವರೆಗೂ ಪಾಠವಿರುತ್ತದೊ, ಒಂದು ವೇಳೆ ಪಾಠವಿಲ್ಲದ ಸಮಯ ತಾನು ಹೇಗೆ ಕಳೆಯಬೇಕು.. ಹೀಗೆ ಅನೇಕ ಗೊಂದಲಗಳ ಜತೆಗೆ ಕಮಲಿ ಹೆಬ್ಬಾರರ ಮನೆಗೆ ಪ್ರವೇಶಿಸಿದಳು.

ರಾಮಯ್ಯ ಗೌಡ ಕಾರ್ತಿಕನ ಜತೆ ಕೆಲಸಕ್ಕೆ ಹೋದರೆ ಕಮಲಿ ಮನೆಯೊಳಗೆ ಹೋದಳು. ಮಿತ್ರವಿಂದಾರನ್ನು ನೋಡಿ ಕಮಲಿ ಅನುಮಾನದಿಂದ ಚಾವಡಿಗೆ ಹೋದರೆ

“ಬಾಮ್ಮ ಕಮಲಿ ಕೂತುಕೊಳ್ಳು”

ಎಂದು ಬೆಂಚನ್ನು ತೋರಿಸಿದಾಗ ಕಮಲಿ ಸಂಕೋಚದಿಂದ ಬೆಂಚಿನ ಮೂಲೆಯಲ್ಲಿ ಕುಳಿತು ಕೊಂಡಳು. ಅಷ್ಟರಲ್ಲಿ ವಿನೋದಾ ಬಂದು ಕಮಲಿಗೆ ಮುಂದಿನ ಕಲಿಕೆ ಯಾವ ರೀತಿ, ಪುಸ್ತಕ ಪೆನ್ಸಿಲಿನ ಬಳಕೆ ಹೇಗೆ, ಅಕ್ಷರಾಭ್ಯಾಸ ಮಾಡುವುದು ಹೇಗೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿ ಜತೆಗೆ ಮನಸ್ಸಿಗೆ ಧೈರ್ಯ ತುಂಬಿಸಿ ಅಂದಿನ ಪಾಠ ಪ್ರಾರಂಭಿಸಿದಳು.

ವಿನೋದಾಳಿಗೆ ಹದಿನೆಂಟು ವಯಸ್ಸಾದರೆ ಹದಿನಾರರ ವಾರಿಜಾ ಮತ್ತು ಕಮಲಿ ಒಂದೇ ಪ್ರಾಯದವರು. ಆದ್ದರಿಂದ ಅವರೊಳಗೆ ಸಹಜವಾದ ಗೆಳೆತನವೂ ಇತ್ತು. ವಾರಕ್ಕೆ ನಾಲ್ಕೈದು ದಿನ ಕಮಲಿ ಹೆಬ್ಬಾರರ ಮನೆಗೆ ಬಂದು ಓದು ಬರಹ ಕಲಿಯುವುದರಲ್ಲಿ ಮಗ್ನಳಾಗುತ್ತಿದ್ದಳು. ಆದರೆ ಆಕೆಯಲ್ಲಿ ಸ್ವಾಭಿಮಾನವೂ ಬಹಳಷ್ಟಿತ್ತು. ತಾನು ವಿದ್ಯೆ ಕಲಿಯುವ ನೆಪದಲ್ಲಿ ಹೆಬ್ಬಾರರ ಮನೆಯಲ್ಲಿ ಊಟ ತಿಂಡಿಯನ್ನು ಮಾಡುವಾಗ ತಾನು ಅವರಿಗೆ ಹೊರೆಯಾಬಾರದೆಂಬ ಪ್ರಜ್ಞೆಯೂ ಇತ್ತು. ಅದಕ್ಕಾಗಿ ಹೆಬ್ಬಾರರ ಮನೆಯಲ್ಲಿ ಕಲಿಕೆಯ ವೇಳೆಯ ಹೊರತಾಗಿ ಇದ್ದಂಥ ಸಮಯದಲ್ಲಿ ಹೆಬ್ಬಾರಮ್ಮನಿಗೆ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದಳು. ಕಸ ಗುಡಿಸುವುದು, ನೆಲ ಒರೆಸುವುದು, ಪಾತ್ರೆ ತೊಳೆಯುವುದು.. ಇತ್ಯಾದಿ. ಹೆಬ್ಬಾರರ ಮನೆಯವರು ಇದನ್ನೆಲ್ಲ ಹೇಳದಿದ್ದರೂ ಕಮಲಿ ತಾನೆ ಇದರಲ್ಲಿ ತೊಡಗಿಕೊಳ್ಳುತ್ತಿದ್ದಳು. ಹೀಗೆ ಮುಂದುವರಿದಿತ್ತು ಕಮಲಿಯ ವಿದ್ಯಾಭ್ಯಾಸ.

ದಿವಸಗಳು ಮುಂದೆ ಹೋದಂತೆ ಓದು ಬರಹ ಕಲಿಯುವ ಹುಮ್ಮಸ್ಸು ಕಮಲಿಗೆ ಹೆಚ್ಚುತ್ತಿತ್ತೇ ಹೊರತು ಉದಾಸೀನವಾಗುತ್ತಿರಲಿಲ್ಲ. ಸಾಧಾರಣ ಒಂದು ವರ್ಷದಷ್ಟು ಕಾಲದಿಂದ ಹೆಬ್ಬಾರರ ಮನೆಗೆ ಬರುತ್ತಿದ್ದ ಕಮಲಿಗೆ ಒಂದು ಹಂತದ ಅಕ್ಷರಾಭ್ಯಾಸದ ಜತೆಗೆ ಒಂದಷ್ಟು ವಾಕ್ಯಗಳನ್ನು ಜೋಡಿಸಿ ಓದುವಷ್ಟು ಜ್ಞಾನ ಬಂದಿತ್ತು. ಇದೇ ರೀತಿ ಇನ್ನೂ ಒಂದೆರಡು ವರ್ಷಗಳು ಸಾಧನೆ ಮಾಡಿದರೆ ಸಣ್ಣ ಸಣ್ಣ ಪುಸ್ತಕಗಳನ್ನು ಓದಬಹುದೆಂಬ ಧೈರ್ಯವೂ ಕಮಲಿಗೆ ಬಂದಾಗ ಬದುಕು ಅದೆಷ್ಟು ಸುಂದರ ಎಂದೆನಿಸಿತ್ತು. ಮಾತ್ರವಲ್ಲ ಕಮಲಿಯು ಬುದ್ಧಿವಂತಳಾದ್ದರಿಂದ ಬ್ರಾಹ್ಮಣರ ಮನೆಗಳಿಗೂ ತಮ್ಮ ಮನೆಗೂ ಇರುವ ಅಗಾಧ ವ್ಯತ್ಯಾಸಗಳ ಅರಿವೂ ಆಗಿತ್ತು. ಅನುಕೂಲದಲ್ಲಿ ತಮಗಿಂತಲೂ ಕಡಿಮೆ ಆದಾಯವಿರುವ ಬ್ರಾಹ್ಮಣರ ಮನೆತನಗಳು ತಮಗಿಂತಲೂ ಶಿಸ್ತು ಬದ್ಧವಾಗಿರುವುದು ಹೇಗೆಂಬ ಸೂಕ್ಷ್ಮವನ್ನೂ ಕಮಲಿಯು ಗುರುತಿಸಿದ್ದಳು. ಮಾತ್ರವಲ್ಲ ಇದೆಲ್ಲದಕ್ಕೂ ವಿದ್ಯೆಯೇ ಕಾರಣವೆಂಬ ಸತ್ಯವೂ ಆಕೆಗೆ ತಿಳಿದಿತ್ತು. ಆದ್ದರಿಂದ ತಾನು ಕೂಡ ವಿದ್ಯೆ ಕಲಿತು ಇಂಥ ಸಂಸ್ಕಾರಗಳನ್ನು ಜೀವನದಲ್ಲಿ ಸಾಧ್ಯವಾದಷ್ಟು ಅಳವಡಿಸಿಕೊಂಡರೆ ಹೇಗಿರಬಹುದು ಎಂದು ಕಲ್ಪಿಸಿಕೊಂಡಾಗ ಕಮಲಿಗೆ ಮನದೊಳಗೆ ಅದೆಂಥದೊ ಸುಖದ ಅನುಭವವಾಗಿತ್ತು.

Advertisement:

ನೆಲ್ಲಿತಡ್ಕದಲ್ಲಿರುವ ಬ್ರಾಹ್ಮಣರ ಮನೆಗಳು ಬರಿದೆ ಆರು ಮಾತ್ರ. ಅದರಲ್ಲಿ ಗಣೇಶ ಹೆಬ್ಬಾರರದ್ದು ಮೂಲ ಮನೆ. ಇವರು ಮಹಾರಾಷ್ಟ್ರದಿಂದ ವಲಸೆ ಬಂದವರಾದರೂ ಸ್ಥಳೀಯರೊಂದಿಗೆ ಬೆರೆತು ಒಂದೇ ಮನೆಯಾಗಿದ್ದಲ್ಲಿಂದ ಐದು ಮನೆಗೆ ವಿಸ್ತಾರಗೊಂಡು ನೆಲ್ಲಿತಡ್ಕ ಎಂಬುದು ಬ್ರಾಹ್ಮಣರೇ ಹೆಚ್ಚಿರುವ ವಠಾರವಾಯಿತು. ಹಾಗೆಂದು ಇತರರು ಯಾರೂ ಇರಲಿಲ್ಲವೆಂದಲ್ಲ. ಒಂದೇ ಕೂಗಳತೆಯಲ್ಲಿ ಮಟ್ಕ್ಯೆ ಎಂಬಲ್ಲಿ ನಾಲ್ಕೈದು ಮನೆಗಳ ಗುಂಪು ಇದ್ದರೆ ನೆಲ್ಲಿತಡ್ಕದಲ್ಲೇ ಎರಡು ಮನೆ ಬಿಲ್ಲವರದ್ದೂ ಇದ್ದವು. ಸುತ್ತ ಮುತ್ತ ಇತರ ಬ್ರಾಹ್ಮಣರ ಮನೆಗಳಿಲ್ಲದ್ದರಿಂದ ಬ್ರಾಹ್ಮಣೇತರರು ನಾಗ-ಭೂತಾರಾಧನೆ ಮುಂತಾದ ದೇವತಾ ಕಾರ್ಯಕ್ರಮಗಳ ಪೂಜೆ ಪನಸ್ಕಾರಗಳಿಗೆ ಚಿತ್ಪಾವನ ಬ್ರಾಹ್ಮಣರನ್ನೇ ಆಶ್ರಯಿಸಿದ್ದರಿಂದ ನೆಲ್ಲಿತಡ್ಕದ ಬ್ರಾಹ್ಮಣರಿಗೆ ಅದ್ಯಾವ ಕಾಲದಲ್ಲೊ ಹೆಬ್ಬಾರರೆಂಬ ಪಟ್ಟ ಬಂದಿತ್ತು. ಅಂದಿನಿಂದ ಇಂದಿನವರೆಗೂ ಇಲ್ಲಿರುವ ಎಲ್ಲ ಕುಟುಂಬಗಳೂ ಹೆಬ್ಬಾರರೆಂದೇ ಪ್ರಖ್ಯಾತಿ. ಸಾಧಾರಣ ಇಪ್ಪತ್ತೈದು ಏಕರೆಯಷ್ಟು ವಿಸ್ತಾರವಾದ ಕೃಷಿಗೆ ಯೋಗ್ಯವಾದ, ನೀರಿನಿಂದ ಸಮೃದ್ಧಿಯಾದ ತೋಟ ಅಥವಾ ಭತ್ತದ ಗದ್ದೆಗಳಿಗೆ ಸುತ್ತಲೂ ಹೊರ ಆವರಣದಲ್ಲಿ ಈ ಮನೆಗಳಿದ್ದವು. ಪ್ರತಿಯೊಂದು ಮನೆಯೂ ಒಂದಕ್ಕೊಂದು ಕಾಣುವಷ್ಟು ಹತ್ತಿರವಿದ್ದುದರಿಂದ ಯಾರಿಗೂ ತಮ್ಮ ಮನೆ ಒಂಟಿಯೆಂದೆನಿಸುತ್ತಿರಲಿಲ್ಲ. ಆದರೆ ಸುತ್ತಲೂ ಕಾಡು ಇದ್ದುದರಿಂದ ಸಹಜವಾಗಿ ಒಂದಷ್ಟು ಕಾಡು ಪ್ರಾಣಿಗಳ ಭಯ ಇದ್ದೇ ಇರುತ್ತಿತ್ತು. ಅದರ ಹೊರತು ಭದ್ರತೆಗೆ ಯಾವ ಕೊರತೆಯೂ ಇರದ ಸುಂದರ ಬದುಕಿಗೆ ಸಾಕ್ಷಿಯಾದ ಹಳ್ಳಿಯೇ ಈ ನೆಲ್ಲಿತಡ್ಕ. ಓದಿ.. ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ.. ಮುಂದೆ ಇನ್ನೂ ಇದೆ..
*****************************

ಅಳಂಬ.. ೯
**********
ಅದು ಹೇಗೋ ಹೆಬ್ಬಾರರ ಮಕ್ಕಳಾದ ವಾರಿಜಾ ಮತ್ತು ವಿನೋದಾಳಿಗೆ ಈ ವಿಷಯ ತಿಳಿದಾಗ ಹೌದಲ್ಲ ಕಮಲಿಯ ಆಸೆಯನ್ನು ನಾವ್ಯಾಕೆ ತೀರಿಸಬಾರದು ಎಂದು ಅಂದುಕೊಂಡರು. ಅಂತೆಯೇ ಸೋದರಿಯರಿಬ್ಬರೂ ಮಾತಾಡಿಕೊಂಡು ಒಂದು ದಿನ ಅಮ್ಮನಲ್ಲಿ

“ಅಮ್ಮ.. ಸಂಕ್ರೇ ಗೌಡರ ಮಗಳು ಕಮಲಿ ಇದ್ದಾಳಲ್ಲ ಅವಳಿಗೆ ಶಾಲೆಗೆ ಹೋಗಬೇಕೆಂದು ಬಹಳ ಆಸೆ ಇದೆಯಂತೆ ರಾಮಯ್ಯ ಗೌಡ್ರು ಮೊನ್ನೆ ಅಡಿಕೆ ಕೊಯ್ಲಿಗೆ ಬಂದವರು ಹೇಳಿದರು. ಪಾಪ ಅವಳ ಆಸೆಯನ್ನು ಹೇಗೆ ತೀರಿಸುವುದೆಂದು ನಾವು ಮಾತಾಡಿಕೊಂಡು ಒಂದು ತೀರ್ಮಾನಕ್ಕೆ ಬಂದಿದ್ದೇವೆ ನೀವು ಹೂಂ ಎಂದರೆ ಹೇಳುತ್ತೇವೆ”

ಎಂದಾಗ ಮಿತ್ರವಿಂದಾ

“ಹೇಳಿ ಮಕ್ಕಳೆ ಸಂಕ್ರೇ ಗೌಡರಾಗಲಿ ಅಥವಾ ಅವರ ಮನೆಯವರಾಗಲಿ ನಮಗೆ ಭೇದವೆಲ್ಲಿದೆ? ಹೇಳಿ ಮಕ್ಕಳೆ ನಮ್ಮಿಂದ ಏನು ಸಹಾಯ ಆಗುವುದೊ ಅದನ್ನು ಮಾಡುವ”

ಎಂದು ಹೇಳಿದರು.

“ಏನಿಲ್ಲ.. ಹೇಗೂ ಬೆಳಗ್ಗೆ ಸಂಕ್ರೇ ಗೌಡರಾಗಲಿ ರಾಮಯ್ಯ ಗೌಡರಾಗಲಿ ನಮ್ಮ ವಠಾರಕ್ಕೆ ಕೆಲಸಕ್ಕೆ ಬರುತ್ತಾರೆ. ಯಾರ ಮನೆಗೆ ಬಂದರೂ ನಮ್ಮ ಮನೆಗೆ ಹತ್ತಿರವೇ ಇದೆ ತಾನೆ. ಅವರ ಜತೆ ಕಮಲಿ ಬಂದರೆ ನಮ್ಮಿಂದ ಸಾಧ್ಯವಾದಷ್ಟು ಅಥವಾ ಕಮಲಿಗೆ ಉತ್ಸಾಹ ಇದ್ದಷ್ಟು ಕಾಲ ಅಕ್ಷರಾಭ್ಯಾಸ, ಓದು ಬರಹ ಮುಂತಾದ ವಿಷಯಗಳನ್ನು ಕಲಿಸಬಹುದು ತಾನೆ. ಪಾಪ ಅವಳಿಗೆ ವಿದ್ಯೆ ಕಲಿಯುವ ಹಸಿವಿರುವಾಗ ನಮ್ಮಿಂದ ಕೂಡಿದ ಪಾಠ ಮಾಡಿದರೆ ಹೇಗೆ”

ಎಂದು ಮಕ್ಕಳು ತಮ್ಮ ಅಭಿಪ್ರಾಯ ತಿಳಿಸಿದರು.

“ಯಾರು ಬೇಡವೆನ್ನುತ್ತಾರೆ ಮಕ್ಕಳೆ. ಅವಳೂ ನಿಮ್ಮಂತೆಯೆ ಹುಡುಗಿ ತಾನೆ. ನಿಮ್ಮಂತೆ ಆಸೆ ಆಕಾಂಕ್ಷೆಗಳು ಅವಳಿಗಿದ್ದರೆ ಅದು ಸಹಜವಷ್ಟೆ. ಖಂಡಿತ ಬರಲಿ. ವಿದ್ಯೆಯನ್ನು ಕಲಿಸುವ ಅವಕಾಶ ಎಲ್ಲರಿಗೂ ಸಿಗಲಾರದು. ನಿಮ್ಮಿಂದಾಗಿ ಒಂದು ಹೆಣ್ಣು ಮಗು ವಿದ್ಯೆ ಕಲಿತು ಜಾಣೆಯಾದರೆ ನಮಗೂ ಹೆಮ್ಮೆಯೇ.”

