ಅಳಂಬ..೧
**********
(ಇದೊಂದು ಕಾಲ್ಪನಿಕ ಕಾದಂಬರಿ. ಇದರಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶಗಳು, ಕಾಲ, ವ್ಯವಹಾರ ಲೇಖಕನ ಕಲ್ಪನೆಯಾದರೂ ಬರುವಂಥ ಊರುಗಳ ಹೆಸರು, ಸಂಬಂಧ, ವೃತ್ತಿಗಳಿಗೆ ಮಾತ್ರ ಕುತ್ಲೂರು-ನಾರಾವಿ ಗ್ರಾಮದ ಹಳ್ಳಿಗಳೇ ಪ್ರೇರಣೆ. ಈ ಸರಣಿ ಓದುಗರ ಮನಸ್ಸಿಗೆ ಆನಂದ ನೀಡುವ ಉದ್ದೇಶದಿಂದ ಪ್ರಾರಂಭಿಸಿದ್ದೇನೆ. ಓದಲು ಉದ್ದವಾಗದಂತೆ ಸಣ್ಣ ಸಣ್ಣ ಕಂತುಗಳನ್ನು ನೀಡುತ್ತೇನೆ. ಬಹುಷ ವಾರಕ್ಕೆ ಎರಡು ದಿನ ಅಂದರೆ ಶನಿವಾರ ಮತ್ತು ಬುಧವಾರ ಪ್ರಕಟಿಸುತ್ತೇನೆ. ಖಷಿಯಾದರೆ ಒಂದು ಮೆಚ್ಚುಗೆ ಇರಲಿ ಅಥವಾ ಒಂದು ವಾಕ್ಯದ್ದಾದರೂ ಪರವಾಗಿಲ್ಲ ಪ್ರೇರಣೆ ನೀಡುವ ಎರಡು ಮಾತುಗಳಿರಲಿ. ಯಾಕೆಂದರೆ ನಿಮ್ಮ ಒಂದು ಮೆಚ್ಚುಗೆ ಹತ್ತು ಪುಟಗಳ ಬರವಣಿಗೆಗೆ ಪ್ರೇರಣೆ ನೀಡುವುದರಲ್ಲಿ ಸಂಶಯವಿಲ್ಲ. ಎಲ್ಲ ಸಾಹಿತ್ಯ ಪ್ರಿಯರಿಗೆ ನಮಸ್ಕಾರಗಳು… ಅಂತೆಯೇ ಈ ಕಾದಂಬರಿಯ ಕಾಲಮಾನವೂ ಸಾಧಾರಣ ಅರ್ಧ ಶತಮಾನಕ್ಕೂ ಹಿಂದಿನ ದಿನಗಳನ್ನು ನೆನಪಿಸುವಂಥದ್ದು. ಮತ್ತೊಮ್ಮೆ ನಿಮ್ಮ ಸಹಕಾರವನ್ನು ಕೋರುತ್ತಿದ್ದೇನೆ.)
ಅಳಂಬ.. ಎಲ್ಲರ ದೃಷ್ಟಿಯಲ್ಲಿ ಇದು ಕುಗ್ರಾಮ. ಆದರೆ ಪ್ರಕೃತಿಯ ಸೌಂದರ್ಯ ತಿಳಿದವರಿಗೆ, ಪ್ರಕೃತಿಯೊಡನೆ ಬೆರೆತು ಬಾಳುವವರಿಗೆ ಅಥವಾ ಅಳಂಬದವರಿಗೆ ಇದು ಸ್ವರ್ಗವೇ ಆಗಿದೆ. ವಾಹನಗಳ ಓಡಾಟವಿಲ್ಲ, ಕಳ್ಳಕಾಕರ ಭಯವಿಲ್ಲ, ಹೋಟೇಲು ಅಂಗಡಿಗಳಿಲ್ಲ, ಶಾಲಾ ಕಾಲೇಜುಗಳಿಲ್ಲ, ಆಸ್ಪತ್ರೆ ಎಂಬುದಿಲ್ಲ, ಕಾಲು ದಾರಿಯ ಓಡಾಟವೇ ಎಲ್ಲ, ಜಾತಿ ಜಾತಿಗಳೊಳಗೆ ಬಡಿದಾಟಗಳಿಲ್ಲ, ದೇವಸ್ಥಾನ ಗುಡಿಗಳಿಲ್ಲ, ಮೇಲು ಕೀಳುಗಳೆಂಬ ಭಾವಗಳಿಲ್ಲ… ಹೀಗೆ ಹತ್ತಾರು ಇಲ್ಲಗಳ ನಡುವೆ ಇರುವುದಾದರೂ ಏನೆಂದು ಕೊಂಡಾಗ ಸ್ವರ್ಗ ಮಾತ್ರ ಇಲ್ಲಿದೆ ಎನ್ನಬಹುದು. ಯಾಕೆಂದರೆ ಸ್ವರ್ಗದಲ್ಲಿ ಮೇಲೆ ಹೇಳಿದ ಯಾವುದೇ ನಾಗರಿಕ ಸೌಲಭ್ಯಗಳಿಲ್ಲದಿರುವುದರಿಂದ ಹಾಗೂ ಅಳಂಬವು ಆ ಇಲ್ಲದ ಸೌಲಭ್ಯಗಳಿಂದಲೇ ತನ್ನ ಅಸ್ತಿತ್ವವನ್ನು ಕಂಡುಕೊಂಡದ್ದರಿಂದ ಪೂರ್ಣ ಸ್ವರ್ಗ ಅಲ್ಲದೆ ಇದ್ದರೂ ಇದು ಸ್ವರ್ಗದಂಥ ಸುಗ್ರಾಮ ಎಂದು ಹೇಳಬಹುದು.
