ಅಶ್ವಮೇಧ
*********
ಬೆಂಗಳೂರಿಗೆ ಬಸ್ಸಲ್ಲಿ ಹೋಗುವುದೆಂದರೆ ನನಗೆ ಬಹಳ ಇಷ್ಟ. ಅದರಲ್ಲೂ ಕೆಂಪು ಬಸ್ಸು, ಹಗಲಿನ ಪಯಣ, ಚಾಲಕನ ಎಡ ಬದಿಯ ಕಿಟಕಿಯ ಸೀಟು, ಅರ್ಧ ತೆರೆದ ಕಿಟಕಿ. ಇಷ್ಟೊಂದು ಸೌಕರ್ಯವಿದ್ದರೆ ಸಾಕು ಪಯಣ ಆನಂದಕರ. ಅದಕ್ಕೆ ಪೂರಕವಾಗಿ ಚಾಲಕನ ಚಾಲನೆಯೂ ಹಿತವಾಗಿದ್ದರೆ ಅದೊಂದು ಸುಖಾನುಭವ ನೀಡುವ ವ್ಯವಹಾರವೆನ್ನುವುದರಲ್ಲಿ ಸಂದೇಹವಿಲ್ಲ. ಅಂತೆಯೆ ಈ ಹಿನ್ನೆಲೆಯಿಂದ ನಾನೊಂದು ಬಾರಿ ಬೆಂಗಳೂರಿಗೆ ಹೋಗಿದ್ದೆ. ಒಂದೆರಡು ದಿನವಿದ್ದು ವಾಪಸು ಊರಿಗೆ ಬರಬೇಕಾದರೆ ಅನಿವಾರ್ಯವಾಗಿ ರಾತ್ರಿ ಬಸ್ಸಿಗೆ ಬರಬೇಕಾಯಿತು. ರಾತ್ರಿ ಬಸ್ಸಾದರೂ ನನಗೆ ಕೆಂಪು ಬಸ್ಸುಗಳೇ ಇಷ್ಟ. ಹಾಗೆಯೇ ಅಶ್ವಮೇಧ ಎಂಬ ಹೊಸ ಬಸ್ಸಿನಲ್ಲಿ ಪ್ರಯಾಣಿಸಬೇಕೆಂಬ ಹಂಬಲವೂ ಇತ್ತು. ಆ ರಾತ್ರಿ ಅಶ್ವಮೇಧ ಬಸ್ಸು ಹುಡುಕಿಕೊಂಡು ನನ್ನ ನೆಚ್ಚಿನ ಮುಂದಿನ ಸೀಟಲ್ಲಿ ಟಿಕೇಟು ಪಡಕೊಂಡು ಕೂತುಕೊಂಡೆ. ಬಹಳ ಸುಂದರವಾದ, ಹೊಸತಾದ, ಜಗಮಗಿಸುವ ಬಸ್ಸು ಸರಿಯಾದ ವೇಳೆಗೆ ಹೊರಟಿತು. ಚಾಲಕನೂ ಯುವಕನಾಗಿದ್ದ ಅಂತೆಯೆ ಚಾಲನೆಯೂ ವಿಶ್ವಾಸದಾಯಕವಾಗಿತ್ತು. ಬೆಂಗಳೂರು ಕೆಂಪೆಗೌಡ ನಿಲ್ದಾಣದಿಂದ ಹೊರಟಾಗ ಹತ್ತರಷ್ಟಿದ್ದ ಜನ ನೆಲಮಂಗಲಕ್ಕೆ ಬಂದಾಗ ಸಾಧಾರಣ ಮುಕ್ಕಾಲಂಶದಷ್ಟು ತುಂಬಿ ಆಗಿತ್ತು. ಅದರಲ್ಲೂ ಹೆಚ್ಚಿನವರು ಮಹಿಳೆಯರೇ ಆಗಿದ್ದರು. ರಜಾದಿನಗಳಾದ್ದರಿಂದ ಎಲ್ಲರೂ ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಹೊರಟಿದ್ದರು. ಮುಂದೆ ಬಸ್ಸು ಅದರದ್ದೇ ವೇಗದಲ್ಲಿ ಹೋಗುತ್ತಿರುವಾಗ ಚಾಲಕನಿಗೆ ಅದೇನೋ ಲಹರಿ ಬಂದಂತೆ ವಾಹನದೊಳಗಿದ್ದ ಆಡಿಯೊ ಸಿಸ್ಟಮನ್ನು ಚಾಲು ಮಾಡಿದ. ಎಲ್ಲರೂ ಧರ್ಮಸ್ಥಳದ ಮಂಜುನಾಥನ ಭಕ್ತರಾದ್ದರಿಂದ ದೇವರ ನಾಮಗಳನ್ನು ಹಾಕಿದಾಗ ಒಂದು ರೀತಿಯ ಸುಖವುಂಟಾಗಿತ್ತು. ಅಂತೆಯೇ ಸರಕಾರಿ ಬಸ್ಸಲ್ಲಿ ಇಂಥ ವ್ಯವಸ್ಥೆಯನ್ನು ನಾನು ಇದೇ ಪ್ರಥಮವಾಗಿ ನೋಡಿ ಖುಷಿಯಾಗಿತ್ತು.