ಎಂದು ಮಿತ್ರವಿಂದಾ ಹೇಳುವಾಗ ವಿನೋದಾ ವಾರಿಜಾಳಿಗೂ ಭಾರಿ ಖುಷಿಯಾಗಿತ್ತು. ಅಂತೆಯೇ ಮರುದಿವಸ ರಾಮಯ್ಯ ಗೌಡ ತೋಟದ ಕೆಲಸಕ್ಕೆ ಬಂದಾಗ ಮಿತ್ರವಿಂದಾ

“ರಾಮಯ್ಯ ನಿನ್ನ ತಂಗಿಗೆ ಕಲಿಯಬೇಕೆಂಬ ಆಸೆ ಇದೆ ಎಂದು ಹೇಳಿದ್ದಿಯಲ್ಲ. ಅದಕ್ಕಾಗಿ ಒಂದು ವ್ಯವಸ್ಥೆ ಇದೆ. ಅದೇನೆಂದರೆ ನೀನು ನಿತ್ಯವೂ ಕೆಲಸಕ್ಕೆ ಬರುವಾಗ ಕಮಲಿಯನ್ನು ಜತೆಗೆ ಕರಕೊಂಡು ಬಾ. ಒಂದು ವೇಳೆ ನಿತ್ಯ ಆಗದಿದ್ದರೆ ಪುರುಸೊತ್ತಿದ್ದ ದಿನಗಳಲ್ಲಿ ಬಂದರೂ ಸಾಕು. ವಿನೋದಾ ಅಥವಾ ವಾರಿಜಾ ಇವರಲ್ಲಿ ಯಾರಾದರೊಬ್ಬರು ಕಮಲಿಗೆ ಅಕ್ಷರಾಭ್ಯಾಸ ಮಾಡಿಸಿ ಓದು ಬರಹ ಬರುವಲ್ಲಿವರೆಗೆ ಕಲಿಸುತ್ತಾರೆ. ಬೇಡವೆನ್ನಬೇಡ ಆ ಮಗುವಿನ ಸಣ್ಣ ಆಸೆಯನ್ನು ನಾವೆಲ್ಲ ಸೇರಿ ನೆರವೇರಿಸೋಣ”

ಎಂದಾಗ ರಾಮಯ್ಯ ಗೌಡನಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ.

“ಅಮ್ಮ ನನಗೆ ಏನು ಹೇಳಬೇಕೆಂದೇ ತಿಳಿಯುವುದಿಲ್ಲ. ನೀವು ಅಷ್ಟು ಹೇಳುವಾಗ ಬೇಡವೆನ್ನಲೂ ಆಗದು. ನೋಡೋಣ ಕಮಲಿ ಒಪ್ಪಿದರೆ ನಮ್ಮಿಂದೇನೂ ಅಭ್ಯಂತರವಿಲ್ಲ. ಅಪ್ಪನೂ ಬೇಡವೆನ್ನಲಿಕ್ಕಿಲ್ಲ. ನಮ್ಮಲ್ಲಿ ಯಾರಿಗೂ ವಿದ್ಯಾಭ್ಯಾಸದ ಯೋಗವಿಲ್ಲ. ಕಮಲಿಯಾದರೂ ಕಲಿಯಲಿ. ನನಗಂತು ಬಹಳ ಸಂತೋಷವೆ.”

ಎಂದು ಹೊಸ ಹುರುಪಿನೊಂದಿಗೆ ರಾಮಯ್ಯ ಗೌಡ ತೋಟದ ಕಡೆ ಹೊರಟನು.

ರಾಮಯ್ಯ ಗೌಡ ಕೆಲಸ ಬಿಟ್ಟು ಮನೆಗೆ ಹೋದವನೆ ಕಮಲಿಯನ್ನು ಹತ್ತಿರ ಕರೆದನು.

“ಏನಣ್ಣ ಏನಾದರು ತಿಂಡಿ ತಂದೆಯಾ”

ಎಂದು ಅಣ್ಣನ ಬಳಿಗೆ ಬಂದು ಚೀಲ ಹುಡುಕಾಡತೊಡಗಿದಳು. ಯಾಕೆಂದರೆ ಹೆಬ್ಬಾರರ ಮನೆಯಲ್ಲಾಗಲಿ ವಠಾರದ ಯಾರ ಮನೆಗಳೇ ಆಗಲಿ ಏನಾದರು ವಿಶೇಷವಿದ್ದಾಗ ಸಂಕ್ರೇ ಗೌಡರ ಮನೆಗೆ ಒಂದು ಪಾಲು ಇದ್ದೇ ಇರುತ್ತಿತ್ತು. ಆದ್ದರಿಂದ ವಾರದಲ್ಲಿ ಒಂದೆರಡು ದಿನವಾದರೂ ಕಮಲಿಗೆ ಬ್ರಾಹ್ಮಣರ ಮನೆಯ ತಿಂಡಿ ತಿನಿಸುಗಳ ಸವಿಯು ಸಿಗುತ್ತಿತ್ತು ಮಾತ್ರವಲ್ಲ ಅದಕ್ಕಾಗಿ ಅವಳು ಕಾದುಕೊಂಡೂ ಇರುತ್ತಿದ್ದಳು. ಅಂತೆಯೇ ಸಂಕ್ರೇ ಗೌಡರ ಮನೆಯಲ್ಲಿ ಕಮಲಿಯು ಎಲ್ಲರಿಗಿಂತ ಸಣ್ಣವಳಾದ್ದರಿಂದ ಎಲ್ಲರ ಮುದ್ದಿನ ಕೂಸಾಗಿದ್ದಳು. ಯಾವುದೇ ವಿಷಯದಲ್ಲಿ ಅವಳಿಗೆ ಯಾರು ಕೂಡ ಬೇಸರ ಬರುವಂತೆ ವರ್ತಿಸುತ್ತಿರಲಿಲ್ಲ. ಅದಕ್ಕೆ ತಕ್ಕಂತೆ ಕಮಲಿ ಕೂಡ ಬಹಳ ಗುಣವಂತೆಯಾಗಿದ್ದಳು. ಯಾರೊಂದಿಗೂ ಸಿಡುಕದೆ ಎಲ್ಲರಿಗೂ ಎಲ್ಲ ಕೆಲಸಗಳಲ್ಲೂ ಸಹಾಯ ಮಾಡುತ್ತ ಮನೆಗೊಂದು ಶೋಭೆಯಂತಿದ್ದಳು. ಅದಕ್ಕಾಗಿ ಎಲ್ಲರೂ ಆಕೆಯೊಂದಿಗೆ ಆತ್ಮೀಯವಾದ ಸಲುಗೆಯೊಂದಿಗೆ ರೇಗಿಸುತ್ತ, ತಮಾಷೆ ಮಾಡುತ್ತ, ಕೀಟಲೆ ಕೊಡುತ್ತ ಇರುತ್ತಿದ್ದರು. ಆದರೆ ಅದರಿಂದ ಕಮಲಿಗೆ ಖುಷಿಯಾಗುತ್ತಿತ್ತೇ ಹೊರತು ಯಾರೊಡನೆಯೂ ಬೇಸರಿಸುತ್ತಿರಲಿಲ್ಲ.

ಚೀಲದಲ್ಲಿ ಎಲೆ ಅಡಿಕೆಯ ಪೆಟ್ಟಿಗೆಯ ಹೊರತು ಏನೂ ಇರಲಿಲ್ಲ. ಆದನ್ನು ಅಲ್ಲಿಗೇ ಕುಕ್ಕಿ

“ತಿಂಡಿಯೂ ಇಲ್ಲ ಮಣ್ಣಾಂಗಟ್ಟಿಯೂ ಇಲ್ಲ. ಮತ್ಯಾಕೆ ಕರೆದದ್ದು”

ಎಂದು ಅಣ್ಣನ ಬೆನ್ನಿಗೊಂದು ಗುದ್ದು ಕೊಟ್ಟು ಹೊರಡಲನುವಾದಾಗ

“ಕಮ್ಲಿ ಎಲ್ಲಿಗೆ ಓಡುತ್ತಿ ಬಾ ಇಲ್ಲಿ ನಿನಗೊಂದು ಶುಭ ಸಮಾಚಾರ ಹೇಳಲಿಕ್ಕಿದೆ”

ಎಂದು ಕಮಲಿಯ ಕೈ ಹಿಡಿದು ಜಗಲಿಯ ಪಕ್ಕದಲ್ಲೇ ಕೂರಿಸಿಕೊಂಡ

“ಶುಭ ಸಮಾಚಾರ.. ಏನೋ ಅದು”

“ನಿನಗೆ ಶಾಲೆಗೆ ಸೇರಿಸೋಣವೆಂದು ಅಂದುಕೊಂಡಿದ್ದೇನೆ.. ಹೇಗೆ?”

“ಹೋಗಣ್ಣ ಶಾಲೆಗೆ ಹೋಗುವ ಪ್ರಾಯದಲ್ಲಿ ಹೋಗಲಾಗಲಿಲ್ಲ. ಈಗ ತಮಾಷೆ ಮಾಡುತ್ತೀಯ..”

“ತಮಾಷೆ ಅಲ್ಲ ಕಮ್ಲಿ. ನಿನಗೆ ಓದು ಬರಹ ಕಲಿಯುವ ಮನಸ್ಸು ಇನ್ನೂ ಇದ್ದರೆ ಅದಕ್ಕೊಂದು ವ್ಯವಸ್ಥೆ ಇದೆ”

ಇಷ್ಟು ಹೇಳುವಾಗ ಕಮಲಿಗೆ ತನ್ನಲ್ಲಿ ಸುಪ್ತವಾಗಿದ್ದ ಆಸೆಗೆ ನೀರೆರೆಚಿದಂತಾಗಿ ಅದು ಚಿಗುರೊಡೆಯಬಹುದೆ ಎಂಬ ಸಂಶಯವೂ ಬಲವಾಗತೊಡಗಿತು.

“ಕುತೂಹಲ ಹೆಚ್ಚಿಸಬೇಡ ಬೇಗನೆ ಹೇಳಿಬಿಡು”

ಎಂದು ಕಮಲಿ ಚಡಪಡಿಸಿದಾಗ

“ಶಾಲೆಯೂ ಇಲ್ಲ ಏನೂ ಇಲ್ಲ ತಮಾಷೆಗೆ ಹೇಳಿದೆ. ಆದರೆ ನಿರಾಶಳಾಗಬೇಡ ಹೆಬ್ಬಾರರ ಮನೆಗೆ ಇಂದು ಕೆಲಸಕ್ಕೆ ಹೋಗಿದ್ದೆ. ನಿನಗೆ ವಿದ್ಯೆ ಕಲಿಯುವ ಆಸೆ ಬಹಳಷ್ಟಿದೆ ಎಂದು ನಾನು ಯಾವತ್ತೋ ಒಂದು ದಿನ ಹೆಬ್ಬಾರಮ್ಮನಲ್ಲಿ ಹೇಳಿದ್ದೆ. ಇವತ್ತು ನನ್ನನ್ನು ಕಂಡವರೆ ಹೆಬ್ಬಾರಮ್ಮ ‘ಕಮಲಿಗೆ ನನ್ನ ಮಕ್ಕಳು ಓದು ಬರಹ ಕಲಿಸಬೇಕೆಂದುಕೊಂಡಿದ್ದಾರೆ ಆದ್ದರಿಂದ ನೀನು ಕೆಲಸಕ್ಕೆ ಬರುವಾಗ ಕರಕೊಂಡು ಬಾ. ಮತ್ತೆ ನಿನ್ನೊಡನೆಯೇ ವಾಪಸು ಹೋಗಬಹುದು
ಊಟ ತಿಂಡಿ ಎಲ್ಲ ನಮ್ಮಲ್ಲೇ ಆಗುತ್ತದೆ. ಅದರ ಬಗ್ಗೆ ಯೋಚಿಸಬೇಡ.’ ಎಂದು ಹೇಳಿದರು. ನನಗಾದರೊ ಬಹಳ ಖುಷಿಯಾಗಿತ್ತು. ನಿನ್ನಲ್ಲಿ ಕೇಳಿ ನಾಳೆ ಹೇಳುತ್ತೇನೆ ಎಂದು ಮಾತು ಕೊಟ್ಟು ಬಂದಿದ್ದೇನೆ. ಇನ್ನು ನಿನ್ನ ನಿರ್ಧಾರ”

ಎಂದು ಹೇಳಿ ರಾಮಯ್ಯ ಗೌಡ ಕಮಲಿಯ ಮುಖವನ್ನು ನೋಡಿದನು. ಕಮಲಿಗಾದರೊ ಇದು ಕನಸೊ ಅಥವಾ ವಾಸ್ತವವೊ ಎಂದೇ ತಿಳಿಯಲಿಲ್ಲ. ನನ್ನ ಜೀವನದಲ್ಲಿ ಹೊಸ ಯುಗ ಪ್ರಾರಂಭವಾದ ಅನುಭವದೊಂದಿಗೆ ಕೂಡಲೆ ತನ್ನ ಒಪ್ಪಿಗೆಯನ್ನು ಕೊಟ್ಟಳು ಕಮಲಿ… ಓದಿ.. ಪ್ರೋತ್ಸಾಹಿಸಿ.. ಪ್ರತಿಕ್ರಿಯಿಸಿ.. ಮುಂದೆ ಇನ್ನೂ ಇದೆ..
***************************
————————————————————————

ಅಳಂಬ.. ೭
*****


ಹುಲಿ ಕಾಣೆಯಾದ ಪ್ರಕರಣ ನಡೆದು ವರುಷ ಎರಡಾದರೂ ಒಂದಿಷ್ಟೂ ಸುಳಿವು ತಿಳಿಯದಿದ್ದುದರಿಂದ ಇದರ ತೀವ್ರತೆ ಕಡಿಮೆಯಾದರೂ ಒಳಗಿಂದೊಳಗೆ ಅನ್ವೇಷಣೆಯು ಯಾರಿಗೂ ತಿಳಿಯದೆ ಮುಂದುವರಿದಿತ್ತು. ಇತ್ತ ಗಣೇಶ ಹೆಬ್ಬಾರರ ಕೊನೆಯ ಮಗನಾದ ಪ್ರಕಾಶನ ವಿದ್ಯಾಭ್ಯಾಸವೂ ಮುಗಿದಿತ್ತು. ಆದರೆ ಆತನಿಗೆ ಮನೆಯಲ್ಲಿ ವಿದ್ಯೆ ಇಲ್ಲದೆ ಕೂರುವಲ್ಲಿ ಮನಸ್ಸಿರಲಿಲ್ಲ. ತಾನು ಏನಾದರೊಂದು ಸಾಧನೆ ಮಾಡಬೇಕು ಮತ್ತು ಮನೆಗೆ ಸಹಾಯಕನಾಗಬೇಕೆಂಬ ಹಂಬಲವಿತ್ತು. ಆದರೆ ಏನು ಮಾಡಬೇಕೆನ್ನುವ ಬಗ್ಗೆ ಸ್ಪಷ್ಟತೆ ಇರಲಿಲ್ಲ. ವ್ಯಾಪಾರ ಮಾಡಲು ಬಂಡವಾಳ, ಅನುಭವದ ಕೊರತೆ. ಹೊಸತಾದ ಜಮೀನು ಕೊಳ್ಳಲು ಉತ್ತಮವಲ್ಲದ ಆರ್ಥಿಕ ಸ್ಥಿತಿ. ಸಂಗೀತ ಸಾಹಿತ್ಯದ ಬಗ್ಗೆ ಒಲವಿದ್ದರೂ ಅನ್ನ ಕೊಡುವಲ್ಲಿ ಅದು ಪ್ರಯೋಜನವಿಲ್ಲವೆಂಬ ಭಾವ ಅಥವಾ ವರ್ತಮಾನದ ವಾಸ್ತವ. ಹೋಟೇಲು-ಅಂಗಡಿ ಮಾಡೋಣವೆಂದರೆ ನೆಲ್ಲಿತಡ್ಕದಂಥ ಹಳ್ಳಿಯಲ್ಲಿ ಅದು ಉಪಯೋಗವಿಲ್ಲದ ವಿಚಾರ. ಹಾಗೆಂದು ಕುತ್ಲೂರು ಅಥವಾ ನಾರಾವಿಯಂಥ ಸಣ್ಣ ಊರುಗಳಲ್ಲಿ ಅಂಗಡಿ-ಹೋಟೆಲುಗಳು ಹಲವಾರು ಇದ್ದುದರಿಂದ ಹೊಸತಾಗಿ ಪ್ರಾರಂಭಿಸಿದವನಿಗೆ ಅದರಲ್ಲಿ ಮುಂದೆ ಬರಬೇಕಾದರೆ ವರುಷಗಳೇ ಬೇಕಾಗಬಹುದಾದ ಪರಿಸ್ಥಿತಿ. ಮುಂದೆ ಅಡುಗೆಯೋ ಪೌರೋಹಿತ್ಯವೊ ಕಲಿಯೋಣವೆಂದರೆ ನೆಲ್ಲಿತಡ್ಕದಲ್ಲಿ ಕಲಿಸುವವರು ಯಾರೂ ಇಲ್ಲ. ಹೊರಗೆ ಅಂದರೆ ಸೂಳಬೆಟ್ಟು-ಫಂಡಿಜೆ ಮುಂತಾದ ಊರುಗಳಿಗೆ ಹೋಗಿ ಕಲಿತು ಬಂದರೂ ನೆಲ್ಲಿತಡ್ಕದಂಥ ಊರಿಗೆ ಹತ್ತಾರು ಮೈಲು ನಡೆದುಕೊಂಡು ಬಂದು ಯಾರೂ ಹೇಳುವವರಿಲ್ಲ. ಹೀಗೆ ತೋಟದಲ್ಲಿ ದುಡಿಯುವ ಹೊರತಾದ ಯಾವುದೇ ದಾರಿಗಳು ಕಾಣುತ್ತಿರಲಿಲ್ಲ. ಆದರೂ ಏನಾದರು ಮಾಡಬೇಕೆಂಬ ಬಯಕೆ ಇದ್ದುದರಿಂದ ಪ್ರಕಾಶನು ತನ್ನ ಅಣ್ಣ ಕಾರ್ತಿಕನೊಡನೆ ಸಮಾಲೋಚಿಸುತ್ತಲೇ ಇದ್ದನು. ಕಾರ್ತಿಕನಿಗೆ ತಮ್ಮನ ವಿಚಾರದಲ್ಲಿ ಸಹಮತವಿತ್ತಾದರೂ ಏನು ಮಾಡಬಹುದೆಂಬ ಪ್ರಶ್ನೆಯೂ ಭೂತಾಕಾರದಂತೆ ಕಾಣುತ್ತಿತ್ತು.

