ಮಂಗಳಾರತಿ
**********
“ಮಂಗಳಾರತಿ ಆಗುತ್ತಿದೆ ಬಾರೊ..” ಎಂದು ಮಂಗಳಮ್ಮ ಮಗನಿಗೆ ಕರೆದರು. ಜಾಗಟೆ ಸದ್ದು, ಶಂಖ ನಾದ ಮೊಳಗುತ್ತಿರುವಾಗ ರಮೇಶನಿಗೆ ತಾಯಿಯ ಕರೆ ಅಸ್ಪಷ್ಟವಾಗಿ ಕೇಳಿಸಿತ್ತು. ರಮೇಶನಿಗೆ ದೇವರಲ್ಲಿ ನಂಬಿಕೆ ಇಲ್ಲದ ಕಾರಣ ಇದೆಲ್ಲ ಮೂಢನಂಬಿಕೆ ಎಂದು ತೀರ್ಮಾನಿಸಿ ಅನ್ಯಮನಸ್ಕನಾಗಿರುತ್ತಾನೆ ಎಂದು ಎಲ್ಲರೂ ಭಾವಿಸಿದ್ದರೆ, ರಮೇಶನ ಮನದೊಳಗಿನ ತುಮುಲ ಇತರರಿಗೆ ಅರ್ಥವಾಗುತ್ತಿರಲಿಲ್ಲ. ಅದ್ಯಾಕೊ ಸಣ್ಣವನಾಗಿದ್ದ ದಿನಗಳಿಂದಲೂ ರಮೇಶನಿಗೆ ಈ ಶಂಖ, ಗಂಟೆ, ಜಾಗಟೆಗಳೆಂದರೆ ಅದ್ಯಾವುದೊ ಭೀತಿ ಮನಸ್ಸಿನೊಳಗೆ ಉಂಟಾಗುತ್ತಿತ್ತು. ಭಕ್ತಿ ಭಾವ ಬರಬೇಕಾಗಿದ್ದಲ್ಲಿ ಭೀತಿ ಪ್ರವೇಶ ಯಾವಾಗ ಆಯಿತೊ ಗೊತ್ತಿಲ್ಲ. ಮನೆಯಲ್ಲಿ ಮಾತ್ರವಲ್ಲ ದೇವಸ್ಥಾನಗಳ ಗಂಟೆ ಜಾಗಟೆಗಳೂ ರಮೇಶನ ಮನಸ್ಥಿತಿಯನ್ನು ಭೀತಗೊಳಿಸುತ್ತಿದ್ದವು. ಅದಕ್ಕೆಂದೇ ರಮೇಶ ದೇವಸ್ಥಾನಗಳಿಗೂ ಹೋಗುತ್ತಿರಲಿಲ್ಲ. ಹಾಗೆಂದು ಎಲ್ಲ ಸದ್ದು ಗದ್ದಲಗಳೂ ಇದೇ ಪರಿಣಾಮವನ್ನು ಉಂಟು ಮಾಡುತ್ತಿರಲಿಲ್ಲ. ಮೋಟಾರುಗಳ ಸದ್ದಾಗಲಿ, ಕಾರ್ಖಾನೆಗಳ ಸದ್ದಾಗಲಿ, ಗುಡುಗಿನ ಭೀಕರತೆಯಾಗಲಿ, ಬಹಳ ಜನ ಸೇರಿದಲ್ಲಿ ಉಂಟಾಗುವ ಗದ್ದಲಗಳಾಗಲಿ ರಮೇಶನಿಗೆ ಅಹಿತವಾಗುತ್ತಿರಲಿಲ್ಲ. ಅಂತೆಯೇ ಇಂಥ ದೌರ್ಬಲ್ಯವನ್ನು ಇತರರೊಡನೆ ತೋರ್ಪಡಿಸಿಕೊಳ್ಳಲು ಮುಜುಗರವಾಗುತ್ತಿದ್ದುದರಿಂದ ತನಗೆ ಈ ಕ್ರಿಯೆಗಳಲ್ಲಿ ಆಸಕ್ತಿ ಇಲ್ಲವೆಂದು ಹೇಳಿಕೊಳ್ಳುತ್ತಿದ್ದ. ಆದರೆ ಇದರ ಅರಿವಿರದ ಮಂಗಳಮ್ಮ ಮಗನ ಮನೋಧರ್ಮಕ್ಕೆ ಸಹಜವಾಗಿ ನೊಂದಿದ್ದಳು. ಮಂಗಳಮ್ಮ ಇನ್ನೊಮ್ಮೆ ಮಗನನ್ನು ಕೂಗಿದಾಗ ತಾಯಿಗೆ ಬೇಸರವಾಗಬಾರದೆಂದು ಮನಸ್ಸಿಲ್ಲದ ಮನಸ್ಸಿನಿಂದ ರಮೇಶ ದೇವರ ಕೋಣೆಗೆ ನಡೆದ. ಅದೇ ಮನಸ್ಸಿನಿಂದ ದೇವರಿಗೆ ಕೈಯನ್ನೂ ಮುಗಿದ, ಆರತಿಯ ಮೇಲೆ ಕೈ ಸುತ್ತು ಬರಿಸಿ ಹಣೆಗೂ ಹಚ್ಚಿಕೊಂಡ. ದೂರದಿಂದ ನೋಡುತ್ತಿದ್ದ ಮಂಗಳಮ್ಮನಿಗೆ ಇದರಿಂದ ಖುಷಿಯಾಗುವ ಬದಲು ಬೇಸರವೇ ಆಗಿತ್ತು. ಮಗ ಯಾಕೆ ನಾಸ್ತಿಕವಾದಿಯಾದ ಎಂಬುದೇ ಪ್ರಶ್ನೆಯಾಗಿತ್ತು ಮಂಗಳಮ್ಮನಿಗೆ. ಸನಾತನ ಧರ್ಮದ ಯಾವತ್ತೂ ಶಾಸ್ತ್ರ ಕಟ್ಟಳೆಗಳನ್ನು ಚಾಚೂ ತಪ್ಪದಂತೆ ಆಚರಿಸಿಕೊಂಡು ಬಂದಂಥ ಸಾಂಪ್ರದಾಯಿಕ ಕುಟುಂಬದಲ್ಲಿ ರಮೇಶನಂಥ ಮಗ ಹುಟ್ಟಿದುದಕ್ಕೆ ಉತ್ತರ ಸಿಗುವಲ್ಲಿ ಮಂಗಳಮ್ಮ ಸೋತಿದ್ದಳು.
ಮಂಗಳಮ್ಮನಿಗೆ ಸೋಮನಾಥನೊಂದಿಗೆ ಮದುವೆಯಾಗಿ ಹತ್ತು ವರ್ಷಗಳಾದರೂ ಮಕ್ಕಳಾಗಲಿಲ್ಲವೆಂಬ ಕೊರಗಿತ್ತು. ಎಲ್ಲ ಸಾಧ್ಯತೆಗಳೂ ಮುಗಿದು ನಿರಾಸೆ ಆವರಿಸಿದಾಗ ದಂಪತಿಗಳು ಶರಣಾದದ್ದು ಜ್ಯೋತಿಷ್ಯಕ್ಕೆ. ಅಂತೆಯೇ ಊರಲ್ಲಿ ಪ್ರಸಿದ್ಧ ಜ್ಯೋತಿಷಿಯಾದ ನಾಗಪ್ರಸಾದ ಭಟ್ಟರಲ್ಲಿ ತಮ್ಮ ಭವಿಷ್ಯದ ಬಗ್ಗೆ ವಿಚಾರಿಸುವುದೆಂದು ನಿರ್ಧರಿಸಿ ಒಂದು ದಿನ ಮಂಗಳಮ್ಮ ದಂಪತಿಗಳು