ಹೆಂಗಸರೇ ಹೆಚ್ಚಾಗಿದ್ದ ಈ ಬಸ್ಸಲ್ಲಿ ಚಾಲಕನ ಹಿಂದಿನ ಸೀಟಲ್ಲಿ ಕೂತಿರುವ ಇಬ್ಬರು ಯುವತಿಯರಿಗೆ ಮಾತ್ರ ಈ ಭಕ್ತಿ ಗೀತೆಗಳು ಹಿಡಿಸಲಿಲ್ಲ. ಅಷ್ಟರಲ್ಲಿ ಆಕೆಯಲ್ಲೊಬ್ಬಳು ಎದ್ದು ನಿಂತು “ಡಿ.ಜೆ. ಹಾಕೋಣ ಯಾರೆಲ್ಲ ಡ್ಯಾನ್ಸ್ ಮಾಡಲು ಸಿದ್ದರಿದ್ದೀರಿ” ಎಂದು ಗಟ್ಟಿಯಾಗಿ ಕೇಳಿದಳು. ಬಹುಷ ಇದರಿಂದ ಸ್ಪೂರ್ತಿ ಪಡೆದಂಥ ಇತರ ಪ್ರಯಾಣಿಕರಿಗೆ ಕೂಡ ಇಂತಹ ಕುಣಿತ ಬೇಕಿತ್ತು ಎನ್ನುವಂತೆ ಎಲ್ಲರೂ ಅನುಮೋದಿಸಿದರು. ಅಲ್ಲಿಗೆ ಭಕ್ತಿಯ ಭಾವವಿದ್ದವರಲ್ಲಿ ವಿಕೃತಿಯ ಭಾವ ಆವೀರ್ಭವಿಸಿತು. ಅಷ್ಟರಲ್ಲಿ ಯುವತಿಯ ಮೊಬೈಲ್ ಡಿ.ಜೆ. ಪದ್ಯಗಳ ಹುಡುಕಾಟದಲ್ಲಿ ತೊಡಗಿತು. ಒಂದಷ್ಟು ಪದ್ಯಗಳ ಶೇಖರಣೆಯಾದ ಮೇಲೆ ಆ ಯುವತಿ ಬಸ್ಸಿನಲ್ಲಿದ್ದ ಮ್ಯೂಸಿಕ್ ಪ್ಲೇಯರ್ನಲ್ಲಿದ್ದಂದ ಬ್ಲ್ಯೂ ಟೂತ್ಗೆ ತನ್ನ ಮೊಬೈಲ್ ಕನೆಕ್ಷನ್ ಮಾಡಿ ಹಾಡುಗಳನ್ನು ಕೇಳಿಸತೊಡಗಿದಳು. ಅಲ್ಲಿವರೆಗೆ ಇದ್ದಂಥ ಬಸ್ಸಿನೊಳಗಿನ ವಾತಾವರಣ ನಿಧಾನವಾಗಿ ಬದಲಾಗತೊಡಗಿತು. ಪದ್ಯಗಳ ಕರ್ಣ ಕಠೋರವಾದಂಥ ಶಬ್ದವು ತಾರಕಕ್ಕೇರತೊಡಗಿತು. ಅದಕ್ಕೆ ಸಾಥ್ ನೀಡುವಂತಿದ್ದ ಚಾಲಕನ ಮನಸ್ಥಿತಿ ಕೂಡ ಬಹಳ ಜೋಷ್ ನಲ್ಲಿತ್ತು. ಅಷ್ಟರಲ್ಲಿ ಡಿ.ಜೆ. ಪಂದ್ಯಗಳಿಗೆ ಹೆಜ್ಜೆ ಹಾಕಲು ಪ್ರಾರಂಭ ಮಾಡಿದ ಯುವತಿಯರೊಡನೆ ಬಸ್ಸಲ್ಲಿದ್ದಂಥ ಇತರ ಮಹಿಳೆಯರು ಕೂಡ ಜತೆಯಾಗತೊಡಗಿದರು. ಒಂದರ ನಂತರ ಒಂದರಂತೆ ಈ ಆರ್ಭಟದ ಪದ್ಯಗಳು ಮುಂದುವರೆದಾಗ ನನಗೆ ಈ ಬಸ್ಸಲ್ಲಿ ಯಾಕಪ್ಪ ಬಂದೆ ಎಂಬ ಭಾವ ಬಲಿಯತೊಡಗಿತು. ಇದರ ನಡುವೆ ಮೊಬೈಲಿನ ಪದ್ಯಗಳ ಬದಲಾವಣೆಗೆ ಅಥವಾ ಹೊಸ ಪದ್ಯ ಹುಡುಕಲು ಚಾಲಕ ಬಸ್ಸನ್ನು