“ಸ್ವಲ್ಪ ಸಮಯ ಮನೆಯಲ್ಲೇ ಕೃಷಿ ಕಾರ್ಯಗಳಲ್ಲಿ ಸಹಾಯಕನಾಗಿರು. ಮುಂದೆ ಏನಾದರೂ ಅವಕಾಶಗಳನ್ನು ಹುಡುಕೋಣ” ಎಂದು ಪ್ರಕಾಶನಿಗೆ ಅಣ್ಣ ಕಾರ್ತಿಕನು ಧೈರ್ಯ ಹೇಳಿದಾಗ. ಅಣ್ಣ ಹೇಳುವುದು ಸರಿ. ನಾನಿನ್ನೂ ಸಣ್ಣವನು ಒಂದೆರಡು ವರ್ಷ ಮನೆಯಲ್ಲೇ ಇದ್ದರೆ ವ್ಯವಹಾರದ ಸೂಕ್ಷ್ಮತೆಗಳ ಅರಿವಾಗುತ್ತದೆ. ನಂತರ ನನ್ನ ಆಯ್ಕೆ ಏನೆಂದು ನಿರ್ಧರಿಸಬಹುದೆಂದು ಅಣ್ಣ, ತಂದೆಯೊಡನೆ ತಾನೂ ತೋಟದ ಕೆಲಸಗಳಲ್ಲಿ ತೊಡಗಿಸಿಕೊಂಡನು. ಆದರೆ ಕಾರ್ತಿಕನಿಗೆ ತಮ್ಮನಿಗೆ ಸ್ವಂತ ಕಾಲ ಮೇಲೆ ನಿಲ್ಲುವಂಥ ಯಾವುದಾದರೊಂದು ವ್ಯವಸ್ಥೆ ಮಾಡಿಕೊಡಬೇಕೆಂಬ ವಿಚಾರ ಸದಾ ತಲೆಯೊಳಗೆ ಮನೆ ಮಾಡಿಕೊಂಡಿತ್ತು.

ಮನೆಗೆ ಬೇಕಾದ ದಿನಸಿಯಾಗಲಿ, ಸೊಸೈಟಿಯಿಂದ ಸಿಗುವ ಸಕ್ಕರೆ-ಚಿಮಿಣಿ ಎಣ್ಣೆ-ಕೃಷಿ ಸಾಲವೇ ಆಗಲಿ, ಇನ್ನಿತರ ಯಾವುದೇ ವ್ಯವಹಾರವಾಗಲಿ ನೆಲ್ಲಿತಡ್ಕದಿಂದ ಎರಡು ಮೈಲಿಗಳಷ್ಟು ನಡೆದುಕೊಂಡೇ ಹೋಗಿ ಬರಬೇಕು. ಸಾಧಾರಣವಾಗಿ ವಾರಕ್ಕೆ ನಾಲ್ಕಾರು ಬಾರಿ ಕಾರ್ತಿಕನ ಸವಾರಿ ಸುಳ್ಕೇರಿಗೆ ಇದ್ದೇ ಇರುತ್ತಿತ್ತು. ಆದ್ದರಿಂದ ಸುಳ್ಕೇರಿಯಲ್ಲಿದ್ದವರೆಲ್ಲರೂ ಕಾರ್ತಿಕನಿಗೆ ಪರಿಚಯದವರೇ ಆಗಿದ್ದರು. ಅಂತೆಯೇ ಸುಳ್ಕೇರಿಗೆ ಹೋದರೆ ಕಾರ್ತಿಕ ಪುರುಷೋತ್ತಮ ಭಟ್ರ ಹೋಟೇಲಿಗೆ ಹೋಗದೆ ಬರುತ್ತಿರಲಿಲ್ಲ. ಮೂವತ್ತು ಪೈಸೆಗೆ ಎರಡು ಇಡ್ಲಿ, ಇಪ್ಪತ್ತು ಪೈಸೆಗೆ ಒಂದು ಗ್ಲಾಸ್ ಕಾಫಿ ಸೇವಿಸಿದಾಗಲೆ ನೆಲ್ಲಿತಡ್ಕದಿಂದ ನಡೆದು ಬಂದ ಸುಸ್ತು ನಿವಾರಣೆಯಾಗುವುದು. ಅಂತೆಯೆ ಒಂದು ದಿನ ಹೋಟೇಲಿನಲ್ಲಿ ಲೋಕಾಭಿರಾಮ ಮಾತಾಡುವಾಗ ಹೋಟೇಲಿನ ಪಕ್ಕದಲ್ಲಿ ಅಂಗಡಿಗಾಗುವಂಥ ಕಟ್ಟಡವೊಂದು ಖಾಲಿ ಇದೆ. ಇಲ್ಲಿ ಯಾರಾದರು ವ್ಯಾಪಾರ ಮಾಡಬಹುದೆಂದು ಪುರುಷೋತ್ತಮ ಭಟ್ಟರೆಂದಾಗ ಕಾರ್ತಿಕನಿಗೆ ಯಾಕೆ ಇಲ್ಲೊಂದು ಅಡಿಕೆ ವ್ಯಾಪಾರ ಪ್ರಾರಂಭಿಸಬಾರದು ಎಂಬ ಯೋಚನೆಯೊಂದು ಬಂದದ್ದೇ ತಡ “ಪುರುಷೋತ್ತಮಣ್ಣ ನನ್ನ ತಮ್ಮ ಪ್ರಕಾಶನಿಗೆ ಒಂದು ಉದ್ಯೋಗದ ಅವಶ್ಯಕತೆ ಇದೆ. ಇದೇ ಕಟ್ಟಡದಲ್ಲಿ ಅಡಿಕೆ ಮಂಡಿ ಪ್ರಾರಂಭಿಸಿದರೆ ಹೇಗೆ” ಎಂದನು. ಪುರುಷೋತ್ತಮ ಭಟ್ಟರಿಗೆ ಇದು ಖಂಡಿತ ಆಗಬಹುದೆಂದು ತೋರಿದ್ದರಿಂದ ಕಾರ್ತಿಕನಿಗೆ ಪ್ರೋತ್ಸಾಹಿಸಿದ್ದು ಮಾತ್ರವಲ್ಲ “ಖಂಡಿತ ಮುಂದುವರಿಸು. ಇಲ್ಲಿ ಸುತ್ತಮುತ್ತ ಎಲ್ಲಿಯೂ ಅಡಿಕೆ ವ್ಯಾಪಾರಿಗಳಿಲ್ಲ. ಒಂದು ವೇಳೆ ಹಣದ ಅವಶ್ಯಕತೆ ಇದ್ದರೆ ನನ್ನಲ್ಲಿ ಕೇಳು. ಸಹಾಯ ಮಾಡುತ್ತೇನೆ. ಸ್ವಲ್ಪ ಸಮಯ ಅನುಭವಕ್ಕೆ ಬೇಕಾಗುತ್ತದೆ. ಬಾಡಿಗೆ ಕಷ್ಟವಾದರೆ ಎರಡು ತಿಂಗಳ ನಂತರ ಕೊಟ್ಟರೂ ಸಾಕು. ನಮ್ಮವರೆ ಜತೆಗಿದ್ದರೆ ನನಗೂ ಅನುಕೂಲ. ಯೋಚನೆ ಮಾಡು. ಅಡಿಕೆ ವ್ಯಾಪಾರಕ್ಕೆ ಮುಂದೆ ಒಳ್ಳೆಯ ಭವಿಷ್ಯವಿದೆ.” ಎಂದಾಗ ಕಾರ್ತಿಕನಿಗೂ ತನ್ನ ಅಭಿಪ್ರಾಯ ಸರಿಯೆನಿಸಿತ್ತು.

ಹಾಗೆಂದು ಸುಳ್ಕೇರಿ ಎಂಬುದು ಸಣ್ಣ ಹಳ್ಳಿಯೇ. ಕಾರ್ಕಳ-ಬೆಳ್ತಂಗಡಿ ಟಾರು ರಸ್ತೆಯ ಹೆದ್ದಾರಿ ಹಾದು ಹೋಗುವುದರಿಂದ ದಿನಕ್ಕೆ ಹತ್ತಾರು ಬಸ್ ಸರ್ವೀಸ್, ಹತ್ತಾರು ಲಾರಿಗಳು, ಅಪರೂಪಕ್ಕೆ ಕಾರುಗಳು, ಸೈಕಲ್ಲುಗಳು, ಒಂದೆರಡು ಮೋಟಾರ್ ಬೈಕುಗಳು, ಎತ್ತಿನ ಗಾಡಿಗಳು ಹೀಗೆ ಹಲವು ವಾಹನಗಳ ಓಡಾಟವಿತ್ತು. ಪೇಟೆಯೂ ಅಲ್ಲದ ಹಳ್ಳಿಯೂ ಅಲ್ಲದ ಇಲ್ಲಿ ಮೂರು ನಾಲ್ಕು ಗೂಡಂಗಡಿಗಳು, ಒಂದು ಪೋಸ್ಟ್ ಆಫೀಸು, ಕತ್ತಲಿನಿಂದ ಆವರಿಸಿದ ಶರಾಬಿನ ಅಂಗಡಿ, ಇದರ ಪಕ್ಕದಲ್ಲೇ ಸೈಕಲ್ ರಿಪೇರಿಯ ತಾಣ, ಪುರುಷೋತ್ತಮ ಭಟ್ರ ಹೋಟೆಲು ಅಲ್ಲದೆ ಒಂದೆರಡು ತಟ್ಟಿ ಮತ್ತು ಮುಳಿ ಮಾಡಿನ ಚಾಯ ಕೇಂದ್ರಗಳು, ಸುತ್ತಮುತ್ತ ಹಳ್ಳಿಗಳಿಂದ ಬಸ್ಸಿಗೆ ಹೋಗಲೊ, ದಿನಸಿ ಸಾಮಾನು ಕೊಂಡುಹೋಗಲೋ ಕಾಲ್ನಡಿಗೆಯಲ್ಲಿ ಬರುವಂಥ ಜನರು.. ಅಂತೆಯೇ ಹಳ್ಳಿಗಳಿಂದ ತಲೆಹೊರೆಯಲ್ಲಿ ತೆಂಗಿನಕಾಯಿ, ಅಡಿಕೆ, ಭತ್ತ, ಬಾಳೆಗೊನೆ ಮುಂತಾದವುಗಳನ್ನೂ ಮಾರಾಟಕ್ಕಾಗಿ ತರುವಂಥ ಕೃಷಿಕರು. ಅಂತು ಸದಾ ಚಟುವಟಿಕೆಯಿಂದಿರುವ ಈ ಜಾಗದಲ್ಲಿ ಕಾರ್ತಿಕನಿಗೆ ತಮ್ಮನಿಗೊಂದು ಅಂಗಡಿ ಹಾಕಿಕೊಡುವುದು ಸೂಕ್ತವೆಂದು ಕಂಡದ್ದು ಸರಿಯೇ ಆಗಿತ್ತು. ಪುರುಷೋತ್ತಮ ಭಟ್ಟರೂ “ಪ್ರಕಾಶ ಸಣ್ಣವನಾದರೂ ಪರವಾಗಿಲ್ಲ. ನಾನು ಪಕ್ಕದಲ್ಲೇ ಇರುವುದರಿಂದ ವ್ಯಾಪಾರದ ಸೂಕ್ಷ್ಮತೆಗಳನ್ನು ಕಲಿಸುತ್ತೇನೆ” ಎಂದಾಗ ತನ್ನ ನಿರ್ಧಾರಕ್ಕೆ ಬಲ ಬಂದಂತಾಗಿತ್ತು ಕಾರ್ತಿಕನಿಗೆ.

ಮುಂದೆ ಇನ್ನೂ ಇದೆ.
**********
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

——————————————————————————————————————————————————————————————————————————

ಅಳಂಬ.. ೬
****
ಅಪ್ಪಾ ಅಪ್ಪಾ ನಿನ್ನೆ ರಾತ್ರಿ ಕುಳ್ಳಾಲಿನ ಹತ್ತಿರ ಹುಲಿ ಸತ್ತು ಬಿದ್ದಿದೆಯಂತೆ. ಸಂಕ್ರೇ ಗೌಡರು ಕೂದಲೆಳೆಯಿಂದ ಪಾರಾದರಂತೆ. ಪಾಪ ಕಾಳುಮೆಣಸು ಕೊಯ್ಯುತ್ತಿದ್ದರಂತೆ ಅದ್ಯಾವುದೊ ಕಡವೆ ಮತ್ತು ಹುಲಿಗೆ ಜಗಳ ಆಗಿ ಹುಲಿಯೇ ಸತ್ತು ಬಿದ್ದಿದೆಯಂತೆ.. ಹೀಗೆ ಅನೇಕ ಅಂತೆಗಳ ಸಮಾಚಾರಗಳನ್ನು ತಂದೆಯಲ್ಲಿ ಕಾರ್ತಿಕ ಒಪ್ಪಿಸುವಾಗ ಆತನಲ್ಲಿ ಭಯ ಮಿಶ್ರಿತವಾದ ಕುತೂಹಲವಿತ್ತು. ಅಂತೆಯೆ ತಾನೂ ಒಂದು ಸಲ ನೋಡಿ ಬರಬೇಕೆನ್ನುವ ಆಸೆಯೂ ಇತ್ತು. ಆದರೆ ತಂದೆ ಗಣೇಶ ಹೆಬ್ಬಾರರು ವ್ಯವಹಾರಗಳನ್ನು ಬಲ್ಲವರಾದ್ದರಿಂದ ಈ ಸುದ್ದಿಯನ್ನು ಕೇಳಿ ಈ ಕ್ಷಣ ಅಲ್ಲಿಗೆ ಹೋಗುವುದು ಸೂಕ್ತವಲ್ಲವೆಂದು ಮಗನಿಗೆ ಹೇಳಿದರು. ಕಾರ್ತಿಕನಾದರೊ ಬಿಸಿ ರಕ್ತದ ಯುವಕ. ಜೀವಂತ ಹುಲಿಯೆ ಎದುರು ಬಂದರೂ ನೋಡಿಯೇ ಬಿಡೋಣವೆಂಬ ಧೈರ್ಯ. ಆದರೆ ತಂದೆಯ ಮಾತನ್ನು ಮೀರುವ ದಾರ್ಷ್ಟ್ಯತನವೂ ಆತನಲ್ಲಿಲ್ಲ. ಇರಲಿ ಹಿರಿಯರ ಮನ ನೋಯಿಸುವುದು ಬೇಡ. ಹಾಗೆಂದು ತಾನು ನೋಡುವುದಾದರೂ ಹುಲಿಯ ಹೆಣ ಹೊರತು ಜೀವಂತವಲ್ಲವಲ್ಲ. ಅಲ್ಲಿಗೆ ಆ ವಿಷಯವನ್ನು ಅಲ್ಲಿಗೇ ಬಿಟ್ಟು ತೋಟದ ಕೆಲಸಗಳಲ್ಲಿ ತೊಡಗಿಸಿಕೊಂಡ. ಗಣೇಶ ಹೆಬ್ಬಾರರಿಗೆ ನಾಲ್ಕು ಜನ ಮಕ್ಕಳು. ಎರಡು ಗಂಡು ಎರಡು ಹೆಣ್ಣು. ನೆಲ್ಲಿತಡ್ಕದಲ್ಲಿ ಶಾಲೆ ಇಲ್ಲದ್ದರಿಂದ ತಮ್ಮ ಮಕ್ಕಳನ್ನು ಹೆಂಡತಿ ಮಿತ್ರವಿಂದಾಳ ಮನೆಯಲ್ಲಿ ಅಂದರೆ ಅಜ್ಜನ ಮನೆಯಲ್ಲಿ ಶಾಲೆಗೆ ಹೋಗಲು ಬಿಟ್ಟಿದ್ದರು. ಆದ್ದರಿಂದ ಎಲ್ಲ ನಾಲ್ಕು ಮಕ್ಕಳಿಗೂ ಹತ್ತನೆ ತರಗತಿಯವರೆಗೆ ಶಾಲೆಗೆ ಹೋಗುವ ವ್ಯವಸ್ಥೆ ಇತ್ತು. ಹಿರಿಯನಾದ ಕಾರ್ತಿಕನಿಗೆ ಈಗ ಇಪ್ಪತ್ತರ ಹರೆಯ. ಕೊನೆಯ ತಮ್ಮನಾದ ಪ್ರಕಾಶನ ಇನ್ನೆರಡು ವರ್ಷಗಳ ವಿದ್ಯಾಭ್ಯಾಸವಾದರೆ ಎಲ್ಲರೂ ಹತ್ತನೆ ತರಗತಿಯವರೆಗೆ ಕಲಿತು ಲೋಕಜ್ಞಾನ ಪಡಕೊಳ್ಳುವಷ್ಟು ಸುಶಿಕ್ಷಿತರಾಗುವುದು ನೆಲ್ಲಿತಡ್ಕದಂಥ ಹಳ್ಳಿಯಲ್ಲಿ ವಿಶೇಷವೇ ಆಗಿತ್ತು. (ಅಳಂಬ, ಮಟ್ಕ್ಯೆ, ನೆಲ್ಲಿತಡ್ಕ ಎಂಬ ಮೂರು ಜನವಸತಿಗಳು ಬೇರೆ ಬೇರೆಯಾದರೂ ಹೊರಗಿನ ಪ್ರಪಂಚಕ್ಕೆ ಪರಸ್ಪರ ಕೂಗಳತೆಯಷ್ಟು ದೂರದಲ್ಲಿರುವ ಈ ಮೂರು ಜನವಸತಿ ಪ್ರದೇಶಗಳು ಅಳಂಬವೆಂದೇ ಪ್ರಖ್ಯಾತವಾಗಿತ್ತು.)

ಹೆಣ್ಣು ಮಕ್ಕಳು ದೊಡ್ಡವರಾದಂತೆ ಗಣೇಶ ಹೆಬ್ಬಾರರಿಗೆ ಮಕ್ಕಳ ಮದುವೆ ಯೋಚನೆಯೂ ಬರತೊಡಗಿತ್ತು. ಹೆಣ್ಣು ಮಕ್ಕಳಿಗೆ ಹೇಗಾದರೂ ಸಾಲ ಸೋಲ ಮಾಡಿ ಮದುವೆ ಮುಗಿಸಬಹುದು. ಆದರೆ ಕಾರ್ತಿಕನಿಗೆ ಹೆಣ್ಣು ಸಿಗುವುದು ಅಷ್ಟು ಸುಲಭವಲ್ಲವೆಂಬ ಸಣ್ಣ ಕೊರಗು ಹೆಬ್ಬಾರರಲ್ಲಿ ಜಾಗೃತವಾಗಿತ್ತು. ಯಾಕೆಂದರೆ ಗಣೇಶ ಹೆಬ್ಬಾರರಿಗೆ ಹೆಣ್ಣು ಹುಡುಕುವ ಕಾಲದಲ್ಲಿ ಅಂದರೆ ಸುಮಾರು ಇಪ್ಪತ್ತೇಳು ವರ್ಷಗಳಷ್ಟು ಹಿಂದೆ ಸುಮಾರು ಹತ್ತಿಪ್ಪತ್ತು ಕಡೆ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದೊಡನೆ ಶಿರ್ಲಾಲು ಎಂಬಲ್ಲಿಂದ ಸಂಬಂಧ ಕೂಡಿ ಬಂದಿದೆ ಎಂದರೆ ಅಲ್ಲಿಯೂ ಬಹಳಷ್ಟು ಬಡತನದ ಜತೆಗೆ ತುಂಬಾ ಮಕ್ಕಳಿದ್ದುದೇ ಕಾರಣವಾಗಿತ್ತು. ಋಣಾನುಬಂಧ.. ಗಣೇಶ ಹೆಬ್ಬಾರರು ಮಿತ್ರವಿಂದಾಳನ್ನು ಮೆಚ್ಚಿ ಮದುವೆ ಆಗಿ ಅಳಂಬದಲ್ಲಿಯೂ ಸುಖ ಜೀವನವಿದೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಅಂತೆಯೇ ಹೆಬ್ಬಾರರ ಪತ್ನಿಯಾದ ಮಿತ್ರವಿಂದಾ ಕೂಡ ಮಕ್ಕಳೊಡನೆ ಸಂಪೂರ್ಣ ಸಂತೃಪ್ತಿಯಿಂದಲೇ ಇದ್ದರು.

ಕುಳ್ಳಾಲಿನಲ್ಲಿ ಬಿದ್ದಂಥ ಹುಲಿಯ ಕಳೆಬರ ಸಿಗದಿರುವಾಗ ಸಂಕ್ರೇ ಗೌಡರ ಜತೆ ಅರಣ್ಯ ಸಿಬ್ಬಂದಿಗೆ ಕೂಡ ಆಶ್ಚರ್ಯ ಕಾದಿತ್ತು. ಆದರೆ ಗೌಡರು “ಇದೇ ಜಾಗದಲ್ಲಿ ಕಡವೆ ಮತ್ತು ಹುಲಿಗೆ ನಡೆದ ಜಗಳವನ್ನು ನಾನೇ ನೋಡಿದ್ದೇನೆ. ಮಾತ್ರವಲ್ಲ ಹುಲಿಯ ಉಸಿರು ನಿಂತ ಮೇಲೆಯೇ ನಾನು ಅದೊ ನೋಡಿ ಆ ಮರದ ಮಧ್ಯದಲ್ಲಿರುವ ಬಾಗಿದ ಟೊಂಗೆಯ ಮೇಲಿಂದ ಕೆಳಗಿಳಿದದ್ದು. ವಾಪಸು ಮನೆಗೆ ಹೋಗುವಾಗಲೂ ಹೆದರಿ ಹೆದರಿ ಹುಲಿಯ ಕಳೆಬರವನ್ನು ನೋಡಿ ನೋಡಿ ಹೋಗಿರುವಾಗ ಈಗ ಅದು ಕಾಣೆಯಾದದ್ದಾದರು ಹೇಗೆಂದೇ ತಿಳಿಯದು” ಎಂದು ಆಶ್ಚರ್ಯ ವ್ಯಕ್ತ ಪಡಿಸಿದರಾದರೂ ಯಾರಾದರು ಹುಲಿಯ ಹಲ್ಲು, ಚರ್ಮಕ್ಕಾಗಿ ಹುಲಿಯನ್ನೇ ಹೊತ್ತೊಯ್ದಿರಬಹುದೆ ಎಂಬ ಸಂಶಯವು ಅರಣ್ಯಾಧಿಕಾರಿಗಳಂತೆ ಸಂಕ್ರೇ ಗೌಡರಿಗೂ ಬಂದದ್ದು ಸಹಜವಾಗಿಯೇ ಇತ್ತು. ಹಾಗೆಂದು ಇದು ಅಳಂಬದ ಯಾವ ಮನೆಯವರಿಂದಲೂ ನಡೆದ ಕೃತ್ಯವಲ್ಲವೆಂಬುದೂ ಅರಣ್ಯ ಅಧಿಕಾರಿಗಳಿಗೆ ತಿಳಿದ ವಿಷಯವೆ. ಅಷ್ಟರ ಮಟ್ಟಿಗೆ ಅಳಂಬ ಅಥವಾ ಪಶ್ಚಿಮ ಘಟ್ಟದ ಗರ್ಭದೊಳಗಿರುವ ಇರುವ ಬರೆಂಗಾಡಿ, ಫಂಜಾಲು, ನಂಗಾಜೆ, ಕೇಡೇಲು, ಫೆರ್ಞ್ಚ, ಕುರ್ಯಾಡಿ ಮೊದಲಾದ ಕಡೆಗಳಲ್ಲಿ ಇರುವ ಎಲ್ಲ ಕುಟುಂಬಗಳೂ ಪ್ರಾಮಾಣಿಕರು ಮಾತ್ರವಲ್ಲ ಹುಲಿಯನ್ನು ಕದ್ದು ವಿಲೆವಾರಿ ಮಾಡುವಷ್ಟು ಚಾಲಾಕಿಗಳೂ ಅಲ್ಲವೆಂಬುದು ಅನುಭವದಿಂದ ಅರಣ್ಯಾಧಿಕಾರಿಗಳಿಗೆ ವಿಶ್ವಾಸವಿದ್ದುದರಿಂದ ಇದು ಯಾರ ಕೃತ್ಯವಾಗಿರಬಹುದೆಂಬುದು ಯಕ್ಷಪ್ರಶ್ನೆಯೇ ಆಗಿ ಹೋಯಿತು. ಅಂತೆಯೇ ಅಧಿಕಾರಿಗಳಿಗೆ ಇದೊಂದು ಸವಾಲೂ ಆಗಿತ್ತು. ಆದರೆ ಕಾನೂನು ಪ್ರಕಾರ ಸಂಕ್ರೇ ಗೌಡನಿಂದ ನಡೆದ ಘಟನೆಯ ವಿವರ ತಿಳಿದು ಎಫ್.ಐ ಆರ್. ಮಾಡಿ ಮುಂದಿನ ಕ್ರಮಗಳನ್ನು ಅರಣ್ಯಾಧಿಕಾರಿಗಳು ಕೈಗೊಂಡಾಗ ಅಳಂಬದಲ್ಲಿ ಕೂಡಾ ಕಾಣದ ಯಾವುದೊ ಕೈಗಳು ಕೆಲಸ ಮಾಡುತ್ತಿವೆ ಎನ್ನುವ ಸಂಶಯ ಬಲವಾಗತೊಡಗಿತ್ತು.

ಹುಲಿಯು ಸತ್ತು ಬಿದ್ದ ಜಾಗ ಕುಳ್ಳಾಲು. ಇದು ಕೂಡ ಒಂದು ಕಾಲದಲ್ಲಿ ಹತ್ತಿಪ್ಪತ್ತರಷ್ಟು ಜನರಿರುವಂಥ ದೊಡ್ಡ ಕುಟುಂಬವಾಗಿತ್ತು. ಎಲ್ಲ ಕಾಡು ಜನರಂತೆ ಬೇಸಾಯ, ತೋಟ ಮುಂತಾದ ಪ್ರಕ್ರಿಯೆಗಳಿಂದ ಸಂತೃಪ್ತಿಯಿಂದ ಬದುಕಿತ್ತು ಎಂಬುದಕ್ಕೆ ಈಗಲೂ ಸಾಕ್ಷಿಗಳಿವೆ. ಅಳಿದುಳಿದ ಅಡಿಕೆ-ತೆಂಗು-ಹಲಸು-ಮಾವಿನ ಮರಗಳು, ಜಾಗದ ಸುತ್ತಲೂ ಇರುವ ಕಲ್ಲಿನ ಅಗಳುಗಳು, ಮನೆ-ಹಟ್ಟಿಯ ಅಡಿಪಾಯಗಳು, ಜರಿದ ಗೋಡೆಗಳು, ಕಡಿಯುವ ಕಲ್ಲು-ಭತ್ತ ಕುಟ್ಟುವ ಕಲ್ಲು-ಅಕ್ಕಿ ಹಿಟ್ಟು ಮಾಡುವ ಕಲ್ಲುಗಳು, ದನ ಕರುಗಳು ಅಕ್ಕಚ್ಚು ಕುಡಿಯುವ ಮರಿಗೆಗಳು, ತುಕ್ಕು ಹಿಡಿದ ಕಬ್ಬಿಣದ ವಸ್ತುಗಳು, ಪಾಳುಬಿದ್ದ ಕೆರೆಯ ಅವಶೇಷಗಳು, ದೈವದ-ನಾಗನ ಕಲ್ಲುಗಳು.. ಹೀಗೆ ಹತ್ತು ಹಲವಾರು ಅವಶೇಷಗಳನ್ನು ಕಂಡಾಗ ಇಲ್ಲಿಯ ಕುಟುಂಬದವರು ಏನಾದರು ಎಲ್ಲಿಗೆ ಹೋದರು ಎನ್ನುವುದಕ್ಕೆ ನಂಬಲರ್ಹವಾದ ಯಾವ ಮಾಹಿತಿಗಳೂ ಇಲ್ಲದುದರಿಂದ ಸಾಧಾರಣ ಇಲ್ಲಿಂದ ವಲಸೆ ಹೋದವರ ಕಾಲಮಾನ ಶತಮಾನಕ್ಕೂ ಮೊದಲಿರಬಹುದೆಂಬ ಅನುಮಾನ ಬಾರದೆ ಇರದು. ಸಂಕ್ರೇ ಗೌಡರ ಅಜ್ಜಿಯ ಕಾಲದಲ್ಲಿ ಕೂಡ ಕುಳ್ಳಾಲಿನಲ್ಲಿ ಜನವಸತಿ ಇರಲಿಲ್ಲವಂತೆ. ಆದರೆ ಅಲ್ಲಿಯ ಅಧೋಗತಿಗೆ ಕಾರಣಗಳು ಕೆಲವಷ್ಟು ಅಜ್ಜಿಗೆ ಗೊತ್ತಿದ್ದದ್ದೇ ಈಗ ಉಳಿದ ಸಾಕ್ಷಿ ಎನ್ನಬಹುದು. ಸಂಕ್ರೇ ಗೌಡರ ಅಜ್ಜಿ ಬದುಕಿರುವಾಗ ಹೇಳುತ್ತಿದ್ದಂತೆ ಕುಳ್ಳಾಲಿನಲ್ಲಿ ಅದ್ಯಾವುದೊ ಕಾಲಘಟ್ಟದಲ್ಲಿ ಕುಟುಂಬದಲ್ಲಿ ಒಂದೊಂದೇ ಅಸಹಜ ಸಾವುಗಳು ಸಂಭವಿಸತೊಡಗಿತಂತೆ. ಆ ಕಾಲದಲ್ಲಿ ವೈದ್ಯರಿಗಿಂತ ಮಾಟ-ಮಂತ್ರ-ಜ್ಯೋತಿಷ್ಯ-ಪರಿಹಾರ-ಹಳ್ಳಿ ಔಷಧ-ಭೂತ-ಬ್ರಹ್ಮರಾಕ್ಷಸ.. ಎಂಬ ವರ್ತುಲದಲ್ಲಿ ಜನರ ಮನಸ್ಥಿತಿ ಇದ್ದುದರಿಂದ ಅಥವಾ ಸಕಾಲದಲ್ಲಿ ವೈದ್ಯರ ಅಲಭ್ಯತೆಯಿಂದ ಈ ಸಾವುಗಳು ಹೆಚ್ಚಾಗತೊಡಗಿದವೆ ಹೊರತು ಪರಿಹಾರ ಕಾಣಲಿಲ್ಲ. ಅದ್ಯಾವುದೊ ಸಾಂಕ್ರಾಮಿಕ ರೋಗ, ಆಹಾರ ದೋಷ, ಮಾನಸಿಕ ದೌರ್ಬಲ್ಯವೇ ಮುಂತಾದ ವೈಜ್ಞಾನಿಕ ಕಾರಣಗಳಿದ್ದರೂ ಕುಟುಂಬದ ಅಸಹಜ ಸಾವುಗಳಿಗೆ ಬ್ರಹ್ಮರಾಕ್ಷಸನ ಉಪಟಳವೇ ಕಾರಣವೆಂದು ಸರ್ವರ ಅಭಿಪ್ರಾಯವಿದ್ದುದರಿಂದ ಮತ್ತು ಇದು ಎಲ್ಲರನ್ನೂ ಬಲಿ ಪಡೆವ ಮುಂಚೆ ಕುಳ್ಳಾಲನ್ನು ಬಿಡುವುದೇ ಸೂಕ್ತವೆಂದು ಪರಿಗಣಿಸಿ ಅಳಿದುಳಿದ ಕುಟುಂಬ ಅಲ್ಲಿಂದ ವಲಸೆ ಹೋಗಿದೆಯಂತೆ. ಅದು ಯಾವ ಕುಟುಂಬ ಎಲ್ಲಿಗೆ ಹೋಯಿತು ಎಂಬುದರ ಬಗ್ಗೆ ನಿಖರ ಮಾಹಿತಿಗಳು ವರ್ತಮಾನದಲ್ಲಿ ಯಾರಿಗೂ ತಿಳಿಯದೆ ನಿಗೂಢವಾಗಿರುವುದು ಮಾತ್ರ ಸತ್ಯ. ಆದರೆ ಇಂದಿಗೂ ಉಳಿದುಕೊಂಡದ್ದೇನೆಂದರೆ ಕುಳ್ಳಾಲಿನಲ್ಲಿ ಬ್ರಹ್ಮ ರಾಕ್ಷಸನಿದ್ದಾನೆಂಬ ವಿಚಾರ. ಹಲವರು ಇದನ್ನು ಅನುಭವಿಸಿದ್ದಾರೆ ಎಂಬ ಕಥೆಗಳು. ಅಂತೆಯೇ ಅಮಾವಾಸ್ಯೆಯ ರಾತ್ರಿಗಳಲ್ಲಿ ಸಂಕ್ರಾಂತಿ-ಗ್ರಹಣ ಮೊದಲಾದ ವಿಶೇಷ ದಿನಗಳಲ್ಲಿ ಅರಣ್ಯದ ಈ ಹಾದಿಯಲ್ಲಿ ಸಂಚರಿಸುವಾಗ ಬ್ರಹ್ಮರಾಕ್ಷಸನ ಚಲನೆಗಳನ್ನು-ಕರ್ಕಶ ಧ್ವನಿಗಳನ್ನು ಕೇಳಿದ್ದೇವೆ ಎನ್ನುವವರಿಗೂ ಕೊರತೆಯಿಲ್ಲ. ಏನೆ ಇರಲಿ ಇಂಥ ನಿಗೂಢಗಳು ಪಶ್ಚಿಮ ಘಟ್ಟದ ಮಡಿಲಲ್ಲಿ ಸಾವಿರಾರು ಇರುವುದು ಕೂಡ ಸುಳ್ಳಲ್ಲ. ಓದಿ… ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ…. ಇನ್ನೂ ಇದೆ.
***********
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

——————————————————————————————————————————————————————————————————————-

ಅಳಂಬ..೫
***
“ಹೇಳುವುದೇನು ಕಡವೆಯ ಓಡುವ ಹಾದಿಗೆ ಬೃಹತ್ ಹೆಬ್ಬಲಸಿನ ಅವಳಿ ಮರಗಳು ಅಡ್ಡವಾದದ್ದರಿಂದ ಅದು ಹಟಾತ್ತನೆ ಹಿಂದೆ ತಿರುಗುವಾಗ ಹಿಂದಿನಿಂದ ಅದರ ದುಪ್ಪಟ್ಟು ವೇಗದಿಂದ ಹುಲಿಯು ಕಡವೆಯ ಕುತ್ತಿಗೆಯನ್ನು ಗುರಿಯಾಗಿಸಿ ಹಾರಿದ್ದೊಂದೇ ಗೊತ್ತು. ಕಡವೆಯು ತಿರುಗಿದ್ದರಿಂದ ಚೂಪಾದ ಕೊಂಬು ಕುತ್ತಿಗೆಯ ಭಾಗಕ್ಕೆ ಬಂದದ್ದರಿಂದ ಹುಲಿಯ ನೆಗೆತ ಕೊಂಬಿಗೆ ಬಡಿದಾಗ ಚೂಪಾದ ಕೊಂಬುಗಳು ಹುಲಿಯ ಕುತ್ತಿಗೆ ಮತ್ತು ಕಿಬ್ಬೊಟ್ಟೆಯನ್ನು ಭೇದಿಸಿದವು. ಅಷ್ಟರಲ್ಲಿ ಅರಣ್ಯದಲ್ಲಿ ಎರಡು ಪ್ರಾಣಿಗಳ ಮರಣ ಕಾಲದಲ್ಲುಂಟಾದ ಘರ್ಜನೆಗಳು ಪ್ರತಿಧ್ವನಿಸಿ ಒಂದು ಕ್ಷಣ ಸಂಪೂರ್ಣ ಕಾಡನ್ನೇ ಮೌನವಾಗಿಸಿತು. ಇತ್ತ ಹುಲಿಯು ಸಾಯದೆ, ಅತ್ತ ಕಡವೆ ತಾನು ಇನ್ನೂ ಜೀವಿಸಿದ್ದೇನೆ ಎಂಬ ಸತ್ಯ ತಿಳಿಯದೆ ಒಂದರ್ಧ ಗಂಟೆ ಒದ್ದಾಡುವಾಗ ಕಡವೆಯ ಕೊಂಬಿನಿಂದ ದೂರಕ್ಕೆ ಬಿದ್ದಂಥ ಹುಲಿಯು ಬದುಕಿನ ಅಂತಿಮ ಕ್ಷಣದಲ್ಲಿದ್ದಂತೆ ಕಡವೆಯು ಪುನರ್ಜನ್ಮವನ್ನು ಪಡಕೊಂಡಿತ್ತು. ನಾನಾದರೊ ಇದನ್ನು ನಂಬದ ಸ್ಥಿತಿಯಲ್ಲಿದ್ದರೂ ಕಣ್ಣಾರೆ ಕಂಡದ್ದನ್ನು ನಂಬಲೇಬೇಕಾದ ಸ್ಥಿತಿಯೂ ನನ್ನದಾಗಿತ್ತು. ಏನೇ ಇರಲಿ ಹುಲಿಯ ಸಾವಿನ ಪೂರ್ಣ ಅನುಭವವಾಗದೆ ಇಲ್ಲಿಂದ ಹೊರಡುವುದು ಕ್ಷೇಮವಲ್ಲ ಎಂದುಕೊಂಡು ಹುಲಿಯನ್ನೇ ನೋಡುತ್ತಿದ್ದೆ. ಕಡವೆಯಾದರೊ ಎದ್ದು ಓಡಿತ್ತು. ಇತ್ತ ಹುಲಿಯ ಸ್ಥಿತಿಯೂ ಗಂಭೀರವಾಗಿ ಕ್ರಮೇಣ ಒಂದಷ್ಟು ಹೊರಳಾಡಿ ಪ್ರಾಣವನ್ನು ಕಳಕೊಂಡಿತೆಂದು ದೃಢವಾದ ಮೇಲೆ ಹೆದರಿ ಹೆದರಿ ಹೇಗಾದರೂ ಇಲ್ಲಿಗೆ ಬಂದಾಗ ಕಡವೆಯ ಸ್ಥಿತಿಯೇ ನನ್ನದಾಗಿತ್ತು ಎನ್ನುವುದು ನಾನು ಬೇರೆ ಹೇಳಬೇಕಾಗಿಲ್ಲ.” ಇಷ್ಟು ಹೇಳಿದಾಗ ಸಂಕ್ರೇ ಗೌಡನಿಗಿಂತಲೂ ಮನೆಯವರೆಲ್ಲ ಹೆದರಿ ನಡುಗುತ್ತಿದ್ದರು.