ಭಟ್ಟರ ಮನೆಗೆ ಜಾತಕಗಳನ್ನು ಹಿಡಿದುಕೊಂಡು ಹೋದರು. ಭಟ್ಟರು ಜಾತಕಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ‘ಈ ಜಾತಕದ ಪ್ರಕಾರ ನಿಮಗೆ ಮಕ್ಕಳಾಗುವ ಯೋಗವಿದೆ. ಆದರೆ ಕಾಲ ನಿರ್ಣಯ ಮಾತ್ರ ನನ್ನರಿವಿಗೆ ಎಟುಕದು’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅಭಿಪ್ರಾಯ ತಿಳಿಸಿದಾಗ ಒಂದಷ್ಟು ಸಮಾಧಾನ ಒಂದಷ್ಟು ಅಸಮಾಧಾನದ ಜತೆಗೆ ದಂಪತಿಗಳು ಮನೆಗೆ ಮರಳಿದರು. ಕಾಯುವುದೊಂದೆ ಉಳಿದ ದಾರಿಯಾದಾಗ ಈ ಕಾಯುವಿಕೆಯೂ ಅಸಹ್ಯವಾಗತೊಡಗಿತು ಮಂಗಳಮ್ಮನಿಗೆ. ಮತ್ತೂ ಒಂದೆರಡು ವರ್ಷಗಳು ಕಳೆದಾಗ ಸೋಮನಾಥನಿಗೆ ದೇವರ ಮೇಲಾಗಲಿ, ಜ್ಯೋತಿಷ್ಯದ ಮೇಲಾಗಲಿ ಜಿಗುಪ್ಸೆ ಉಂಟಾಗತೊಡಗಿತು. ಆದರೂ ಕರ್ತವ್ಯವೊ ಎಂಬಂತೆ ನಿತ್ಯ ಪೂಜೆಯನ್ನು ಮಾಡುತ್ತಿದ್ದರೂ ಕ್ರಮೇಣ ಅದಕ್ಕೂ ಮನಸ್ಸಿಲ್ಲದಂತಾದಾಗ ಸಂಪೂರ್ಣ ನಾಸ್ತಿಕತೆಯತ್ತ ವಾಲಿದ್ದರು ದಂಪತಿಗಳು. ಹೀಗೆ ಬದುಕು ಶುಷ್ಕವಾಗತೊಡಗಿದಾಗ ಮಂಗಳಮ್ಮ ಗರ್ಭಿಣಿಯಾದಳು. ಇದರಿಂದ ಖುಷಿಯಾದ ದಂಪತಿಗಳು ಮತ್ತೊಮ್ಮೆ ತಮ್ಮ ಪೂರ್ವ ಸ್ವಭಾವಕ್ಕೆ ಮರಳಿದರು. ಬರಬರುತ್ತ ಬರಬರುತ್ತ ಜೀವನದಲ್ಲಿ ಹೊಸತನ ಮೂಡತೊಡಗಿತು. ಅಂತೆಯೇ ಮಗನ ಜನನವಾದಾಗ ಜ್ಯೋತಿಷ್ಯದ ಮೇಲೆ, ದೇವರ ಮೇಲೆ, ಬದುಕಿನ ಮೇಲೆ ನಂಬಿಕೆಯ ಜತೆಗೆ ಪೂರ್ಣ ವಿಶ್ವಾಸವೂ ಮೂಡಿತ್ತು.