ಚಲಾಯಿಸುತ್ತಿರುವಾಗಲೇ ಪ್ರಯತ್ನಿಸುತ್ತಿದ್ದುದರಿಂದ ಯಾವುದೇ ಕ್ಷಣದಲ್ಲಾದರು ಅಪಘಾತವಾದೀತೆಂಬುದೂ ಸತ್ಯವೆ. ಅದಕ್ಕನುಗುಣವಾಗಿ ಬಸ್ಸು ಕೂಡ ನೂರರ ಆಸುಪಾಸಿನಲ್ಲಿ ಓಡುತ್ತಿರುವಾಗ ನನಗೆ ಅಪಾಯದ ಭೀತಿಯೂ ಆವರಿಸತೊಡಗಿತು. ಬಹುಷ ಇದು ಧರ್ಮಸ್ಥಳಕ್ಕೆ ಹೋಗುವಲ್ಲಿವರೆಗೂ ಮುಂದುವರಿದರೆ ಪ್ರಾಯದವರ, ಅನಾರೋಗ್ಯದಲ್ಲಿರುವವರ, ಮಕ್ಕಳ ಗತಿ ಏನು ಎಂಬುದೂ ಪ್ರಶ್ನೆಯಾಗಿತ್ತು. ವಿಪರ್ಯಾಸವೆಂದರೆ ಪರಸ್ಪರ ಗುರುತು ಪರಿಚಯವಿಲ್ಲದೆಯೂ ಮಹಿಳೆಯರು ಈ ಕುಣಿತದಲ್ಲಿ ಬಸ್ಸು ಚಲಿಸುತ್ತಿರುವಾಗಲೇ ಪಾಲ್ಗೊಂಡಿದ್ದು.
Advertisement:

ಸಾಧಾರಣ ಈ ಚಿತ್ರಣ ಸುಮಾರು ಒಂದು ಗಂಟೆಯಷ್ಟು ಕಾಲ ಮುಂದುವರಿದಾಗ ಹಿಂದಿನ ಸೀಟಲ್ಲಿ ಯಾಕೋ ಅಸಹಜವಾದಂಥ ಶಬ್ದಗಳು ಕೇಳಿಸತೊಡಗಿದವು. ನಾನಾದರೊ ಅದ್ಯಾವುದನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ಅವರವರೊಳಗೇ ಏನಾದರು ಇರಬಹುದೆಂದು ಸುಮ್ಮನಿದ್ದರೆ ಕೇಳುತ್ತಿದ್ದ ಶಬ್ದಗಳು ಜೋರಾಗತೊಡಗಿ ಜಗಳ ಪ್ರಾರಂಭವಾಗಿತ್ತು. ಹಿಂತಿರುಗಿ ನೋಡುವಾಗ ಪದ್ಯಗಳ ಜತೆಗೆ, ಕುಣಿತದ ಜತೆಗೆ, ಜಗಳವೂ ತಾರಕಕ್ಕೇರಿ ಪರಸ್ಪರ ಕೈ ಕೈ ಮಿಲಾಯಿಸುವಲ್ಲಿ ಮುಂದುವರೆಯಿತು. ಅಷ್ಟರಲ್ಲಿ ಚಾಲಕನಿಗೂ ಈ ವಿಚಾರ ಗೊತ್ತಾಗಿ ಒಂದಷ್ಟು ಹೊತ್ತು ಅದೇ ವೇಗದಲ್ಲಿ ಬಸ್ಸನ್ನು ಚಲಾಯಿಸುತ್ತಿದ್ದ. ನಾನಾದರೊ ಈ ಜಗಳ, ಡಿ.ಜೆ.