ಹಾಗಾದರೆ ಇಲ್ಲೇನಿದೆ ಎಂದಾಗ ಮೊದಲನೆಯದಾಗಿ ಸ್ವಚ್ಛಂದ ಬದುಕಿದೆ. ಪರಿಶುದ್ಧವಾದ ಗಾಳಿ ಇದೆ. ಅಮೃತ ಸಮಾನವಾದ ನಿತ್ಯವೂ ಹರಿದು ಹೋಗುವ ಗಂಗಾಜಲವಿದೆ. ಸುತ್ತಮುತ್ತಲೂ ನಿತ್ಯ ಹರಿದ್ವರ್ಣದ ಕಾಡುಗಳಿವೆ. ದಿನಕ್ಕೆ ಒಂದೆರಡು ಸಲವಾದರೂ ಜಿಂಕೆ-ಕಡವೆ-ಕಾಡೆಮ್ಮೆ-ಕಾಡು ಹಂದಿಗಳ ಸಹಜ ಬದುಕಿನ ಸಂಚಾರ ಕಾಣುವ ಭಾಗ್ಯವಿದೆ. ಅಪರೂಪಕ್ಕೆ ಹೆಬ್ಬುಲಿಯ ದರ್ಶನವೂ ಆಗುವುದಿದೆ. ಅಂತೆಯೆ ಕಾಡು ಪ್ರಾಣಿಗಳಿಂದಾಗಿ ಅಳಂಬದಲ್ಲಿ ಮಾನವರು ಜೀವ ಕಳಕೊಂಡ ಉದಾಹರಣೆಯೇ ಇಲ್ಲವೆಂಬ ಖ್ಯಾತಿಯೂ ಇದೆ. ಹಕ್ಕಿಗಳ ಕಲರವ ಮನೆಯೊಳಗಿಂದಲೆ ಬರುತ್ತದೋ ಎಂಬ ಭಾವ ಬರುವಂಥ ಖೇಚರಿಗಳ ಹಿತವಾದ ಸಾಂಗತ್ಯವಿದೆ.
ಮಂಗಗಳು ನಿತ್ಯವೂ ಬಂದರೂ ಕೃಷಿ-ಬೆಳೆಯನ್ನು ಹಾಳು ಮಾಡದಿರುವಂಥ ಆಹಾರ ವ್ಯವಸ್ಥೆ ಕಾಡಿನೊಳಗೆ ಸರ್ವ ಕಾಲದಲ್ಲೂ ಇದೆ. ಬೇಸಿಗೆಯಲ್ಲಿ ತಂಪಾದ, ಚಳಿಗಾಲದಲ್ಲಿ ಬೆಚ್ಚಗಿನ, ಮಳೆಗಾಲದಲ್ಲಿ ಪ್ರವಾಹ ರಹಿತವಾದ ಸರ್ವ ಋತುಮಾನಗಳು ಮಾನವರಿಗಾಗಲಿ ಅನ್ಯ ಜೀವಿಗಳಿಗಾಗಲಿ ಹಿತಾನುಭವ ಕೊಡುತ್ತಿದೆ. ಆಗೊಮ್ಮೆ ಈಗೊಮ್ಮೆ ಬೃಹದಾಕಾರದ ಸರಿಸೃಪಗಳೊ ಸಣ್ಣ ಸಣ್ಣ ವಿಷದ ಹಾವುಗಳೊ ಬಂದು ಹೋಗುವುದೂ ಕಾಣಸಿಗುತ್ತದೆ. (ಜನರೇ ಹೆದರಿ ಅಂಥ ಹಾವುಗಳನ್ನು ಕೊಂದದ್ದೇ ಜಾಸ್ತಿ ಹೊರತು ಹಾವಿನ ಕಡಿತಕ್ಕೊಳಗಾದ ಜನರ ಸಮಾಚಾರ ತೀರಾ ವಿರಳವಿದೆ.) ಪಟ್ಟಣಗಳಿಂದ ವರುಷಕ್ಕೊಂದು ಕೆ.ಜಿ. ತರಕಾರಿಯನ್ನಾಗಲಿ ಹಣ್ಣುಗಳನ್ನಾಗಲಿ ತಾರದೆಯೂ ಪೌಷ್ಟಿಕಾಂಶಗಳಿಗೆ ಒಂದಿನಿತೂ ಕೊರತೆಯಾಗದ ಹಲವು ವೈವಿಧ್ಯಗಳ ಹೂ ಹಣ್ಣು ತರಕಾರಿ ಯಥೆಚ್ಛವಾಗಿ ದೊರೆಯುತ್ತಿರುತ್ತದೆ. ರಾತ್ರಿ ಬೆಳದಿಂಗಳ ಬೆಳಕಿನ ಜತೆಗೆ ಅಮಾವಾಸ್ಯೆಯ ಗಾಢಾಂಧಕಾರಗಳನ್ನು ಅನುಭವಿಸಿದ ಸಂತೃಪ್ತಿ ಇದೆ. ಕಷ್ಟವೋ ಸುಖವೋ ಯಾರಿಗೇ ಬಂದರೂ ತಮ್ಮದೇ ಎನ್ನುವ ಭಾವದಿಂದ ಪರಸ್ಪರ ಸಹಕರಿಸಿ ಸ್ಪಂದಿಸುವ ಗುಣ ಸರ್ವರಲ್ಲೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ವ್ಯಾಪ್ತಿಯ ಅರಿವಿದೆ… (ಮೆಚ್ಚಿಗೆಯಾದರೆ ಮುಂದೆ ಇನ್ನೂ ಇದೆ.)
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ.
