“ಹಾಗಾದರೆ ಹುಲಿಯ ಕಳೆಬರ ಅಲ್ಲೇ ಇರಬಹುದಲ್ಲವೆ” ಎಂದು ಸುಂದ್ರಿ ಕೇಳಿದಳು. “ಖಂಡಿತ ಇದೆ. ಅದನ್ನು ಅರಣ್ಯಾಧಿಕಾರಿಗಳು ಬಂದು ವಿಲೆವಾರಿ ಆಗಬೇಕಷ್ಟೆ. ನಾಳೆ ಹೋಗಿ ನಾನೇ ತಿಳಿಸಿ ಬರಬೇಕು” ಎಂದು ಸಂಕ್ರೇ ಗೌಡರು ಹೇಳುವಾಗ ಕಮಲಿಗೆ ಹುಲಿಯ ಕಳೆಬರವನ್ನು ನೋಡುವ ಆಸೆಯಾದರೂ ಮನದೊಳಗೆ ಹುಲಿ ಸಾಯದೆ ಇದ್ದರೆ ಎಂಬ ಭೀತಿಯೂ ಉಂಟಾಗಿತ್ತು. ಒಂದು ವಿಶೇಷವಾದ ಅನುಭವದೊಂದಿಗೆ ಆ ದಿನವು ಸಾಕ್ಷಿಯಾದದ್ದಂತು ನಿಜ.

ಮರುದಿವಸ ಬೆಳಗ್ಗೆ ಎದ್ದವರೆ ಸಂಕ್ರೇ ಗೌಡರು ಹಿರಿಯ ಮಗನಾದ ರಾಮಯ್ಯ ಗೌಡನನ್ನು ಕರಕೊಂಡು ನೇರವಾಗಿ ನಾರಾವಿ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿ ಬಂದರು. ಕಾಡುತ್ಪತ್ತಿಗೆಂದು ಯಾವಾಗಲೂ ಹೋಗುತ್ತಿರುವ ಅಳಂಬದ ಆಸುಪಾಸಿನವರೆಲ್ಲ ಕೆಲವೊಮ್ಮೆ ಬೇಟೆಯಾಡಿ ಕಡವೆಗಳನ್ನು ಕೊಲ್ಲುವುದೂ ಇದೆ. ಆದರೆ ಇದು ಅರಣ್ಯಾಧಿಕಾರಿಗಳಿಗೆ ತಿಳಿದರೆ ಈ ಅಪರಾಧಕ್ಕೆ ಶಿಕ್ಷೆಯಾಗುವುದೂ ಇದೆ. ಆದರೂ ಕೆಲವರು ಯಾರಿಗೂ ತಿಳಿಯದಂತೆ ಬೇಟೆಯಾಡಿ ಕಾಡುಹಂದಿ, ಕಡವೆಗಳ ಮಾಂಸ ತಿನ್ನುವುದೂ ಇದೆ. ಅಂಥದ್ದರಲ್ಲಿ ಹುಲಿಯಂಥ ಪ್ರಾಣಿಗಳು ಜನವಸತಿಯ ಸಮೀಪ ಸತ್ತಾಗ, ಅಂತೆಯೇ ನಿತ್ಯವೂ ಜನರಿಗೆ ಕಾಡಿನ ಸಂಪರ್ಕವಿರುವಾಗ ಅದನ್ನು ಅರಣ್ಯಾಧಿಕಾರಿಗಳಿಗೆ ತಿಳಿಸದಿದ್ದರೂ ತಪ್ಪಾಗುತ್ತದೆ ಎಂಬುದೂ ಸತ್ಯವೆ. ಆದ್ದರಿಂದ ಅಳಂಬದಲ್ಲಿ ಇಂತಹ ಕಾಡುಪ್ರಾಣಿಗಳ ಸಾವುಗಳಾದದ್ದು ಗೊತ್ತಾದ ಕೂಡಲೆ ಸಂಬಂಧ ಪಟ್ಟವರಿಗೆ ತಿಳಿಸುವುದು ರೂಢಿ. ಅಲ್ಲಿಗೆ ತಮ್ಮ ಜವಾಬ್ದಾರಿಯು ಮುಗಿದಂತೆ. ಆದ್ದರಿಂದ ಸಂಕ್ರೇ ಗೌಡರು ಈ ವಿಶೇಷವಾದ ಅನುಭವವನ್ನು ಹೇಳದೆ ಇರಲಾಗದು.

ಎರಡು ದಿವಸದ ನಂತರ ಅರಣ್ಯಾಧಿಕಾರಿಗಳು ಸಿಬ್ಬಂದಿಯವರೊಡನೆ ಬಂದಾಗ ಕಮಲಿ ಕೂಡ ಹುಲಿ ನೋಡುವ ಆಸೆಯನ್ನು ಅಣ್ಣ ರಾಮಯ್ಯ ಗೌಡನಲ್ಲ್ಲಿ ಹೇಳಿಕೊಂಡಿದ್ದಳು. ಅದಕ್ಕೆ ಸಂಕ್ರೇ ಗೌಡರು “ನೋಡೋಣ ಅರಣ್ಯಾಧಿಕಾರಿಗಳಲ್ಲಿ ಕೇಳುತ್ತೇನೆ ಒಪ್ಪಿಗೆ ಕೊಟ್ಟರೆ ಹೋಗೋಣ” ಎಂದಿದ್ದರು. ಅಂತೆಯೆ ಅರಣ್ಯಾಧಿಕಾರಿಗಳಲ್ಲಿ ಸಂಕ್ರೇ ಗೌಡರು ಮಗಳ ಆಸೆಯನ್ನು ಹೇಳಿದಾಗ ಅನುಮೋದನೆಯನ್ನು ನೀಡಿದ ಅರಣ್ಯಾಧಿಕಾರಿ “ನೋಡಮ್ಮ ಹುಲಿಯನ್ನು ನೋಡಿ ಹೆದರಬಾರದು. ಹಾಗೇನಾದರು ಹೆದರಿಕೆ ಇದ್ದರೆ ಬರುವುದು ಬೇಡ” ಎಂದಾಗ ಕಮಲಿಗೆ ಧೈರ್ಯವೇ ಬಂದಿತ್ತು. ಎಲ್ಲರೊಡನೆ ಆಕೆಯೂ ಹೊರಟಳು. ಒಂದು ಜೀಪಿನ ತುಂಬ ಬಂದೂಕು ಸಹಿತ ಬಂದಂಥ ಸಿಬ್ಬಂದಿಗಳೊಂದಿಗೆ ಸಂಕ್ರೇ ಗೌಡರು ಒಂದು ವೇಳೆ ಕಮಲಿಗೆ ವಾಪಸು ಬರಬೇಕಾದರೂ ಮನೆ ಹತ್ತಿರವಿದ್ದುದರಿಂದ ಹೆದರುವ ಅವಶ್ಯಕತೆ ಇಲ್ಲವೆಂದುಕೊಂಡು ಸಿಬ್ಬಂದಿಯ ಜತೆ ಹೊರಟರು ಕಾಡಿಗೆ. ಆದರೆ ಮೊನ್ನೆ ಹುಲಿ ಬಿದ್ದಂಥ ಜಾಗದಲ್ಲಿ ಹುಲಿ ಮತ್ತು ಕಡವೆಯ ಜಗಳದ ಕುರುಹು ಇದ್ದಿತೇ ಹೊರತು ಹುಲಿಯ ಕಳೇಬರವಿರವಿಲ್ಲ. (ಓದಿ… ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ…)

————————————————————————————————————————————————————————————————————————-

ಅಳಂಬ.. ೪
*****


ಮನೆಯವರೆಲ್ಲರೂ ಸಂಕ್ರೇಗೌಡರು ಹೋದಂಥ ದಿಕ್ಕಿನಿಂದ ಏನಾದರೂ ಅಸಹಜತೆಯ ಶಬ್ದಗಳೊ ಘರ್ಜನೆಗಳೊ ಕೇಳಿಬರಬಹುದೇ ಎಂಬ ನಿರೀಕ್ಷೆಯಲ್ಲಿದ್ದಾಗ ಅರ್ಧ ತಾಸಿನಲ್ಲಿ ತಲೆಯಲ್ಲಿ ದೊಡ್ಡ ಹೊರೆಯೊಂದನ್ನು ಹೊತ್ತುಕೊಂಡು ಸಂಕ್ರೇ ಗೌಡರು ಬಿರಬಿರನೆ ನಡೆದುಕೊಂಡು ಬರುವುದು ಅಸ್ಪಷ್ಟವಾಗಿ ಕಾಣತೊಡಗಿದಾಗ ಮನೆಯವರೆಲ್ಲರಿಗೂ ಮರುಜೀವ ಬಂದಂತಾಯಿತು. ಮನೆಗೆ ಹತ್ತಿರವಾಗುತ್ತಿದ್ದಂತೆ ಸಂಕ್ರೇಗೌಡರು ತಲೆ ಮೇಲಿದ್ದಂಥ ಹೊರೆಯನ್ನು ಕೆಳಗೆ ಹಾಕಿ ಉಸ್ಸೆಂದು ಗೋಡೆಗೊರಗಿಕೊಂಡು “ಕಮಲಿ ಒಂದು ಚೆಂಬು ನೀರು ತಾ” ಎಂದು ಮಗಳಲ್ಲಿ ಹೇಳಿದಾಗ ಅಪ್ಪ ಇಂದು ಯಾಕೊ ಲೆಕ್ಕದಿಂದ ಹೆಚ್ಚು ಬೆವರಿದ್ದಾರೆ ಹಾಗೂ ಎಂದಿನಂತಿಲ್ಲವೆಂದು ತನ್ನೊಳಗೆ ಅಂದುಕೊಂಡಳು.

ನೀರು ತಂದವಳೇ ಕಮಲಿ “ಯಾಕಪ್ಪ ಇಷ್ಟು ತಡವಾಯಿತು. ಏನೋ ಮುಖದಲ್ಲಿ ಅಸಹಜತೆ ಇದೆ. ಯಾಕಿಷ್ಟು ಬೆವರಿದ್ದೀಯ” ಎಂದು ಪ್ರಶ್ನಿಸಿದಳು.

ನೀರು ಕುಡಿದು ಚೊಂಬನ್ನು ಕೆಳಗಿಟ್ಟು ಸಂಕ್ರೇ ಗೌಡರು, ಸ್ವಲ್ಪ ತಾಳಿ ಹೇಳುತ್ತೇನೆ ಎನ್ನುವಂತೆ ಕೈ ಸನ್ನೆಯಿಂದ ಹೇಳಿ ಕಂಬಕ್ಕೊರಗಿ ಕೂತು ಕೊಂಡರು. ಸ್ವಲ್ಪಹೊತ್ತು ಸುಧಾರಿಸಿದ ಮೇಲೆ ಮಾತಿಗಾರಂಭಿಸಿದರು ಸಂಕ್ರೇಗೌಡರು “ಇವತ್ತು ನನ್ನ ಆಯುಷ್ಯ ಗಟ್ಟಿಯಾಗಿತ್ತು ಇಲ್ಲದಿದ್ದರೆ ಯಾವ ಕಾರಣಕ್ಕೂ ನಾನು ಜೀವಂತವಾಗಿ ಬರಲು ಸಾಧ್ಯವಿರಲಿಲ್ಲ.”

ಅಷ್ಟರಲ್ಲಿ ಕಮಲಿಯ ಜತೆ ಸುಂದ್ರಿ ಕೂಡ ಸೇರಿಕೊಂಡು “ಅದೇನಾಯಿತು ಹೇಳ್ರಿ” ಎಂದಾಗ ಇಬ್ಬರೂ ಭಯ ಭೀತರಾಗಿದ್ದರು.

ಸಂಕ್ರೇ ಗೌಡರು ನಡೆದ ಘಟನೆಯನ್ನು ವಿವರಿಸತೊಡಗಿದರು.

“ಇದೇ ಹಳ್ಳ ದಾಟಿ ಮೇಲೆ ಹೋದಾಗ ಕುಳ್ಳಾಲ್ ಎಂಬಲ್ಲಿ ಕಾಳುಮೆಣಸು ಇರುವುದನ್ನು ಕಂಡಿದ್ದೆ. ಅದನ್ನೆಲ್ಲ ಕೊಯ್ದು ಕೆಳಗಿಳಿಯಬೇಕೆನ್ನುವಷ್ಟರಲ್ಲಿ ದೂರದಿಂದ ಭಾರಿ
ಶಬ್ದ ಕೇಳತೊಡಗಿತು. ಅನುಭವದಿಂದ ಇದು ಹುಲಿ ಕಡವೆಗಳ ಜಗಳದಂತೆ ಭಾಸವಾಯಿತು. ಏನೇ ಇರಲಿ ಈಗ ನಾನು ಮರದಿಂದ ಇಳಿಯುವುದು ಸುರಕ್ಷಿತವಲ್ಲ ಎಂದೆಣಿಸಿ ಸುಮ್ಮನೆ ಎರಡು ಗೆಲ್ಲುಗಳ ಮಧ್ಯೆ ಶಬ್ದ ಬರುವ ಕಡೆ ಗಮನವಿರಿಸಿ ಕುಳಿತುಕೊಂಡೆ. ಕ್ಷಣ ಕ್ಷಣಕ್ಕೂ ಶಬ್ದ ಹತ್ತಿರವಾದಂತೆ ನನ್ನ ನಿರ್ಧಾರ ಸರಿ ಎಂಬ ಭಾವದಿಂದ ಭಯದೊಳಗೂ ಒಂದು ಭದ್ರತೆಯಲ್ಲಿದ್ದೆ. ಅಷ್ಟರೊಳಗೆ ನಾನೆಣಿಸಿದಂತೆ ಕಡವೆಯೊಂದನ್ನು ಅಟ್ಟಿಸಿಕೊಂಡು ಹುಲಿರಾಯ ಬರುತ್ತಿದ್ದ. ಕಡವೆ ಕೂಡ ಅಸಾಧ್ಯ ವೇಗದಿಂದ ಗಿಡ ಗಂಟಿ ಕಲ್ಲು ಮುಳ್ಳೆನ್ನದೆ ಓಡುತ್ತಿತ್ತು. ಹುಲಿಯಾದರೊ ಇನ್ನೂ ಹೆಚ್ಚಿನ ವೇಗದಿಂದ ಕಡವೆಯ ಬೆನ್ನು ಬೆನ್ನಿಗೇ ಬರುತ್ತಿತ್ತು. ನಾನು ಹಲವಾರು ಸಲ ಹುಲಿಯನ್ನು ನೋಡಿದ್ದೆನಾದರೂ ಬೇಟೆಯ ವೇಳೆಯಲ್ಲಿ ಹುಲಿಯ ಗಾಂಭೀರ್ಯ, ಅದರ ಕ್ರೌರ್ಯ, ಓಟದ ವೇಗ ಇದನ್ನೆಲ್ಲ ಇದೇ ಮೊದಲ ಬಾರಿ ನೋಡಿದಾಗ ನನಗೆ ಈ ಕಾಡು ಪ್ರಾಣಿಗಳನ್ನು ಹೋಲಿಸಿದರೆ ಮಾನವ ಬರಿದೆ ಹುಲ್ಲಿಗೂ ಸಮವಲ್ಲ ಎಂಬ ಸತ್ಯ ಗೊತ್ತಾಯಿತು. ಒಂದು ವೇಳೆ ನಾವದರ ನಡೆಗೆ ಅಡ್ಡ ಬಂದರೆ ಅಥವಾ ಅದರ ವೇಗಕ್ಕೆ ಸಿಲುಕಿದರೆ ಅದರ ಒಂದೇ ಹೊಡೆತ ನಮ್ಮನ್ನು ಯಮಲೋಕಕ್ಕೆ ಅಟ್ಟುವುದಂತು ಖಂಡಿತ. ನಾನು ಹತ್ತಿದ ಮರದ ಬುಡದಿಂದಲೆ ಈ ಎರಡು ಪ್ರಾಣಿಗಳು ಸಾವು ಬದುಕಿನ ಹೋರಾಟದ ಅಂತಿಮ ಹಂತಕ್ಕೆ ತಲುಪುವತ್ತ ಹೊರಟಿದ್ದನ್ನು ನೋಡುತ್ತಿದ್ದಂತೆಯೆ ಹುಲಿಯು ಕಡವೆಯ ಬೆನ್ನ ಮೇಲೆ ಹಾರಿತಾದರೂ ಸಮತೋಲನ ತಪ್ಪಿ ಕೆಳಗೆ ಜಾರಿತು. ಅಷ್ಟರೊಳಗೆ ಕಡವೆಯ ವೇಗ ಇನ್ನೂ ಜಾಸ್ತಿಯಾಯಿತು. ನಾನು ಎತ್ತರದಲ್ಲಿದ್ದುದರಿಂದ ಇದೆಲ್ಲವೂ ನನಗೆ ಕಣ್ಣೆದುರು ಸ್ಪಷ್ಟವಾಗಿ ಕಾಣುತ್ತಿತ್ತು. ಅಂತೆಯೇ ಮತ್ತಷ್ಟು ದೂರ ಈ ಓಟ ಮುಂದುವರೆದಾಗ ಕಡವೆ ಹಟಾತ್ತನೆ ಹಿಂದಿರುಗುವುದಕ್ಕೂ ಹುಲಿಯು ಕಡವೆಯ ಮೇಲೆ ಹಾರುವುದಕ್ಕೂ ಆ ಒಂದು ಕ್ಷಣ ಸಾಕ್ಷಿಯಾದಾಗ ಅಲ್ಲಿ ಏನು ನಡೆಯುತ್ತದೆ ಎಂದೇ ನನಗೆ ಗೊತ್ತಾಗಲಿಲ್ಲ. ನಾನೆಣಿಸಿದ್ದೇ ಬೇರೆ ಅಲ್ಲಿ ನಡೆದದ್ದೇ ಬೇರೆ. ಅರಣ್ಯವೆಂಬ ಪ್ರಪಂಚದಲ್ಲಿ ಹೀಗೂ ಆಗುತ್ತದೆ ಎಂಬ ಅರಿವುಂಟಾದದ್ದೇ ನನ್ನ ಆಗಿನ ಸ್ಥಿತಿಯಾಗಿತ್ತು. ಮಾತ್ರವಲ್ಲ ಕಾಲ ಬಾರದಿದ್ದರೆ ಯಮನೂ ಮುಟ್ಟಲಾರ ಎಂಬ ಸತ್ಯವೂ ತಿಳಿಯಿತು.”