ಯ ಕರ್ಕಶ ಶಬ್ದಗಳಿಂದ ಒಂದು ಸಲ ಮುಕ್ತಿ ಸಿಕ್ಕರೆ ಸಾಕೆಂದುಕೊಂಡೆ. ಈ ನಡುವೆ ಗಲಾಟೆಯ ಕಾರಣವಾದರು ಏನೆಂದು ನನ್ನ ಪಕ್ಕದಲ್ಲಿರುವವರನ್ನು ವಿಚಾರಿಸಿದರೆ ಅದು ಅವರಿಗೂ ತಿಳಿಯದ ವಿಚಾರವಾಗಿತ್ತು. ಅಂತು ಆ ಹೊತ್ತಿಗೆ ಬಸ್ಸು ಕುಡುಕರ ಸಂತೆಯಂತೆ ನನಗನ್ನಿಸಿದ್ದು ಮಾತ್ರ ಸತ್ಯ. ಮಾತ್ರವಲ್ಲ ಇದರಿಂದ ಹೊರ ಬರುವ ದಾರಿಯೂ ನನಗೆ ಕಾಣಲಿಲ್ಲ. ಅಷ್ಟರಲ್ಲಿ ಚಾಲಕ ಬಸ್ಸನ್ನು ಬದಿಗೆ ನಿಲ್ಲಿಸಿ ಗಲಾಟೆಯ ಕಾರಣವನ್ನು ತಿಳಿದು ಕೊಳ್ಳಲು ಹೋದರೆ ಮಹಿಳೆಯರ ಕುಣಿತದಲ್ಲಿ ಯಾವುದೊ ಪ್ರಯಾಣಿಕನು ಅಸಹಜ ನಡವಳಿಕೆ ಪ್ರದರ್ಶಿಸಿದ ಎಂಬ ಕಾರಣದಿಂದ ಗಲಾಟೆ ಪ್ರಾರಂಭವಾಗಿ ಎರಡು ಪಂಗಡಗಳೊಳಗಿನ ಜಗಳಕ್ಕೆ ತಿರುಗಿ ಅದರ ಪರಿಹಾರ ಹೇಗೆಂದೇ ತಿಳಿಯದಂತಾಗಿ ಕೊನೆಗೂ ಬಸ್ ಚಾಲಕ ಬಸ್ಸನ್ನು ಪೋಲಿಸ್ ಸ್ಟೇಶನಿಗೆ ಕೊಂಡು ಹೋಗುತ್ತೇನೆ ಎಂದಾಗ ಒಂದಷ್ಟು ಹೊತ್ತು ಗಲಾಟೆ ಕಡಿಮೆಯಾಗತೊಡಗಿತು. ಆದರೆ ಡಿ.ಜೆ. ಚಾಲು ಇತ್ತು. ಮತ್ತೊಮ್ಮೆ ಬಸ್ ಹೊರಟಿತು ಆದರೆ ಯಥಾ ಪ್ರಕಾರ ಕುಣಿತ ಮುಂದುವರಿದಿತ್ತು. ಅಷ್ಟರಲ್ಲಿ ನಾನು ಪೂರ್ತಿ ತಾಳಮೆಯನ್ನು ಕಳಕೊಂಡಿದ್ದೆ. ಇದಕ್ಕೇನಾದರು ಉಪಾಯ ಮಾಡಬೇಕೆಂದು ಯೋಚಿಸತೊಡಗಿದಾಗ ಒಂದು ಉಪಾಯ ಹೊಳೆಯಿತು.
ಕೊನೆಯ ಪ್ರಯತ್ನವೆಂಬಂತೆ ಚಾಲಕ ಬಸ್ಸನ್ನು ಚಲಾಯಿಸುತ್ತಿದ್ದಾಗಲೆ ನನ್ನ ಸೀಟಿನಿಂದ ಎದ್ದು ಬಸ್ಸಿನ ಮುಂಭಾಗದಲ್ಲಿದ್ದಂಥ ಬಸ್ಸಿನ ನಂಬರಿನ ಫೋಟೊವೊಂದನ್ನು ನನ್ನ ಮೊಬೈಲಲ್ಲಿ ಕ್ಲಿಕ್ಕಿಸಿ ವಾಪಸು ನನ್ನ ಸೀಟಲ್ಲಿ ಕುಳಿತು ಮೊಬೈಲಲ್ಲಿ ಏನೊ ಬರೆದಂತೆ ನಟಿಸಿದೆ. ಮತ್ತು ಇದನ್ನು ಚಾಲಕ ಗಮನಿಸಬೇಕೆಂದು ಆತನನ್ನೆ ನೋಡುತ್ತಿದ್ದೆ. ಅಲ್ಲಿಗೆ ನನ್ನ ಯೋಜನೆ ಫಲಿಸಿತ್ತು. ಆ ಕ್ಷಣವೆ ಚಾಲಕ ಬಸ್ಸಿನೊಳಗೆ ಆರ್ಭಟಿಸುತ್ತಿದ್ದ ಪದ್ಯಗಳನ್ನು ಹಟಾತ್ತನೆ ನಿಲ್ಲಿಸಿದ. ಹಾಗೂ ತನ್ನ ಹಿಂದಿನ ಸೀಟಲ್ಲಿ ಕುಳಿತಿದ್ದ ಯುವತಿಯನ್ನು ಉದ್ದೇಶಿಸಿ ‘ ಮೇಡಂ ಇನ್ನು ಪದ್ಯಗಳು ಸಾಕು. ಸುಮ್ಮನೆ ಗಲಾಟೆಗೆ ಕಾರಣವಾಗುತ್ತದೆ.’ ಎಂದು ಹೇಳಿ ಅಲ್ಲಿವರೆಗಿನ ಅಸಹಜ ಸ್ಥಿತಿಗೆ ಅಂತ್ಯ ಹಾಡಿದ. ನಂತರದ ಪ್ರಯಾಣ ಬಹಳಷ್ಟು ಹಿತವಾಗಿತ್ತು. ಹಾಗೆಯೇ ಮುಂದೆ ಸ್ವಲ್ಪ ದೂರ ಹೋದೊಡನೆ ಒಂದು ಹೋಟೆಲಿನಲ್ಲಿ ಚಾಯ ಕುಡಿಯಲು ಚಾಲಕ ನಿಲ್ಲಿಸಿದರೆ ನನಗೆ ಅಲ್ಲಿ ಇನ್ನೊಂದು ಅಚ್ಚರಿ ಕಂಡಿತ್ತು. ಅದೇನೆಂದರೆ ಬಸ್ಸಿನೊಳಗೆ ಯಾವ ಎರಡು ಪಂಗಡಗಳು ಜಗಳವಾಡುತ್ತಿದ್ದವೋ ಅವೆ ಎರಡು ಪಂಗಡಗಳು ಏನೂ ಆಗಲಿಲ್ಲವೊ ಎಂಬಂತೆ ಜತೆ ಜತೆಯಾಗಿಯೇ ಚಾಯ ಕುಡಿದು ಬಿಸ್ಕತ್ ತಿಂದು ಮತ್ತೆ ಅದೇ ಬಸ್ಸಲ್ಲಿ ಬೆಳಗ್ಗಿನ ಜಾವದವರೆಗೆ ನಿದ್ದೆ ಮಾಡಿ ಧರ್ಮಸ್ಥಳದಲ್ಲಿಳಿದು ಜನಸಂದಣಿಯಲ್ಲಿ ಮಾಯವಾಗಿ ಹೋದಾಗ ಇಂತಹದ್ದೊಂದು ಪ್ರಪಂಚವೂ ಇದೆ ಎಂದು ಅರಿವಾಗಿತ್ತು. ಇದರ ನಡುವೆ ನನ್ನ ಯೋಜನೆ ಸಫಲವಾಗಿದ್ದಕ್ಕೂ ನನಗೆ ಖುಷಿಯಾಗಿತ್ತು. ನನ್ನೆಣಿಕೆಯೂ ಅದೇ ಇದ್ದದ್ದು. ನಾನು ಯಾರೆಂದು ಚಾಲಕನಿಗೆ ಗೊತ್ತಿಲ್ಲದ್ದರಿಂದ ನನ್ನ ಕರ್ತೃತ್ವ ಚಾಲಕನಿಗೆ ನಾನು ಪತ್ರಕರ್ತನೆಂದು ಅನ್ನಿಸಬೇಕು. ಇಲ್ಲಿನ ಘಟನೆಗಳನ್ನು ನಾನು ವರದಿ ಮಾಡಬಹುದೆಂದು ಆತ ಹೆದರಬೇಕು. ಇದರಿಂದ ಆತ ಈ ಅಪಸವ್ಯಗಳನ್ನು ನಿಲ್ಲಿಸಬೇಕು ಎಂದು. ನನ್ನ ಪುಣ್ಯ ಅದು ಸಾಧ್ಯವಾಯಿತು. ಇದು ಎಲ್ಲ ಕಾಲದಲ್ಲೂ ಎಲ್ಲ ಕಡೆಯಲ್ಲೂ ಕೆಲಸಕ್ಕೆ ಬಾರದು. ಆದರೆ ಆ ಕ್ಷಣದಲ್ಲಿ ನನಗೆ ಇದು ಬ್ರಹ್ಮಾಸ್ತ್ರವಾದದ್ದು ಮಾತ್ರ ಸುಳ್ಳಲ್ಲ.
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ















