ಅದೊಂದು ಪ್ರತಿಷ್ಠಿತ ಆಸ್ಪತ್ರೆ. ಎಲ್ಲ ಆಸ್ಪತ್ರೆಗಳಲ್ಲಿರುವಂತೆ ಅಲ್ಲಿಯೂ ಸಾಮಾನ್ಯ ರೋಗಿಗಳಿಗೆ ಬೇಕಾದ ಜನರಲ್ ವಾರ್ಡ್ ಕೂಡ ಇತ್ತು. ನೂರಕ್ಕೂ ಮಿಕ್ಕಿದ ಹಾಸಿಗೆ ಇರುವ ಜನರಲ್ ವಾರ್ಡಲ್ಲಿ ಸಹಜವಾಗಿಯೇ ಜನ ಜಂಗುಳಿ ಇರುತ್ತದೆ. ಸಾಧಾರಣವಾಗಿ ಪ್ರತಿಯೊಂದು ರೋಗಿಯ ಹಾಸಿಗೆಯ ಪಕ್ಕದಲ್ಲೆ ರೋಗಿಯೊಡನೆ ಒಬ್ಬರಿಗೆ ಇರುವಂಥ ವ್ಯವಸ್ಥೆಯೂ ಇರುತ್ತದೆ. ವ್ಯವಸ್ಥೆ ಎಂದರೆ ಹೆಚ್ಚುವರಿ ಹಾಸಿಗೆಯಾಗಲಿ ಮಂಚವಾಗಲಿ ಇರುವುದಿಲ್ಲ. ಬದಲಾಗಿ ರೋಗಿಯ ಮಂಚದ ಪಕ್ಕದಲ್ಲಿ ಅಂದರೆ ಭಾಗಷಃ ಮಂಚದ ಅಡಿಯಲ್ಲಿ ಮಲಗಿಕೊಳ್ಳಬಹುದು. ಆದರೆ ರೋಗಿಯ ಅನಾರೋಗ್ಯದ ಮುಂದೆ ಇದೆಲ್ಲ ಗೌಣವೆ ಮಾತ್ರವಲ್ಲ ಸಹನೀಯ ಕೂಡ. ಅಂತೆಯೇ ರೋಗಿಗಳನ್ನು ಸಂದರ್ಶಿಸಲು ಬರುವವರು, ಹಿತೈಷಿಗಳು ಎಂದು ಏನಿಲ್ಲವೆಂದರೂ ಒಂದೊಂದು ಮಂಚದ ಬಳಿ ಎರಡು ಮೂರು ಜನರು ರೋಗಿಯ ಹೊರತಾಗಿ ಇರುತ್ತಾರೆ. ಅಂದರೆ ಒಂದು ವಾರ್ಡಲ್ಲಿ ಇಪ್ಪತ್ತೈದು ಮಂಚಗಳಿದ್ದರೆ ಅಲ್ಲಿ ಕನಿಷ್ಟ ಎಪ್ಫತ್ತೈದು ಜನರಾದರೂ ರೋಗಿಗಳ ಹೊರತಾಗಿರುತ್ತಾರೆ. ಇದೆಲ್ಲವೂ ಸಹಜವೆ ಇದರಲ್ಲೇನು ವಿಶೇಷವಿದೆ ಎಂದು ನಿಮಗನಿಸಬಹುದು. ಆದರೆ ನಾನು ಒಂದೆರಡು ದಿವಸ ಈ ವಾರ್ಡಿನಲ್ಲಿರಬೇಕಾದ ಪ್ರಸಂಗವೊಂದು ಬಂದಿತ್ತು. ಆಗ ನಡೆದ ಘಟನೆ ನನಗೆ ಯಾವಾಗ ಆಸ್ಪತ್ರೆಗೆ ಹೋದಾಗಲೂ ನೆನಪಾಗುತ್ತದೆ. ಇವತ್ತು ಕಾರಣಾಂತರದಿಂದ ಆಸ್ಪತ್ರೆಗೆ ನಮ್ಮ ಹಿತೈಷಿಯೊಬ್ಬರನ್ನು ಕರಕೊಂಡು ಬರಲು ಹೋಗಿರುವಾಗ ಅದರ ನೆನಪಾಯಿತು ಹಾಗೂ ಅದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು..
ಅಂದು ನಾನು ರೋಗಿಯೊಡನೆ ಇರುವಾಗ ನಾನೊಬ್ಬನೇ ಇದ್ದೆ. ಆದರೆ ಇತರ ರೋಗಿಗಳೊಡನೆ ಮೂರು ನಾಲ್ಕು ಜನರಷ್ಟು ಇರುತ್ತಿದ್ದರು. ಆದರೆ ಒಂದು ಮಂಚದಲ್ಲಿ ಮಾತ್ರ ಮಕ್ಕಳು, ಹೆಂಗಸರು ಸೇರಿ ಹತ್ತಾರು ಜನರು ಕುರ್ಚಿ, ಹಾಸಿಗೆ, ನೆಲದ ಮೇಲೆ ಅಸ್ತವ್ಯಸ್ತವಾಗಿ ನಾವು ಮನೆಯೊಳಗಿನ ಬೆಡ್ ರೂಮಲ್ಲಿರುವಂತೆ ಗುಂಪು ಗುಂಪಾಗಿ ಇರುವುದರ ಜತೆ ತಮಾಷೆ ಮಾತಾಡಿಕೊಂಡು ಆಸ್ಪತ್ರೆಯೊಳಗೆ ಕೂಡ ಈ ರೀತಿಯಲ್ಲಿರಬಹುದು ಎಂದು ತೋರಿಸಿಕೊಟ್ಟಿದ್ದರು. ಇದನ್ನೆಲ್ಲ ನಾನು ಪಕ್ಕದಿಂದ ನೋಡುತ್ತಲಿದ್ದೆ. ಆಗ ನನಗೆ ಸಂಶಯವೊಂದು ಮೂಡಿತು. ಇಲ್ಲಿ ರೋಗಿ ಯಾರು.. ರೋಗಿಯನ್ನು ನೋಡಲೆಂದು ಬಂದವರು ಯಾರು.. ರೋಗಿಯೊಡನೆ ಇರುವವರು ಯಾರು.. ಒಂದೂ ಅರ್ಥವಾಗಿಲ್ಲ. ಇರಲಿ ನನಗ್ಯಾಕೆ ಅದೆಲ್ಲವೆಂದು ಸುಮ್ಮನಿದ್ದರೂ ಅವರ ಗಲಾಟೆ, ಮಾತು, ನಗು, ಮಕ್ಕಳ ಮೊಬೈಲಿನಿಂದ ಬರುವ ಕರ್ಕಶ ಧ್ವನಿ ಇದೆಲ್ಲ ಒಂದು ಹಂತದಲ್ಲಿ ಕಿರಿ ಕಿರಿ ಮಾಡುತ್ತಿದ್ದುದು ಅಂತು ಸುಳ್ಳಲ್ಲ. ಆದರೂ ನನಗೆ ರೋಗಿ ಯಾರೆಂದು ಇದ್ದ ಕುತೂಹಲ ಮಾತ್ರ ಕೊನೆಯಾಗಲಿಲ್ಲ.

ಅಷ್ಟರಲ್ಲಿ ಮುಖ್ಯ ವೈದ್ಯಾಧಿಕಾರಿ ರೌಂಡ್ಸಿಗೆ ಬರುವ ವೇಳೆಯಾಗಿತ್ತು. ನಾನು ಕೂಡ ಮಧ್ಯೆ ಮಧ್ಯೆ ವೈದ್ಯರ ಬರುವಿಕೆಯ ನಿರೀಕ್ಷೆಯಿಂದ ಹೊರಗೆ ನೋಡುತ್ತಲೆ ಇದ್ದೆ. ಅಂತೆಯೆ ನನ್ನೆದರಿನ ಮಂಚದಲ್ಲಿರುವ ಹತ್ತಾರು ಮಂದಿಗಳ ಕುಟುಂಬವೂ ವೈದ್ಯರ ನಿರೀಕ್ಷೆಯಲ್ಲಿ ಇಣುಕುತ್ತಲೇ ಇದ್ದರು. ಒಂದರ್ಧ ಗಂಟೆಯಾದ ಮೇಲೆ ವೈದ್ಯರು ಬರುವ ಲಕ್ಷಣ ಗೋಚರಿಸತೊಡಗಿತು. ಅದು ಹೇಗೆ ಲಕ್ಷಣ ಮೊದಲು ಗೋಚರಿಸುವುದು ಎಂಬ ಕುತೂಹಲ ನಿಮಗಿರಬಹುದು. ಮಳೆ ಬರುವ ಮೊದಲು ಗಾಳಿ, ಗುಡುಗು, ಮಿಂಚುಗಳು ಬರುವಂತೆ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಹಾಗೆಯೇ ಎನ್ನಬಹುದು. ಅದು ಈ ರೀತಿ ಇರುತ್ತದೆ. ಆಸ್ಪತ್ರೆಯ ಸಿಬ್ಬಂಧಿ ಏಕಾಏಕಿ ನಿಶ್ಶಬ್ಧರಾಗುತ್ತಾರೆ. ಅದೇನೊ ಘಟಿಸುತ್ತದೆ ಎಂಬ ತರಾತುರಿಯಲ್ಲಿ ನರ್ಸ್ಗಳೆಲ್ಲ ಹಿಂದೆ ಮುಂದೆ ಗಡಿಬಿಡಿಯಿಂದ ತಿರುಗಲಾರಂಭಿಸುತ್ತಾರೆ. ಅದರ ಮಧ್ಯೆ ಯಾರೋ ಒಂದಷ್ಟು ಜನ ಡಾಕ್ಟ್ರು ಬಂದ್ರು ಡಾಕ್ಟ್ರು ಬಂದ್ರು ಎಂದು ಗಾಭರಿಯೋ ಎಂಬಂತೆ ವಿಧೇಯತೆಯತ್ತ ಹೊರಳುತ್ತಾರೆ. ಸ್ವಚ್ಛತೆಯ ಕಾಯಕದಲ್ಲಿ ತೊಡಗಿರುವವರು ಸ್ವಲ್ಪ ಬದಿಗೆ ಸರಿದು ನಿಲ್ಲುತ್ತಾರೆ.. ಇಂಥ ಲಕ್ಷಣಗಳು ಕಂಡಾಗ ತುಂಬಾ ಜನರಿದ್ದ ಮಂಚದ ಕಡೆಯಿಂದ ಒಬ್ಬೊಬ್ಬರೆ ಹೊರಗೆ ಬರಲಾರಂಭಿಸುತ್ತಾರೆ. ಆಗ ನನ್ನ ಕುತೂಹಲಕ್ಕೆ ಉತ್ತರ ಸಿಗುವ ಸಮಯ ಬಂತೆಂದು ಅಂದಕೊಂಡೆ. ಅಂದರೆ ಕೊನೆಯಲ್ಲಿ ಯಾರು ಹಾಸಿಗೆಯಲ್ಲಿರುತ್ತಾನೊ ಆತನೇ ರೋಗಿ ಇರಬಹುದೆಂದು ಅಂದುಕೊಂಡೆ. ಹಾಗೆಯೇ ಆಯಿತೇ.. ಇಲ್ಲ. ಅಂದರೆ ಅಲ್ಲಿವರೆಗೆ ಹಾಸಿಗೆಯಲ್ಲಿ ತೆವಳಿಕೊಂಡಿದ್ದಂಥ ಯಾರೂ ರೋಗಿಗಳಲ್ಲ. ಪಕ್ಕದಲ್ಲಿ ಕುರ್ಚಿಯ ಮೇಲೆ ಮೊಬೈಲ್ ನೋಡಿಕೊಂಡಿದ್ದಂಥ ನಡುವಯಸ್ಸಿನ ಮಹಿಳೆಯೊಬ್ಬರು ಉಳಿದವರ ಚಡಪಡಿಕೆಯನ್ನು ಕಂಡು ಕೂಡಲೆ ಮೊಬೈಲನ್ನು ಹತ್ತಿರವಿದ್ದವರಲ್ಲಿ ಕೊಟ್ಟು ಬೇಗ ಬೇಗನೆ ಹೋಗಿ ಹಾಸಿಗೆಯಲ್ಲಿ ಮಲಗಿ ಕೊಂಡರು. ಅಲ್ಲಿಗೆ ನನಗೆ ಇದ್ದಂಥ ಕುತೂಹಲ ಹೊರಟು ಹೋಗುವುದರ ಜತೆಗೆ ಹೀಗೂ ಒಂದು ವಿಚಾರವಿದೆ ಎಂದು ಅರಗಿಸಿಕೊಳ್ಳಲು ಒಂದು ಕ್ಷಣವೇ ಬೇಕಾಯಿತು. ಮಾತ್ರವಲ್ಲ ಇದೊಂದು ತಮಾಷೆಯಾಗಿಯೂ ಕಂಡಿತು… ಅಂದರೆ ಆಸ್ಪತ್ರೆಯಲ್ಲಾದರು ಕೂಡ ಮಂಚದಲ್ಲಿ ಮಲಗಿದ್ದವನೇ ರೋಗಿಯಾಗಬೇಕಿಲ್ಲ. ಅಥವಾ ರೋಗಿಯಾದವನು ಮಂಚದಲ್ಲಿ ಮಲಗಬೇಕೆಂದಿಲ್ಲ ಎಂಬ ಸತ್ಯದ ಅನಾವರಣವಾಗಿತ್ತು… ಈ ಜಗತ್ತೇ ಒಂದು ವಿಶ್ವ ವಿದ್ಯಾಲಯ ಎಂದು ಇದಕ್ಕೇ ಹೇಳುವುದು..