ಅಷ್ಟರಲ್ಲಿ ಸುಂದ್ರಿ, ಕಮಲಿ, ರಾಮಯ್ಯ ಗೌಡ, ಮುತ್ತೇ ಗೌಡ ಅಮ್ಮು ಗೌಡ್ತಿ ಅಲ್ಲದೆ ಪಕ್ಕದ ಮನೆಗಳಿಂದ ಬಂದಂಥ ಯುವಕರೆಲ್ಲ ಕಣ್ಣು ಕಣ್ಣು ಬಿಟ್ಟು ಇಲ್ಲೇ ಹುಲಿ ಬಂತೇನೋ ಎಂಬ ಭೀತಿಯ ಭಾವದಿಂದ ಸಂಕ್ರೇ ಗೌಡರ ಕಥೆಯನ್ನು ಕೇಳುತ್ತಿದ್ದರು. “ಮುಂದೇನಾಯಿತು ಹೇಳಪ್ಪ. ನಮಗೂ ಇಲ್ಲಿ ಭಾರಿ ಭೀಕರವಾದ ಪ್ರಾಣಿಗಳ ಕೂಗು ಕೇಳಿಬಂತು. ನಮಗಾದರೊ ನಿನ್ನದೇ ಚಿಂತೆ. ಇನ್ನೊಂದು ಘಳಿಗೆ ನೀನು ಬರುವುದು ತಡವಾಗುತ್ತಿದ್ದರೆ ಇಷ್ಟು ಜನರೂ ನಿನ್ನನ್ನು ಹುಡುಕಲು ಬರುವುದೆಂದು ತೀರ್ಮಾನಿಸಿದ್ದರು.” ಎಂದು ಕಮಲಿ ಕುತೂಹಲ ವ್ಯಕ್ತ ಪಡಿಸಿದಾಗ ಸಂಕ್ರೇ ಗೌಡರು ಮೈಯ ಬೆವರನ್ನೆಲ್ಲ ಬೈರಾಸಿನಿಂದ ಒರೆಸಿಕೊಂಡು ಮುಂದುವರಿಸಿದರು.
**********
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

ಅಳಂಬ..೩
****


ವಿಶೇಷವೆಂದರೆ ಅಳಂಬದಲ್ಲಿ ಇವತ್ತಿರುವಂಥ ಗೌಡರ ಮನೆಗಳೆಲ್ಲವೂ ಸಂಕ್ರೇಗೌಡರ ಮೂಲ ಮನೆಯವರಿಗೆ ಸಂಬಂಧ ಪಟ್ಟವೇ ಆಗಿವೆ. ಅಂತೆಯೇ ಪಕ್ಕದ ಹಳ್ಳಿಗಳಲ್ಲಿರುವ ಬಿಲ್ಲವರ ಮನೆಗಳು, ಬ್ರಾಹ್ಮಣರ ಮನೆಗಳು ಕೂಡ ಮೂಲತಹ ಒಂದೇ ಮನೆಯವರಾಗಿದ್ದು ನಂತರ ಕವಲುಗಳಾದ್ದರಿಂದ ಈ ಎಲ್ಲ ಪಂಗಡಗಳು ಮದುವೆಯಂಥ ಸಂಬಂಧಗಳಿಗೆ ತಮ್ಮ ಕಾಡಿನ ಪ್ರಪಂಚದ ಹಳ್ಳಿಗಳ ಹೊರತಾದ ಊರುಗಳನ್ನೂ ಹುಡುಕಬೇಕಾಗುತ್ತದೆ ಎನ್ನುವುದೂ ಸತ್ಯವೆ. ಇನ್ನು ಅಳಂಬದ ಪ್ರಕೃತಿ ಅತ್ಯಂತ ಸಿರಿತನದಿಂದ ಕೂಡಿದರೂ ಕುಟುಂಬಗಳ ಆರ್ಥಿಕ ಸ್ಥಿತಿ ಮಾತ್ರ ಹೇಳಿಕೊಳ್ಳುವಂಥ ಸ್ಥಿತಿಯಲ್ಲಿಲ್ಲ. ಆದರೆ ಅಳಂಬದವರ ದೃಷ್ಟಿಯಿಂದ ಯಾರೂ ಬಡವರಲ್ಲ. ಕಾರಣವೆಂದರೆ ಹೊಟ್ಟೆ ಪಾಡಿನ ಹೊರತಾಗಿ ಇತರ ಜೀವನಾವಶ್ಯಕತೆಗಳು ಅಳಂಬದವರಿಗೆ ನಾಗರಿಕ ಪ್ರಪಂಚದವರಿಗಿಂತ ಬಹಳಷ್ಟು ಕಡಿಮೆ ಇರುತ್ತಿದ್ದುದರಿಂದ ಒಂದು ರೀತಿಯಲ್ಲಿ ಮಾನಸಿಕವಾಗಿ ಸಿರಿವಂತರೆ ಆಗಿದ್ದರು. ಇನ್ನು ಅಳಂಬದ ಭೂಸ್ಥಿತಿಯೂ ಘಟ್ಟಗಳ ಪ್ರದೇಶವಾದದ್ದರಿಂದ ಬೇಸಾಯ ಮಾಡುವಷ್ಟು ಸಮತಟ್ಟಾದುದಲ್ಲ. ಆದರೆ ಇದ್ದ ಜಾಗವನ್ನು ಸಮತಟ್ಟಾಗಿ ಮಾಡಿ ಒಂದಷ್ಟು ಭತ್ತ ಬೆಳೆಸುವುದರ ಜತೆಗೆ ಅಡಿಕೆ-ತೆಂಗು-ಬಾಳೆಯಂಥ ಮಿಶ್ರ ಬೆಳೆಗಳಿಂದ ತಮ್ಮ ತಮ್ಮ ಜೀವನಕ್ಕೆ ಆದಾಯವನ್ನು ಕಂಡುಕೊಂಡಿದ್ದರು. ಹಾಗೆಂದು ಕೃಷಿ ಕಾರ್ಯಗಳಿಗೆ ಆಗಲಿ ಬೇಸಾಯಕ್ಕಾಗಲಿ ಕುಡಿಯುವುದಕ್ಕಾಗಲಿ ನೀರಿನ ಕೊರತೆ ಎಂಬುದು ಪಶ್ಚಿಮ ಘಟ್ಟದ ಯಾವ ಹಳ್ಳಿಯಲ್ಲೂ ಉಂಟಾಗುವುದಿಲ್ಲ. ಕಾರಣವೆಂದರೆ ಹಿಂದಿನ ಮೂಲ ನಿವಾಸಿಗಳು ನೀರಿನ ಒರತೆಗನುಗುಣವಾಗಿ ವಾಸ್ತವ್ಯಗಳನ್ನು ಹುಡುಕಿದ್ದರು. ಅಂತೆಯೇ ಇವರು ಪೂರ್ತಿಯಾಗಿ ಬೇಸಾಯವನ್ನೇ ನೆಚ್ಚಿಕೊಂಡವರಲ್ಲ. ಅಪರೂಪಕ್ಕಿರುವ ಬ್ರಾಹ್ಮಣರ ಮನೆಗಳ ಹೊರತಾಗಿ ಇತರ ಪಂಗಡಗಳ ಯುವಕರು ವರುಷಕ್ಕೆ ಆರು ತಿಂಗಳಿಗಾಗುವಷ್ಟು ಕಾಡುತ್ಪತ್ತಿಯನ್ನು ನಂಬಿಕೊಂಡವರು. ಉದಾಹರಣೆಗೆ ಕಾಡಲ್ಲಿ ಸಿಗುವಂಥ ಬೆತ್ತ ತಂದು ಬುಟ್ಟಿ ಮಾಡುವುದು, ರಾಮಪತ್ರೆ, ಕರಿಮೆಣಸು, ಕೆತ್ತೆ ಹುಳಿ, ದಾಲ್ಚಿನಿ, ಶೀಗೆ, ನೊರೆಕಾಯಿ ಮುಂತಾದ ಹಲವಾರು ದ್ರವ್ಯಗಳನ್ನು ಯುವಕರು ಲಾಗಾಯ್ತಿನಿಂದಲೂ ತಂದು ಮಾರಾಟ ಮಾಡುವುದು ತಮ್ಮ ಹಕ್ಕೆಂದೇ ತಿಳಿದಿದ್ದರು.

avdvertisement:


ಇಲ್ಲಿಯ ಜನರಿಗೆ ಮನೆ, ಜಮೀನುಗಳು ಎಷ್ಟು ಸಹಜವೋ ಅಂತೆಯೇ ಅವರವರ ಜಮೀನಿನ ಬಳಿ ಇರುವಂಥ ಕಾಡು ಕೂಡ ಅಷ್ಟೇ ಸಹಜವಾಗಿರುತ್ತದೆ. ಕಾಡಿಗೆ ಹೋದವರು ಅಕ್ಕಿ, ಉಪ್ಪು, ಮೆಣಸು, ಪಾತ್ರೆ, ವೀಳ್ಯಕ್ಕೆ ಬೇಕಾದ ವೀಳ್ಯದೆಲೆ-ಹೊಗೆಸೊಪ್ಪು-ಅಡಿಕೆ.. ಇತ್ಯಾದಿ ಪ್ರಾಥಮಿಕ ಅವಶ್ಯಕತೆಗಳಿಗೆ ಬೇಕಾದ ಸಾಮಗ್ರಿಗಳ ಜತೆಗೇ ಪ್ರಯಾಣವನ್ನು ಪ್ರಾರಂಭಿಸುತ್ತಾರೆ. ಬೆತ್ತ ತರಲೊ, ಜೇನಿನ ಅನ್ವೇಷಣೆಯೊ, ಕಾಡು ಪ್ರಾಣಿಗಳ ಬೇಟೆಯೊ, ಕಾಡುತ್ಪತ್ತಿಯ ಶೇಖರಣೆಯೊ.. ಹೀಗೆ ಹಲವಾರು ವಿಷಯಗಳಿರುತ್ತವೆ. ಆದ್ದರಿಂದ ಕಾಡಿಗೆ ಹೋದವರು ಬಂದ ಮೇಲೆ ಬಂದರೆನ್ನಬಹುದು. ಇವತ್ತು ಬಾರದಿದ್ದರೆ ನಾಳೆ. ನಾಳೆ ಬಾರದಿದ್ದರೆ ನಾಡಿದ್ದು. ಹೀಗೆ ಕಾಡಿಗೆ ಹೋಗುವ ದಿನದಂತೆ ವಾಪಸು ಬರುವ ದಿನಕ್ಕೆ ನಿರ್ದಿಷ್ಟತೆ ಇಲ್ಲ. ಹೋದಂಥ ಕೆಲಸವಾಗಬೇಕೆನ್ನುವುದೇ ಮುಖ್ಯ.

“ಯಾಕಮ್ಮ ಇನ್ನೂ ಅಪ್ಪ ಬಂದಿಲ್ಲ” ಎಂದು ಕಮಲಿ ಅಮ್ಮನನ್ನು ಕೇಳಿದಳು. ಯಾವಾಗಲು ಸಂಕ್ರೇ ಗೌಡರು ಎಲ್ಲೇ ಹೋದರೂ ಕತ್ತಲಾಗುವ ಮುನ್ನ ಮನೆ ಸೇರುತ್ತಿದ್ದರು. ಹಾಗೆಂದು ಅಮಾವಾಸ್ಯೆಯ ಕತ್ತಲಲ್ಲೂ ಯಾವ ಬೆಳಕಿಲ್ಲದೆ ನಡೆಯುವುದು ಸಂಕ್ರೇ ಗೌಡರಿಗೆ ಕಷ್ಟವಲ್ಲ. ಆದರೆ ವಯಸ್ಸಾದಂತೆ ಹಾಗು ಮನೆಯವರ ಒತ್ತಡ ಹೆಚ್ಚಾದಂತೆ ಅನಿವಾರ್ಯತೆಯ ಹೊರತಾಗಿ ಇತ್ತೀಚೆಗಿನ ದಿನಗಳಲ್ಲಿ ರಾತ್ರಿ ಯಾವುದೇ ಸಂಚಾರಗಳನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಆದರೆ ಇಂದು ತಡ ರಾತ್ರಿಯಾದರೂ ಗೌಡ್ರು ಬಾರದಿದ್ದುದರಿಂದ ಸಹಜವಾಗಿ ಮನೆಯಲ್ಲಿ ಸಣ್ಣದೊಂದು ಆತಂಕವುಂಟಾದದ್ದು ಸಹಜ.

“ಇಷ್ಟರಲ್ಲೇ ಬರಬೇಕಿತ್ತು ಮಗಳೆ. ‘ಇವತ್ತು ಬಹಳ ದೂರ ಹೋಗಲಿಕ್ಕಿಲ್ಲ ಇಲ್ಲೇ ಹತ್ತಿರ ಒಂದಷ್ಟು ಕಾಳು ಮೆಣಸು ನೋಡಿ ಬಂದಿದ್ದೇನೆ ಹೀಗೆ ಹೋಗಿ ಹಾಗೆ ಬರುತ್ತೇನೆ’ ಎಂದು ಹೋಗಿದ್ದರಿಂದ ನನಗೂ ಗಾಭರಿಯಾಗುತ್ತದೆ” ಎಂದು ಸಂಕ್ರೇ ಗೌಡರ ಹೆಂಡತಿ ಸುಂದ್ರಿ ಹೇಳಿದರು.

“ಅಪ್ಪನಿಗೆ ಅದೆಷ್ಟು ಬಾರಿ ಹೇಳಿದ್ದೇನೆ. ನಿಮಗೆ
ಪ್ರಾಯವಾಗುತ್ತ ಇದೆ. ಕಾಡಿಗೆ ಹೋಗುವುದು ಸಾಕು ಎಂದರೆ ಕೇಳಲಾರರು” ಎಂದು ಕಮಲಿ ಅಮ್ಮನಲ್ಲಿ ತನ್ನ ಅಳಲನ್ನೂ ಹಂಚಿಕೊಂಡಳು.

ಸಂಕ್ರೇ ಗೌಡರ ತಾಯಿ ಅಮ್ಮು ಗೌಡ್ತಿ. ಅಳಂಬದ ಮನೆಯಲ್ಲಿರುವ ಹಿರಿಯ ಜೀವ. ಮನೆಯೊಳಗಿಂದಲೇ “ಕಮಲೀ ಸ್ವಲ್ಪ ನೀರು ಕೊಡೆ” ಎಂದು ಕೇಳಿದರು.

“ತಂದೆ ಅಜ್ಜಿ” ಎಂದು ಕಮಲಿ ನೀರು ಕೊಂಡು ಹೋದಳು. ನೀರನ್ನು ಪಡಕೊಂಡ ಅಮ್ಮು ಗೌಡ್ತಿ “ಸಂಕ್ರು ಬರ್ಲಿಲ್ವೆ” ಎಂದು ಕೇಳಿದಳು.

ಅಷ್ಟರಲ್ಲಿ ಕಾಳ ಬೊಗಳಲು ಪ್ರಾರಂಭಿಸಿತು. “ಬಹುಷ ಅಪ್ಪ ಬಂದರೆಂದು ಕಾಣುತ್ತದೆ” ಎಂದು ಕಮಲಿ ಹೊರಗೋಡಿದಳು.

ಕಾಳನ ಜೊತೆ ಇತರ ನಾಯಿಗಳೂ ಜೋರಾಗಿ ಬೊಗಳುತ್ತಿದ್ದುವೇ ಹೊರತು ಯಾರೂ ಬರುವುದು ಕಾಣಿಸಲಿಲ್ಲ. ಆದರೆ ಅದೇವೇಳೆ ದೂರದಲ್ಲೆಲ್ಲೊ ಅರಣ್ಯವನ್ನೇ ನಡುಗಿಸುವಂತೆ ಕಡವೆಯ ಆರ್ಭಟದ ಜತೆಗೆ ಹುಲಿಯ ಘರ್ಜನೆಯೂ ಕೇಳುತ್ತಿತ್ತು. ಅಳಂಬದಲ್ಲಿ ಇದು ಅಪರೂಪವಲ್ಲ. ಆಗಾಗ್ಗೆ ಕಡವೆ, ಹುಲಿ, ಚಿರತೆಗಳ ನಡುವೆ ಜಗಳಗಳು ಆಗುವುದು ಅಂತೆಯೇ ಪ್ರಾಣೋತ್ಕರ್ಷದ ವೇಳೆಯಲ್ಲಿ ಕಾಡನ್ನೇ ನಡುಗಿಸುವಷ್ಟು ಘರ್ಜನೆಗಳ ಭೀಕರತೆ ಎಲ್ಲರಿಗೂ ಅನುಭವವಿರುವಂಥದ್ದೇ ಆದರೂ ಇವತ್ತು ಸಂಕ್ರೇ ಗೌಡರು ಕಾಡಿನಿಂದ ಬಾರದೇ ಇದ್ದಾಗ ಈ ಘರ್ಜನೆಗಳು ಒಳ್ಳೆಯ ಲಕ್ಷಣವಲ್ಲವೆಂಬುದು ಅರಿವಿದ್ದುದರಿಂದ ಎಲ್ಲರೂ ಭಯಭೀತರಾದದ್ದಂತು ಸತ್ಯ. ಇತ್ತ ನಾಯಿಗಳು ಸ್ಥಬ್ದವಾಗದೆ ಏಕಪ್ರಕಾರ ಬೊಗಳುತ್ತಿದ್ದವು. ಪ್ರತಿಯೊಂದು ಕ್ಷಣವನ್ನೂ ಭೀತಿಯಲ್ಲೇ ಕಳೆಯುತ್ತಿರಲು ಹೊರಗೆ ಹೋದಂಥ ರಾಮಯ್ಯ ಗೌಡ ಮತ್ತು ಮುತ್ತೇ ಗೌಡ ಮನೆಗೆ ಬಂದರು. ಅಷ್ಟರಲ್ಲಿ ಮನೆಯವರೆಲ್ಲ ಭೀತಿಯಲ್ಲಿದ್ದದ್ದನ್ನು ಕಂಡು ಏನೋ ನಡೆಯಬಾರದ್ದು ನಡೆದಿದೆ ಎಂದುಕೊಂಡಾಗ ಕಮಲಿಯು ಎಲ್ಲವನ್ನೂ ತಿಳಿಸಿದಳು. ನಾಯಿಗಳ ನಿರಂತರ ಬೊಗಳುವಿಕೆಯಲ್ಲಿ ಕಾಡೊಳಗಿನ ಯಾವುದೇ ಘರ್ಜನೆಗಳಾಗಲಿ ಯಾರಾದರೂ ಬೊಬ್ಬೆ ಹೊಡೆಯುವುದಾಗಲಿ ಕೇಳುವಂತಿರಲಿಲ್ಲ. ಗಂಡಸರು ಮನೆಗೆ ಬಂದದ್ದರಿಂದ ಎಲ್ಲರಿಗೂ ಒಂದಷ್ಟು ಧೈರ್ಯ ಬಂದರೂ ಸಂಕ್ರೇ ಗೌಡರ ಮುಖ ನೋಡದೆ ಯಾರಿಗೂ ಸಮಾಧಾನವಿಲ್ಲವೆಂಬುದು ಸುಳ್ಳಲ್ಲ. “ಸ್ವಲ್ಪ ಹೊತ್ತು ನೋಡೋಣ.. ಆಗಲೂ ಅಪ್ಪ ಬಾರದಿದ್ದರೆ ಕಾಡಿಗೆ ಹೋಗುವುದೇ ಒಳ್ಳೆಯದು” ಎಂದು ರಾಮಯ್ಯ ಗೌಡ್ರು ನಿರ್ಧರಿಸಿದರು. ಅಂತೆಯೇ ಪಕ್ಕದಲ್ಲಿರುವ ಮನೆಗಳಿಗೆ ಹೇಳಿ ಅಲ್ಲಿಂದ ನಾಲ್ಕೈದು ಯುವಕರನ್ನೂ ಬರಹೇಳಿ ಬ್ಯಾಟರಿ ಲೈಟು, ಕತ್ತಿ, ದೊಣ್ಣೆಗಳೊಂದಿಗೆ ಹೊರಡುವುದೆಂದು ನಿರ್ಧರಿಸಿದರು. (ಓದಿ… ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ.. ಮುಂದೆ ನೋಡೋಣ)
**********
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

————————————————————————————————————————————————————————

ಅಳಂಬ..೨
*********


ಪಶ್ಚಿಮ ಘಟ್ಟಗಳ ಹೆಬ್ಬಾಗಿಲಿನಂತಿರುವ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದಲ್ಲಿ ಇರುವಂಥ ಸುಂದರವಾದ ‘ಅಳಂಬ’ ಎಂಬ ಊರಲ್ಲಿ ಅನಾದಿ ಕಾಲದಿಂದ ವಾಸವಾಗಿದ್ದಂಥ ಆದಿ ವಾಸಿಗಳ ಹತ್ತಾರು ಕುಟುಂಬಗಳು ಸಂತೃಪ್ತಿಯ ಬದುಕನ್ನು ಕಟ್ಟಿಕೊಂಡಿವೆ. ಕಾರ್ಕಳ ಬೆಳ್ತಂಗಡಿಯ ಹೆದ್ದಾರಿಯಲ್ಲಿ ನಾರಾವಿ ಎಂಬ ಸಣ್ಣ ಪೇಟೆಯಿದೆ. ಅಲ್ಲಿಂದ ಮುಂದೆ ಅರಸ್ಕಟ್ಟೆ ಎಂಬಲ್ಲಿಂದ ಎಡಕ್ಕೆ ಪಶ್ಚಿಮ ಘಟ್ಟಗಳತ್ತ ಹೊರಟರೆ ಮೊದಲಾಗಿ ಸಿಗುವ ಹಳ್ಳಿಯೇ ಕುಕ್ಕುಜೆ. ಈ ಕುಕ್ಕುಜೆ ಎನ್ನುವ ನಾಲ್ಕೈದು ಮನೆಗಳಿರುವ ಹಳ್ಳಿಯ ತೋಟ ಗದ್ದೆಗಳನ್ನು ದಾಟಿ ಮುನ್ನಡೆದಾಗ ಪಶ್ಚಿಮ ಘಟ್ಟಗಳ ಸಾಲುಗಳು ಪ್ರಾರಂಭವಾಗುತ್ತವೆ. ನಿತ್ಯ ಹರಿದ್ವರ್ಣದ ಈ ಕಾಡುಗಳಲ್ಲಿ ಇರುವಂಥ ಪ್ರತಿಯೊಂದು ಹಳ್ಳಿಯಿಂದ ಹಳ್ಳಿಗೂ ಮಾನವರು ಅದರಲ್ಲೂ ಕಾಡು ಜನರು ನಿತ್ಯವೂ ತಿರುಗಾಡುವ ಕಾಲು ದಾರಿಗಳಿವೆ. ಅಂತೆಯೇ ಮುಖ್ಯವಾದ ದಾರಿಗೆ ಅಲ್ಲಲ್ಲಿ ಕೆಲವು ಸೂಕ್ಷ್ಮ ದಾರಿಗಳೂ ಬಂದು ಸೇರುತ್ತವೆ. ಕಾಡಿನ ಪರಿಚಯವಿಲ್ಲದವರಿಗೆ ಇವು ದಾರಿಗಳೆಂದೇ ಗೊತ್ತಾಗದಿರುವಷ್ಟು ನಾಜೂಕು. ಇಂಥ ಏರಿಳಿತದ ಈ ದಾರಿಯಲ್ಲಿ ಎರಡು ಮೈಲು ನಡೆದಾಗ ಸಿಗುವುದೇ ಈ ಅಳಂಬ. ರಕ್ಷಿತಾರಣ್ಯದ ಮಧ್ಯದಲ್ಲಿರುವ ಈ ಹಳ್ಳಿಗಳ ಸೌಂದರ್ಯವನ್ನು ಬಲ್ಲವರೆ ಬಲ್ಲರು. ಪ್ರತಿಯೊಂದು ಹಳ್ಳಿಯ ಪರಿಧಿಯೂ ಅರಣ್ಯಗಳೇ ಆಗಿರುವುದು ಈ ಹಳ್ಳಿಗಳ ವಿಶೇಷ. ಅಂತಹ ಅರಣ್ಯದ ಸೆರಗಿನಲ್ಲಿ ಬಚ್ಚಿಕೊಂಡಿರುವ ಅಳಂಬವೆಂಬ ಪುಟ್ಟ ಹಳ್ಳಿಗೆ ಸ್ವಾಗತವನ್ನು ಕೊಡುವುದು ಗೇರು ಬೀಜದ ಹಾಡಿ. ಅಳಂಬ ಮಾತ್ರವಲ್ಲ ಈ ಘಟ್ಟದ ವ್ಯಾಪ್ತಿಯಲ್ಲಿ ಬರುವಂಥ ಎಲ್ಲ ಹಳ್ಳಿಗಳ ಚಿತ್ರಣವೂ ಸಾಮಾನ್ಯವಾಗಿ ಹೀಗೆಯೇ ಇರುತ್ತದೆ…

ಹಾಡಿ ಕಳೆದ ಮೇಲೆ ಗದ್ದೆಗಳು, ಗದ್ದೆಯ ಹುಣಿಗಳಲ್ಲಿ ತೆಂಗಿನ ಸಾಲುಗಳು, ಮುಳಿ ಹುಲ್ಲಿನ ಅಥವಾ ಸೋಗೆಯ ಮಾಡಿನ ಮನೆಗಳು, ಅಲ್ಲೇ ಪಕ್ಕದಲ್ಲಿ ಹರಿಯುವ ಶುದ್ಧ ನೀರಿನ ತೋಡುಗಳು, ನೀರಿನಲ್ಲಿ-ಗದ್ದೆಗಳಲ್ಲಿ-ಅಂಗಳದಲ್ಲಿ ಕೆಲವರು ಲಂಗೋಟಿ ಧರಿಸಿಕೊಂಡು ಕೆಲವರು ನಗ್ನವಾಗಿ ಕೆಲವರು ಲಂಗೋಟಿ ಧರಿಸಿಯೂ ಅರೆನಗ್ನವಾಗಿ ಆಡಿಕೊಂಡಿರುವ ಮಕ್ಕಳು, ಮನೆಗಂಟಿಕೊಂಡೇ ಇರುವ ಜಾನುವಾರುಗಳ ಹಟ್ಟಿ, ಅಂಗಳದ ಬದಿಯಲ್ಲೊಂದು ಕೋಳಿಗಳ ಗೂಡು, ಜಗಲಿ ಮೂಲೆಯಲ್ಲಿ ನಾಯಿಗಳ ವಾಸ್ತವ್ಯ, ಸಮತಟ್ಟಲ್ಲದ ಜಾಗಗಳಲ್ಲಿ ಅಡಿಕೆಯ ತೋಟಗಳು, ಅಂಗಳ ಮತ್ತು ತೋಟದ ನಡುವಿಗೆ ಹಲಸಿನ ಮತ್ತು ಮಾವಿನ ಮರಗಳು, ಗದ್ದೆಯ ನಡುವಲ್ಲೊಂದು ರಾತ್ರಿ ಹಂದಿಗಳನ್ನು ಕಾಯಲು ಕಟ್ಟಿದ ಚಪ್ಪರದಂಥ ಮಾಡಿನ ರಚನೆಯುಳ್ಳ ಸಣ್ಣದಾದ ತಟ್ಟಿ ಮನೆ, ಮನೆಯಂಗಳದಲ್ಲಿ ನಿಂತು ನೋಡಿದಾಗ ಕಾಡಿನ ಆಚೆಗೆ ದಿಗಂತದಲ್ಲಿ ಕಾಣುವ ಹಸಿರು ಬೆಟ್ಟಗಳು, ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಕಾಗೆ, ಗುಬ್ಬಚ್ಚಿ, ಕೋಗಿಲೆಯಂಥ ಹಕ್ಕಿಗಳು, ಎಲ್ಲೋ ದೂರದಲ್ಲಿ ಇನ್ನೊಂದು ಹಳ್ಳಿಯ ಬೊಗಳುವ ನಾಯಿಗಳ ಕ್ಷೀಣ ಶಬ್ದಗಳು, ಮತ್ತೆಲ್ಲೋ ಕಾಡೊಳಗೆ ಊಳಿಡುವ ನರಿಗಳು, ಅದೆಲ್ಲೋ ಕಾಡಿನಲ್ಲಿ ಜೇನು ಪಡೆಯಲೆಂದು ಹಾಕಿದ ಬೆಂಕಿಯ ಹೊಗೆಯ ಬಿಳಿಯಾದ ಹೊಗೆಯ ಮಾಲೆಗಳು, ಮೋಟಾರು ವಾಹನಗಳ ಪರಿಚಯವಿಲ್ಲದಿದ್ದರೂ ದಿನಾಲೂ ನಿರ್ದಿಷ್ಟ ವೇಳೆಯಲ್ಲಿ ಆಕಾಶ ಮಾರ್ಗದಲ್ಲಿ ಹೊಟ್ಟೆಯನ್ನಷ್ಟೇ ತೋರಿಸಿಕೊಂಡು ಓಡುತ್ತಿರುವ ವಿಮಾನಗಳು.. ಹೀಗೆ ಅನೇಕ ವಿಚಾರಗಳು ಈ ಹಳ್ಳಿಗಳ ಏಕಸಾಮ್ಯತೆಯ ಲಕ್ಷಣಗಳನ್ನು ತೋರಿಸುತ್ತವೆ. ಮಾತ್ರವಲ್ಲ ಇದರಿಂದಲೇ ಹಳ್ಳಿಗಳನ್ನು ಇವು ಒಂದು ಗೂಡಿಸಿವೆ ಎಂದೇ ಹೇಳಬಹುದು.
ಅಲ್ಲಿಂದ ಮುಂದೆ ಘಟ್ಟಗಳಿಗೆ ಸಮಾನಾಂತರವಾರಗಿ ಹೋದಾಗ ಅಳಂಬದಿಂದ ಅರ್ಧ ಮೈಲು ದೂರದಲ್ಲಿ ‘ಮಟ್ಕ್ಯೆ’ ಎಂಬ ಗೌಡರೆ ಹೆಚ್ಚಿರುವಂಥ ನಾಲ್ಕೈದು ಮನೆಗಳ ಜತೆಗೆ ಒಂದೆರಡು ಬಿಲ್ಲವರ ಮನೆಗಳು ಇರುವಂಥ ಸಣ್ಣ ಹಳ್ಳಿ. ಇಲ್ಲಿಯ ವೈಶಿಷ್ಟ್ಯವೆಂದರೆ ಎರಡು ತೋಡುಗಳ ಸಂಗಮ. ಕೆಲವೊಮ್ಮೆ ದೊಡ್ಡ ನೆರೆ ಬಂದರೆ ಒಂದಷ್ಟು ಕಾಲ ಮಟ್ಕ್ಯೆ ಎಂಬ ಹಳ್ಳಿಯ ಮನೆಗಳು ದ್ವೀಪದಂತಾಗುವುದೂ ಇದೆ. ಅಲ್ಲಿಂದ ಮತ್ತೆ ಒಂದು ಮೈಲು ದೂರದಲ್ಲಿ ನೂರಾರು ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ವಲಸೆ ಬಂದಂಥ ಚಿತ್ಪಾವನಿ ಬ್ರಾಹ್ಮಣ ಕುಟುಂಬಗಳೇ ಹೆಚ್ಚಾಗಿರುವ ಜತೆಗೆ ಬಿಲ್ಲವರ ಒಂದೆರಡು ಮನೆಗಳಿರುವ ಮತ್ತೊಂದು ಹಳ್ಳಿ ಇದುವೆ ನೆಲ್ಲಿತಡ್ಕ. ಮುಂದೆ ಇದೇ ಸರಣಿಯಲ್ಲಿ ಮುಂದುವರೆದಾಗ ಸಿಗುವಂಥ ಎರಡು ಮೂರು ನಾಲ್ಕು ಮನೆಗಳಿರುವ ಕೇಡೇಲು, ಮಾಳಿಗೆ ಎಂಬಂಥ ಸಣ್ಣ ಸಣ್ಣ ಹಳ್ಳಿಗಳಂತೆ ಈ ಪಶ್ಚಿಮ ಘಟ್ಟದ ಮಡಿಲಲ್ಲಿ ಇಂಥ ನೂರಾರು ಹಳ್ಳಿಗಳು ಕಾಣಸಿಗುತ್ತವೆ. ಹೀಗೆ ಬೇರೆ ಬೇರೆ ಪಂಗಡಗಳ ಮನೆಗಳು ಒಂದೇ ಭಾವದಲ್ಲಿ, ಒಂದೇ ಮನೆಯವರಂತೆ ಪರಸ್ಪರ ಸಹಕಾರದೊಡನೆ ಹಾಗೂ ಸ್ವಾತಂತ್ರ್ಯದೊಡನೆ ನೂರಾರು ವರ್ಷಗಳಿಂದ ಈ ಪಶ್ಚಿಮ ಘಟ್ಟದ ಮಡಿಲಲ್ಲಿ ತಮ್ಮ ತಮ್ಮ ಬದುಕು ಕಟ್ಟಿಕೊಂಡು ಹಿತಾನುಭವದಲ್ಲಿರುವುದೇ ಈ ಹಳ್ಳಿಗಳ ವಿಶೇಷತೆ.

ಇಂತಿರುವ ಈ ಅಳಂಬದಲ್ಲಿ ಸಂಕ್ರೇ ಗೌಡರ ಮನೆಯೇ ಈಗಿರುವ ಮನೆಗಳಲ್ಲಿ ಅತ್ಯಂತ ಹಳೆಯದಾದ ಮನೆ ಎನ್ನಬಹುದು. ಸಂಕ್ರೇ ಗೌಡರು ಹೇಳುವಂತೆ ಈ ಮನೆಗೆ ಸಾಧಾರಣ ನೂರೈವತ್ತು ವರುಷಗಳೇ ಆಗಿರಬಹುದು. ಸಂಕ್ರೇ ಗೌಡರ ಮನೆಯ ಪಕ್ಕದಲ್ಲಿ ಪಶ್ಚಿಮ ಘಟ್ಟದಿಂದ ಇಳಿಯುವಂಥ ಸಣ್ಣ ಹಳ್ಳವೊಂದಿದೆ. ಸಂಕ್ರೇ ಗೌಡರ ಎಲ್ಲಾ ನೀರಿನ ಅವಶ್ಯಕತೆಗಳನ್ನು ಆ ಹಳ್ಳ ಅನಾದಿ ಕಾಲದಿಂದಲೂ ಪೂರೈಸುತ್ತಲೇ ಇದೆ. ಸಂಕ್ರೇ ಗೌಡರ ಮನೆ ಅಂತಲ್ಲ ಪಶ್ಚಿಮ ಘಟ್ಟದ ಗರ್ಭದೊಳಗಿರುವ ಎಲ್ಲ ಹಳ್ಳಿಗಳೂ ಇಂಥ ಸಣ್ಣ ಸಣ್ಣ ಹಳ್ಳಗಳೊಂದಿಗೇ ಬದುಕುವುದು ಸಹಜ. ಪ್ರಕೃತಿಯ ಕೆಲವೊಂದು ವಿಸ್ಮಯಗಳು ಯಾವ ತರ್ಕಕ್ಕೂ ನಿಲುಕದಂತಿರುವುದು ಸಹಜ ತಾನೆ. ಅಂತೆಯೆ ಗೌಡರ ಮನೆಯ ಹತ್ತಿರದಲ್ಲಿ ಹಳ್ಳವೊಂದಿತ್ತು. ಯಾವ ಮಹಾಮಾರಿ ಪ್ರವಾಹಕ್ಕೂ ಮನೆಯ ಅಂಗಳಕ್ಕೆ ಕೂಡ ನೀರು ಬಾರದಿರುವಷ್ಟು ಸರಾಗವಾಗಿ ಇದರ ನೀರು ಹರಿಯುತ್ತಿತ್ತು. ಅದೊಂದು ರಾತ್ರಿಯಲ್ಲಿ ಅಂದರೆ ಸಂಕ್ರೇ ಗೌಡರ ಮುತ್ತಜ್ಜನ ಕಾಲದಲ್ಲಿ ಯಾವುದೊ ಕೆಟ್ಟ ಗಳಿಗೆಯಲ್ಲಿ ನಿರ್ದಿಷ್ಟ ಕಣಿವೆಯಲ್ಲಿ ಅಸಾಧ್ಯವಾದ ಮಳೆ ಬಂದು ಕಣಿವೆ ಜರಿದುದರ ಪರಿಣಾಮವಾಗಿ ಮಣ್ಣು ನೀರು ಏಕಪ್ರಕಾರವಾಗಿ ಹರಿದು ಬಂದು ಸಂಕ್ರೇ ಗೌಡರ ಮನೆಯನ್ನು ಜಲ ಸಮಾಧಿ ಮಾಡಿತ್ತಂತೆ. ಪುಣ್ಯವಶಾತ್ ಸಂಕ್ರೇ ಗೌಡರ ಮುತ್ತಜ್ಜ ಮನೆಯಲ್ಲಿ ಒಬ್ಬರೇ ಇದ್ದರಂತೆ. ಅಂತೆಯೇ ನೆರೆಯ ನೀರು ಏರುತ್ತಿದ್ದಂತೆ ಮನೆಯ ಹಿಂದುಗಡೆ ಇದ್ದಂಥ ಗುಡ್ಡಕ್ಕೆ ಸಂಕ್ರೇ ಗೌಡರ ಅಜ್ಜ ಅದ್ಹೇಗೋ ರಾತ್ರಿಯ ಕತ್ತಲಲ್ಲಿ ತಡವರಿಸಿ ಏರಿದ್ದರಿಂದ ಹಾಗೂ ಇತರರು ಅದ್ಯಾವುದೊ ಕಾರಣಗಳಿಂದ ಊರ ಹೊರಗಿದ್ದುದರಿಂದ ಯಾರ ಪ್ರಾಣಗಳಿಗೂ ಅಪಾಯ ಮಾಡದೆ ಆ ನೆರೆಯ ನೀರು ಮನೆಯನ್ನು ಮಾತ್ರ ಮಗುಚಿ ಬಿಟ್ಟಿತಂತೆ. ಸಾಧಾರಣ ಈ ಮಾತಿಗೆ ನೂರೈವತ್ತರಷ್ಟು ವರುಷಗಳಾದವು. ಹಾಗೆ ಆ ಕಾಲದಲ್ಲಿ ಊರವರೆಲ್ಲ ಸೇರಿ ಕಟ್ಟಿದ ಹೊಸ ಮನೆಯೆ ಇಂದು ಅಳಂಬದಲ್ಲಿರುವ ಮನೆಗಳ ಪೈಕಿ ಹಳೆಯದಾದ ಮನೆ. ಇತರ ಮನೆಗಳೆಲ್ಲ ಆಯಾಯಾ ಕಾಲಕ್ಕೆ ಹೊಸತಾಗಿ ಕಟ್ಟಿದ ಮನೆಗಳೇ ಆಗಿವೆ. (ಓದಿ… ಪ್ರೋತ್ಸಾಹಿಸಿ… ಪ್ರತಿಕ್ರಿಯಿಸಿ… ಮುಂದೆ ಇನ್ನೂ ಇದೆ)
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

————————————————————————————————————————

 

 

ಅಳಂಬ..೧
**********
(ಇದೊಂದು ಕಾಲ್ಪನಿಕ ಕಾದಂಬರಿ. ಇದರಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶಗಳು, ಕಾಲ, ವ್ಯವಹಾರ ಲೇಖಕನ ಕಲ್ಪನೆಯಾದರೂ ಬರುವಂಥ ಊರುಗಳ ಹೆಸರು, ಸಂಬಂಧ, ವೃತ್ತಿಗಳಿಗೆ ಮಾತ್ರ ಕುತ್ಲೂರು-ನಾರಾವಿ ಗ್ರಾಮದ ಹಳ್ಳಿಗಳೇ ಪ್ರೇರಣೆ. ಈ ಸರಣಿ ಓದುಗರ ಮನಸ್ಸಿಗೆ ಆನಂದ ನೀಡುವ ಉದ್ದೇಶದಿಂದ ಪ್ರಾರಂಭಿಸಿದ್ದೇನೆ. ಓದಲು ಉದ್ದವಾಗದಂತೆ ಸಣ್ಣ ಸಣ್ಣ ಕಂತುಗಳನ್ನು ನೀಡುತ್ತೇನೆ. ಬಹುಷ ವಾರಕ್ಕೆ ಎರಡು ದಿನ ಅಂದರೆ ಶನಿವಾರ ಮತ್ತು ಬುಧವಾರ ಪ್ರಕಟಿಸುತ್ತೇನೆ. ಖಷಿಯಾದರೆ ಒಂದು ಮೆಚ್ಚುಗೆ ಇರಲಿ ಅಥವಾ ಒಂದು ವಾಕ್ಯದ್ದಾದರೂ ಪರವಾಗಿಲ್ಲ ಪ್ರೇರಣೆ ನೀಡುವ ಎರಡು ಮಾತುಗಳಿರಲಿ. ಯಾಕೆಂದರೆ ನಿಮ್ಮ ಒಂದು ಮೆಚ್ಚುಗೆ ಹತ್ತು ಪುಟಗಳ ಬರವಣಿಗೆಗೆ ಪ್ರೇರಣೆ ನೀಡುವುದರಲ್ಲಿ ಸಂಶಯವಿಲ್ಲ. ಎಲ್ಲ ಸಾಹಿತ್ಯ ಪ್ರಿಯರಿಗೆ ನಮಸ್ಕಾರಗಳು… ಅಂತೆಯೇ ಈ ಕಾದಂಬರಿಯ ಕಾಲಮಾನವೂ ಸಾಧಾರಣ ಅರ್ಧ ಶತಮಾನಕ್ಕೂ ಹಿಂದಿನ ದಿನಗಳನ್ನು ನೆನಪಿಸುವಂಥದ್ದು. ಮತ್ತೊಮ್ಮೆ ನಿಮ್ಮ ಸಹಕಾರವನ್ನು ಕೋರುತ್ತಿದ್ದೇನೆ.)

ಅಳಂಬ.. ಎಲ್ಲರ ದೃಷ್ಟಿಯಲ್ಲಿ ಇದು ಕುಗ್ರಾಮ. ಆದರೆ ಪ್ರಕೃತಿಯ ಸೌಂದರ್ಯ ತಿಳಿದವರಿಗೆ, ಪ್ರಕೃತಿಯೊಡನೆ ಬೆರೆತು ಬಾಳುವವರಿಗೆ ಅಥವಾ ಅಳಂಬದವರಿಗೆ ಇದು ಸ್ವರ್ಗವೇ ಆಗಿದೆ. ವಾಹನಗಳ ಓಡಾಟವಿಲ್ಲ, ಕಳ್ಳಕಾಕರ ಭಯವಿಲ್ಲ, ಹೋಟೇಲು ಅಂಗಡಿಗಳಿಲ್ಲ, ಶಾಲಾ ಕಾಲೇಜುಗಳಿಲ್ಲ, ಆಸ್ಪತ್ರೆ ಎಂಬುದಿಲ್ಲ, ಕಾಲು ದಾರಿಯ ಓಡಾಟವೇ ಎಲ್ಲ, ಜಾತಿ ಜಾತಿಗಳೊಳಗೆ ಬಡಿದಾಟಗಳಿಲ್ಲ, ದೇವಸ್ಥಾನ ಗುಡಿಗಳಿಲ್ಲ, ಮೇಲು ಕೀಳುಗಳೆಂಬ ಭಾವಗಳಿಲ್ಲ… ಹೀಗೆ ಹತ್ತಾರು ಇಲ್ಲಗಳ ನಡುವೆ ಇರುವುದಾದರೂ ಏನೆಂದು ಕೊಂಡಾಗ ಸ್ವರ್ಗ ಮಾತ್ರ ಇಲ್ಲಿದೆ ಎನ್ನಬಹುದು. ಯಾಕೆಂದರೆ ಸ್ವರ್ಗದಲ್ಲಿ ಮೇಲೆ ಹೇಳಿದ ಯಾವುದೇ ನಾಗರಿಕ ಸೌಲಭ್ಯಗಳಿಲ್ಲದಿರುವುದರಿಂದ ಹಾಗೂ ಅಳಂಬವು ಆ ಇಲ್ಲದ ಸೌಲಭ್ಯಗಳಿಂದಲೇ ತನ್ನ ಅಸ್ತಿತ್ವವನ್ನು ಕಂಡುಕೊಂಡದ್ದರಿಂದ ಪೂರ್ಣ ಸ್ವರ್ಗ ಅಲ್ಲದೆ ಇದ್ದರೂ ಇದು ಸ್ವರ್ಗದಂಥ ಸುಗ್ರಾಮ ಎಂದು ಹೇಳಬಹುದು.

ಹಾಗಾದರೆ ಇಲ್ಲೇನಿದೆ ಎಂದಾಗ ಮೊದಲನೆಯದಾಗಿ ಸ್ವಚ್ಛಂದ ಬದುಕಿದೆ. ಪರಿಶುದ್ಧವಾದ ಗಾಳಿ ಇದೆ. ಅಮೃತ ಸಮಾನವಾದ ನಿತ್ಯವೂ ಹರಿದು ಹೋಗುವ ಗಂಗಾಜಲವಿದೆ. ಸುತ್ತಮುತ್ತಲೂ ನಿತ್ಯ ಹರಿದ್ವರ್ಣದ ಕಾಡುಗಳಿವೆ. ದಿನಕ್ಕೆ ಒಂದೆರಡು ಸಲವಾದರೂ ಜಿಂಕೆ-ಕಡವೆ-ಕಾಡೆಮ್ಮೆ-ಕಾಡು ಹಂದಿಗಳ ಸಹಜ ಬದುಕಿನ ಸಂಚಾರ ಕಾಣುವ ಭಾಗ್ಯವಿದೆ. ಅಪರೂಪಕ್ಕೆ ಹೆಬ್ಬುಲಿಯ ದರ್ಶನವೂ ಆಗುವುದಿದೆ. ಅಂತೆಯೆ ಕಾಡು ಪ್ರಾಣಿಗಳಿಂದಾಗಿ ಅಳಂಬದಲ್ಲಿ ಮಾನವರು ಜೀವ ಕಳಕೊಂಡ ಉದಾಹರಣೆಯೇ ಇಲ್ಲವೆಂಬ ಖ್ಯಾತಿಯೂ ಇದೆ. ಹಕ್ಕಿಗಳ ಕಲರವ ಮನೆಯೊಳಗಿಂದಲೆ ಬರುತ್ತದೋ ಎಂಬ ಭಾವ ಬರುವಂಥ ಖೇಚರಿಗಳ ಹಿತವಾದ ಸಾಂಗತ್ಯವಿದೆ.

ಮಂಗಗಳು ನಿತ್ಯವೂ ಬಂದರೂ ಕೃಷಿ-ಬೆಳೆಯನ್ನು ಹಾಳು ಮಾಡದಿರುವಂಥ ಆಹಾರ ವ್ಯವಸ್ಥೆ ಕಾಡಿನೊಳಗೆ ಸರ್ವ ಕಾಲದಲ್ಲೂ ಇದೆ. ಬೇಸಿಗೆಯಲ್ಲಿ ತಂಪಾದ, ಚಳಿಗಾಲದಲ್ಲಿ ಬೆಚ್ಚಗಿನ, ಮಳೆಗಾಲದಲ್ಲಿ ಪ್ರವಾಹ ರಹಿತವಾದ ಸರ್ವ ಋತುಮಾನಗಳು ಮಾನವರಿಗಾಗಲಿ ಅನ್ಯ ಜೀವಿಗಳಿಗಾಗಲಿ ಹಿತಾನುಭವ ಕೊಡುತ್ತಿದೆ. ಆಗೊಮ್ಮೆ ಈಗೊಮ್ಮೆ ಬೃಹದಾಕಾರದ ಸರಿಸೃಪಗಳೊ ಸಣ್ಣ ಸಣ್ಣ ವಿಷದ ಹಾವುಗಳೊ ಬಂದು ಹೋಗುವುದೂ ಕಾಣಸಿಗುತ್ತದೆ. (ಜನರೇ ಹೆದರಿ ಅಂಥ ಹಾವುಗಳನ್ನು ಕೊಂದದ್ದೇ ಜಾಸ್ತಿ ಹೊರತು ಹಾವಿನ ಕಡಿತಕ್ಕೊಳಗಾದ ಜನರ ಸಮಾಚಾರ ತೀರಾ ವಿರಳವಿದೆ.) ಪಟ್ಟಣಗಳಿಂದ ವರುಷಕ್ಕೊಂದು ಕೆ.ಜಿ. ತರಕಾರಿಯನ್ನಾಗಲಿ ಹಣ್ಣುಗಳನ್ನಾಗಲಿ ತಾರದೆಯೂ ಪೌಷ್ಟಿಕಾಂಶಗಳಿಗೆ ಒಂದಿನಿತೂ ಕೊರತೆಯಾಗದ ಹಲವು ವೈವಿಧ್ಯಗಳ ಹೂ ಹಣ್ಣು ತರಕಾರಿ ಯಥೆಚ್ಛವಾಗಿ ದೊರೆಯುತ್ತಿರುತ್ತದೆ. ರಾತ್ರಿ ಬೆಳದಿಂಗಳ ಬೆಳಕಿನ ಜತೆಗೆ ಅಮಾವಾಸ್ಯೆಯ ಗಾಢಾಂಧಕಾರಗಳನ್ನು ಅನುಭವಿಸಿದ ಸಂತೃಪ್ತಿ ಇದೆ. ಕಷ್ಟವೋ ಸುಖವೋ ಯಾರಿಗೇ ಬಂದರೂ ತಮ್ಮದೇ ಎನ್ನುವ ಭಾವದಿಂದ ಪರಸ್ಪರ ಸಹಕರಿಸಿ ಸ್ಪಂದಿಸುವ ಗುಣ ಸರ್ವರಲ್ಲೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ವ್ಯಾಪ್ತಿಯ ಅರಿವಿದೆ… (ಮೆಚ್ಚಿಗೆಯಾದರೆ ಮುಂದೆ ಇನ್ನೂ ಇದೆ.)
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ.

Events/Announcements

Advertisement

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 8 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 21 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 497 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

ಗರುಡ ಗರ್ವಭಂಗ – ಚಿತ್ಪಾವನರೆ ಸೇರಿ ಪ್ರಸ್ತುತ ಪಡಿಸಿದ ಚಿತ್ಪಾವನಿ ಭಾಷೆಯ ಯಕ್ಷಗಾನ

Post Views: 234 ಚಿತ್ಪಾವನರಿಂದ ಗರುಡ ಗರ್ವಭಂಗ ************************** ಈ ದಿನ ಅಂದರೆ ೨೮/ ೬/ ೨೦೨೬ ನೇ ಆದಿತ್ಯವಾರ ಚಿತ್ಪಾವನ ಸಮಾಜಕ್ಕೆ ಒಂದು ಹೆಮ್ಮೆಯ ದಿನ. ಇದಕ್ಕೆ ಕಾರಣ ಈ...

ಹೊಸಮಠದ ಚಿತ್ಪಾವನರಿಂದ ದೇಗುಲ ದರ್ಶನ, ಗೋಶಾಲೆ, ಸೇವಾಶ್ರಮ ಮತ್ತು ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗೆ ಒಂದು ದಿನದ ಭೇಟಿ (31 ಮೇ, ಭಾನುವಾರ)

Post Views: 95 ಹೊಸಮಠದ ಚಿತ್ಪಾವನರಿಂದ ದೇಗುಲ ದರ್ಶನ, ಗೋಶಾಲೆ, ಸೇವಾಶ್ರಮ ಮತ್ತು ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗೆ ಒಂದು ದಿನದ ಭೇಟಿ (31 ಮೇ, ಭಾನುವಾರ) ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ಪದ್ಯಾಣ...

ಡಾ. ಚಂದ್ರಶೇಖರ ದಾಮ್ಲೆಯವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ

Post Views: 140   ಉಡುಪಿಯ ಯಕ್ಷಗಾನ ಕಲಾರಂಗ, ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನಲ್ಲಿ ವಿದ್ವಾಂಸರಿಗೆ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ನಿವೃತ್ತ ಪ್ರಾಧ್ಯಾಪಕ, ಶಿಕ್ಷಣ ತಜ್ಞ, ಲೇಖಕ,ಪ್ರಸಂಗ ಕರ್ತ, ಕಲಾವಿಮರ್ಶಕ,...

ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘ -ಮಹಿಳಾ ಘಟಕದ ಪ್ರಥಮ ಸಭೆ ಮತ್ತು ಹೊಸಮಠ ವಠಾರದ ಕುಟುಂಬ ಸಮ್ಮಿಲನ ಕಾರ್ಯಕ್ರಮ

Post Views: 125 ****** -***** ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಮಹಿಳಾ ಘಟಕದ ಪ್ರಥಮ ಸಭೆ ಮತ್ತು ಹೊಸಮಠ ವಠಾರದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಶ್ರೀ ಅಜಿತ ಹೆಬ್ಬಾರ್...

ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ

Post Views: 149 ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ ಕಾರ್ಕಳ ತಾಲೂಕು ಎಡಪಾಡಿ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಹತ್ತು ದಿನಗಳ ವಸಂತ...

ಡಿ. ಹರೀಶ್ ತಾಮನ್ಕರ್ ರವರ ಶಿಕ್ಷಣ ಕ್ರಾಂತಿ

Post Views: 101 ಡಿ. ಹರೀಶ್ ತಾಮನ್ಕರ್ ಅವರು ಕೊಡಗು ಜಿಲ್ಲೆಯ ಗೋಣಿಕೊಪ್ಪ ಎಂಬಲ್ಲಿ ಕಳೆದ 19 ವರ್ಷಗಳಿಂದ ಶಿಕ್ಷಣ ಕ್ರಾಂತಿ ಪ್ರಾರಂಭಿಸಿದ್ದಾರೆ. ಅವರು ವಿದ್ಯಾನಿಕೇತನ ಪಿಯು ಕಾಲೇಜನ್ನು 2007 ರಲ್ಲಿ...

ಪರಶುರಾಮ ಜಯಂತಿ – ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು

Post Views: 149 ದಿನಾಂಕ 19/04/2026, ಭಾನುವಾರದಂದು ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು ವತಿಯಿಂದ ಮೖಸೂರಿನ ಬಿ. ಎಸ್. ಎಸ್. ವಿದ್ಯೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಂಜೆ 5-30 ರಿಂದ 8...

Recently Added

View All

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 150 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 246 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 372 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 256 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

Nikon Z7 – 5 year old – Body only – for sale – Contact : 9591522880

Post Views: 317 Nikon Z7 5 year old Body only for sale Shutter : 165000 approximately Well maintained always kept in dry cabinet...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 397 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 249 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 238 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 260 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 176 Courtesy: Scholarspace with Anubhav

Watch our latest podcasts