ಇತ್ತ ಮಗುವಿಗೆ ಬೆಳೆದಂತೆ ದೈವ, ದೇವರ ಬಗ್ಗೆ ಭಕ್ತಿ ಭಾವ ಬೆಳೆಯಬೇಕಾದ ಕಡೆ ದೇವರ ಬಗ್ಗೆ ಸಣ್ಣ ನಿರ್ಲಕ್ಷ್ಯ ಆವರಿಸತೊಡಗಿತು. ಸಣ್ಣ ಮಗು ದೊಡ್ಡದಾದ ಮೇಲೆ ಸರಿಯಾಗಬಹುದು ಎಂದೆಣಿಸಿ ದಂಪತಿಗಳು ತಾಳ್ಮೆಯಿಂದಿದ್ದರೆ ಬರಬರುತ್ತ ದೇವರಿಗೆ ನಮಸ್ಕಾರ ಮಾಡುವುದೂ ಉಪಯೋಗವಿಲ್ಲವೆಂಬ ಮಗನ ಸಿದ್ಧಾಂತಕ್ಕೆ ದಂಪತಿಗಳು ಕಾರಣ ಹುಡುಕಲಾರಂಭಿಸಿದರು. ವೈದ್ಯರಲ್ಲಿ ಹೋದರೆ ‘ಇದು ವ್ಯಾಧಿ ಅಲ್ಲ. ಪ್ರತಿಯೊಬ್ಬರ ಮನಸ್ಥಿತಿ ಬೇರೆ ಬೇರೆಯಾಗಿರುತ್ತದೆ. ಎಲ್ಲರೂ ದೇವರನ್ನು ನಂಬಲೇ ಬೇಕೆಂದಿಲ್ಲ. ಕೆಲವರು ದೇವರನ್ನು ನಂಬದಿದ್ದರೂ ಒಳ್ಳೆಯ ಬದುಕನ್ನು ಬದುಕಬಲ್ಲರು’ ಎಂದು ಹೇಳಿದರೆ ವಿನಹ ರಮೇಶನ ಮನಸ್ಸನ್ನು ಅರಿತುಕೊಳ್ಳಲು ವಿಫಲರಾಗಿದ್ದರು. ಮಂಗಳಮ್ಮ ದಂಪತಿಗಳಿಗೆ ಸಮಾಧಾನವಾಗಿರಲಿಲ್ಲ. ಮತ್ತೊಮ್ಮೆ ಜ್ಯೋತಿಷ್ಯದ ಮೊರೆ ಹೋಗುವುದೇ ಸೂಕ್ತವೆಂದು ದಂಪತಿಗಳು ನಾಗಪ್ರಸಾದ ಭಟ್ಟರಲ್ಲಿ ಹೋದರು. ನಾಗಪ್ರಸಾದ ಭಟ್ಟರು ರಮೇಶನ ಜಾತಕದ ಜತೆ ಸೋಮನಾಥ, ಮಂಗಳಮ್ಮನ ಜಾತಕಗಳನ್ನೂ ಪರಿಶೀಲಿಸಿದರು. ಜ್ಯೋತಿಷ್ಯದ ವಿಚಾರವಾಗಿ ಬಹಳಷ್ಟು ಅಧ್ಯಯನ ಮಾಡಿದ ನಾಗಪ್ರಸಾದ ಭಟ್ಟರು “ನೋಡಿ ಮಂಗಳಮ್ಮ ನಿಮಗೆ ತಡವಾದರೂ ಪುತ್ರ ಪ್ರಾಪ್ತಿ ಯೋಗ ಉಂಟಾಗಿದೆ. ಖುಷಿ ಪಡಿ. ಅಂತೆಯೇ ಆ ಮಗು ನೀವೆಣಿಸಿದಂತೆ ಇರಬೇಕೆಂದೇನಿಲ್ಲ. ಸೂಕ್ಷ್ಮವಾಗಿ ನೋಡಿದಾಗ ಈ ಮಗುವಿಗೆ ಜನ್ಮಾಂತರದ ಸಂಬಂಧಗಳೂ ಕಾಣ ಸಿಗುತ್ತವೆ. ಅದಕ್ಕೆ ಇನ್ನಷ್ಟು ಅಧ್ಯಯನ ಬೇಕು. ನನ್ನ ತಿಳಿವಿನ ಮಟ್ಟದಲ್ಲಿ ಹೇಳುವುದಾದರೆ ಈ ಮಗು ಮುಂದೆ ಕೀರ್ತಿ ಅಪಕೀರ್ತಿ ಎರಡನ್ನೂ ಏಕಪ್ರಕಾರವಾಗಿ ಸಂಪಾದಿಸುತ್ತದೆ ಎಂದು ಹೇಳಬಹುದು. ಅಂತೆಯೇ ನಿಮ್ಮ ಮನೆಗಾಗಲಿ ವಂಶಕ್ಕಾಗಲಿ ಈ ಮಗುವಿನಿಂದ ಬಹಳವಾದದ್ದನ್ನು ನಿರೀಕ್ಷಿಸಬೇಡಿ’ ಎಂದಾಗ ಮಂಗಳ ದಂಪತಿಗಳಿಗೆ ಮತ್ತೊಮ್ಮೆ ನಿರಾಸೆಯೇ ಮೂಡಿತ್ತು.
ಜಾನಕಿ ಬಾಯಿಯ ನಾಲ್ಕು ಮಕ್ಕಳಲ್ಲಿ ನಾಗೇಶನು ಚಿಕ್ಕಂದಿನಿಂದಲೂ ಬುದ್ಧಿಮಾಂದ್ಯನಾಗಿದ್ದನು. ಆದರೆ ಜಾನಕಿಯು ಎಲ್ಲ ಮಕ್ಕಳಿಗಿಂತ ಒಂದಷ್ಟು ಹೆಚ್ಚಿನ ಮುತುವರ್ಜಿಯಿಂದಲೇ ನಾಗೇಶನನ್ನು ನೋಡಿಕೊಳ್ಳುತ್ತಿದ್ದಳು. ಹಾಗೆಂದು ಬುದ್ಧಿಮಾಂದ್ಯನೆಂದರೆ ಕೆಲವು ಸಂದರ್ಭಗಳಲ್ಲಿ ಬುದ್ಧಿವಂತರಿಗಿಂತ ಕಡಿಮೆ ಇಲ್ಲದಷ್ಟು ಚುರುಕಾಗಿದ್ದದ್ದೂ ಇತ್ತು. ಆದರೆ ಆತನೊಟ್ಟಿಗೆ ಯಾರಾದರೊಬ್ಬರು ಪ್ರತಿಕ್ಷಣದಲ್ಲೂ ಇರಬೇಕಾಗಿತ್ತು. ಕೆಲವೊಮ್ಮೆ ಅದರಲ್ಲೂ ನೀರು, ಬೆಂಕಿ ಕಂಡಾಕ್ಷಣ ಆತ ಅಸಹಜವಾಗಿ ವರ್ತಿಸುತ್ತಿದ್ದ. ಇದನ್ನೆಲ್ಲ ಮನಗಂಡ ಜಾನಕಿ ನಾಗೇಶನನ್ನು ಬಿಟ್ಟು ಒಂದು ಗಳಿಗೆ ಕೂಡ ಇರುತ್ತಿರಲಿಲ್ಲ. ಒಂದು ವೇಳೆ ಅಂಥ ಸಂದರ್ಭ ಬಂದರೆ ಸೂಕ್ತ ಭದ್ರತೆಯಿಂದ ಗಂಡನೊಡನೆ ಅಥವಾ ಇತರ ಮಕ್ಕಳೊಡನೆ ಜವಾಬ್ದಾರಿಯನ್ನು ವಹಿಸಿ ಹೋಗುತ್ತಿದ್ದಳು. ಆದರೂ ಆಕೆಯ ಒಳ ಮನಸ್ಸು ನಾಗೆಶನೊಡನೇ ಇರುತ್ತಿತ್ತು. ನಾಗೇಶ ಅಣ್ಣ, ಅಕ್ಕಂದಿರೊಡನೆ ಆಟವಾಡುತ್ತಿದ್ದರೂ ಅದರ ಸೋಲು ಗೆಲುವುಗಳಲ್ಲಿ ಆಸಕ್ತಿ ಇಲ್ಲದೆ ಸಮನಾಗಿ ಕಾಣುತ್ತಿದ್ದನು. ಬಹುಷ ಸ್ಥಿತಃಪ್ರಜ್ಞನಂತೆ. ಒಂದು ಹಂತದಲ್ಲಿ ಜಾನಕಿಯ ಸಂಸಾರ ಸಾಗುತ್ತಿತ್ತು.
ಒಂದು ದಿನ ಜಾನಕಿಯ ಮನೆಯಲ್ಲಿ ದೇವರ ಪೂಜೆಯನ್ನಿಟ್ಟುಕೊಂಡಿದ್ದರು. ಮನೆಯಲ್ಲಿ ಎಲ್ಲರಿಗೂ ಸಂಭ್ರಮ. ಮೂರರ ಹರೆಯದ ನಾಗೇಶನಿಗೆ ಅದರ ಅರಿವಿಲ್ಲದಿದ್ದರೂ ಮನೆಯೊಳಗಿನ ಸಂತಸದ ವಾತಾವರಣದಲ್ಲಿ ಪಾಲ್ಗೊಂಡಿದ್ದನು. ಎಲ್ಲರೂ ಮನೆಯೊಳಗೆ ಸಂಬಂಧಿಕರೊಡನೆ ಪರಸ್ಪರ ಹಿತಾನುಭವದಲ್ಲಿದ್ದರು. ಪುರೋಹಿತರ ಮಂತ್ರೋಚ್ಚಾರಣೆಯೊಂದಿಗೆ, ಅಡುಗೆ ಭಟ್ಟರ ಅಡುಗೆಯ ಘಮದೊಂದಿಗೆ, ಘಂಟೆ ಜಾಗಟೆ ಶಂಖಗಳ ನಾದದೊಂದಿಗೆ ಪೂಜೆಯು ಅಂತಿಮ ಹಂತಕ್ಕೆ ಬಂದಿತ್ತು. ನಾಗೇಶ ಎಲ್ಲರೊಡನೆ ಮನೆಯೊಳಗೇ ಇರುತ್ತಿದ್ದುದನ್ನು ನೋಡಿ ಜಾನಕಿಯೂ ಒಂದು ಸುರಕ್ಷತಾ ಭಾವದಲ್ಲಿದ್ದಳು. ಮಂಗಳಾರತಿಯ ಗೌಜಿಯಲ್ಲಿ ಮಗನ ಕಡೆ ಗಮನವಿಲ್ಲದಿದ್ದರೂ ರಾತ್ರಿಯಾದ ಕಾರಣ ಹೊರಗೆಲ್ಲೂ ಹೋಗದೆ ಮನೆಯೊಳಗೇ ಇರುತ್ತಾನೆಂಬ ಭಾವದಲ್ಲಿ ನಿರಾಳವಾಗಿಯೇ ಇದ್ದಳು ಜಾನಕಿ. ಮಂಗಳಾರತಿ ಮುಗಿಯುವಾಗಲೂ ಮಗ ಕಾಣದಾದಾಗ ಒಳಗಿಂದಲೇ ನಾಗೇಶನನ್ನು ಕರೆದರು. ಆದರೆ ನಾಗೇಶನ ಉತ್ತರವಿಲ್ಲ. ಕೆಲವೊಮ್ಮೆ ನಾಗೇಶನು ಕರೆದಾಗಲೂ ಅನ್ಯಮನಸ್ಕನಾಗಿದ್ದರೆ ಉತ್ತರಿಸದೇ ಇರುತ್ತಿದ್ದುದರಿಂದ ಜಾನಕಿ ಗಾಬರಿಯಾಗಲಿಲ್ಲ. ಮಗನನ್ನು ಕರಕೊಂಡು ಬರಲು ಅಣ್ಣ ರಾಜೇಶನಿಗೆ ಹೊರಗೆ ಕಳುಹಿಸಿದಳು. ರಾಜೇಶ ಚಾವಡಿಗೆ ಬಂದು ನೋಡಿದಾಗ ನಾಗೇಶ ಗೋಡೆಯ ಬದಿಯಲ್ಲಿ ಬಿದ್ದುಕೊಂಡಿದ್ದ. ಅಲ್ಲಿಂದಲೆ ‘ಅಮ್ಮ ನಾಗೇಶ ಇಲ್ಲಿ ಬಿದ್ದಿದ್ದಾನೆ’ ಎಂದು ಬೊಬ್ಬೆ ಹಾಕಿದ. ಎಲ್ಲರೂ ಗಾಬರಿಯಿಂದ ಹೊರಗೆ ಬಂದು ನೋಡಿದರೆ ನಾಗೇಶನ ಜೀವ ಹೊರಟು ಹೋಗಿತ್ತು. ನಡೆದದ್ದಿಷ್ಟೆ… ನಾಗೇಶ ಮಂಗಳಾರತಿ ನಡೆಯುವಾಗ ಹೊರಗೆ ಬಂದಿದ್ದ. ಪೂಜೆಗೆ ಹೆಚ್ಚಿನ ಬೆಳಕಿಗೆಂದು ತತ್ಕಾಲಿಕವಾಗಿ ಹೊರಗಿನ ಫ್ಲಗ್ಗಿಂದ ವಾಯರೊಂದನ್ನು ಎಳೆದು ವ್ಯವಸ್ಥೆ ಮಾಡಿದ್ದರು. ನಾಗೇಶ ಹೊರಗೆ ಹೋದವನಿಗೆ ಈ ಹೊಸ ವ್ಯವಸ್ಥೆಯು ಕುತೂಹಲವನ್ನು ಮೂಡಿಸಿತ್ತು. ಅದೇನು ಎಡವಟ್ಟಾಯಿತೊ ತಿಳಿಯದು ವಾಯರ್ ಮುಟ್ಟಿದಾಕ್ಷಣ ಅದರಿಂದ ಕರೆಂಟ್ ನಾಗೇಶನಿಗೆ ರವಾನೆಯಾಗಿದೆ. ಬೊಬ್ಬೆ ಹಾಕಿದರೂ ಗಂಟೆ ಜಾಗಟೆಗಳ ಸದ್ದಿಗೆ ಯಾರಿಗೂ ತಿಳಿಯಲಿಲ್ಲ. ಅಂತೆಯೇ ಕೆಲ ಕ್ಷಣದಲ್ಲೇ ನಾಗೇಶ ಅಸಹಾಯಕ ಸ್ಥಿತಿಯಲ್ಲಿ ಪ್ರಾಣ ಕಳಕೊಂಡಿದ್ದ.
ಒಂದೇ ಕ್ಷಣದಲ್ಲಿ ದೆವರ ಪೂಜೆ ನಡೆಯುವ ಮನೆಯ ವಾತಾವರಣವೇ ಬದಲಾಗಿ ಮಸಣದ ಮನೆಯಾಯಿತು. ಜಾನಕಿ ತನ್ನ ದುರ್ವಿಧಿಗೆ ತನ್ನಲ್ಲೇ ಜಿಗುಪ್ಸೆಗೊಂಡಳು. ಕಷ್ಟವೊ ಸುಖವೊ ಮಗನನ್ನು ಚೆನ್ನಾಗಿ ನೋಡಿಕೊಂಡಿದ್ದಂಥ ಜಾನಕಿ ಆತನನ್ನು ಕಳಕೊಂಡು ಶೂನ್ಯ ಮನಸ್ಕಳಾಗಿದ್ದಳು. ಕಾಲ ಮುಂದೋಡಿದಾಗ ಎಲ್ಲವೂ ಮರೆಯುತ್ತದೆ ಅಥವಾ ತೀವ್ರತೆ ಕಡಿಮೆಯಾಗುತ್ತದೆ. ಅಂತೆಯೇ ಜಾನಕಿ ಉಳಿದ ಮಕ್ಕಳ ವಿದ್ಯಾಭ್ಯಾಸ ಮದುವೆ ಎಂದು ಒಂದು ಹಂತಕ್ಕೆ ತಲುಪಿದ್ದಳು. ಹಿರಿಯ ಮಗ ರಾಜೇಶ ಗಿರಿಜಾ ದಂಪತಿಗಳಿಗೆ ಮದುವೆ ಆಗಿ ಎರಡು ಮಕ್ಕಳಿದ್ದರೆ ಕಿರಿಯ ಮಗ ಸೋಮನಾಥ ಮಂಗಳಾ ದಂಪತಿಗಳಿಗೆ ಒಬ್ಬನೇ ಮಗ ರಮೇಶ. ಇತ್ತ ಮಗಳು ಮೀರಾ ಮದುವೆಯಾಗಿ ಮಕ್ಕಳೊಡನೆ ಸುಂದರ ಸಂಸಾರದೊಂದಿಗಿದ್ದಾಳೆ. ಗಂಡನೂ ವಯೋ ಸಹಜ ದೌರ್ಬಲ್ಯಗಳಿಂದಾಗಿ ತೀರಿಕೊಂಡಿದ್ದ. ಜಾನಕಿಗೆ ವೃದ್ಧಾಪ್ಯ ಬಂದರೂ ಅದೆಷ್ಟೋ ಕಾಲ ಮುಂದೋಡಿದರೂ ಮಗನನ್ನು ಕಳಕೊಂಡ ಆ ದಿನದ ಘಟನೆಯನ್ನು ಮರೆಯಲು ಸಾಧ್ಯವಾಗಲೇ ಇಲ್ಲ. ಮನೆಯಲ್ಲಿ ಯಾವುದೇ ಪೂಜೆಗಳು ನಡೆದಾಗಲೂ ಅವಳಲ್ಲಿ ಪಾಪ ಪ್ರಜ್ಞೆ ಮೂಡುತ್ತಿತ್ತೇ ವಿನಹ ಭಕ್ತಿ ಭಾವ ಬರುತ್ತಿರಲಿಲ್ಲ. ಇದರಿಂದ ಹೊರಗೆ ಬರಲು ಸಾಧ್ಯವಿಲ್ಲವೆಂಬಂಥ ಅರಿವು ಮಕ್ಕಳಿಗೂ ಇತ್ತು.
ಸೋಮನಾಥ ಮಂಗಳಾ ದಂಪತಿಗಳಿಗೆ ಮಗುವಾಗಿ ಜನಿಸಿದ ರಮೇಶನು ಅಂದು ಕಳಕೊಂಡ ತನ್ನ ಮಗನಂತೇ ಇದ್ದಾನೆಂಬುದು ಜಾನಕಿಯ ಅಭಿಪ್ರಾಯ. ನಾಗೇಶನೆ ಪುನರ್ಜನ್ಮದಲ್ಲಿ ಬಂದಿದ್ದಾನೆ ಎಂಬುದು ಜಾನಕಿಯ ಒಳಮನಸ್ಸು ಹೇಳುತ್ತಿತ್ತು. ಮಕ್ಕಳಾದರೊ ತಾಯಿಗೆ ಇದರಲ್ಲಿ ಸುಖವಿರುವುದಾದರೆ ನಾವು ವಾದ ಮಾಡುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಅಷ್ಟಾಗಿ ಇದು ಬಾಧೆ ಕೊಡುವಂಥದ್ದಲ್ಲ. ಕಳೆದುದನ್ನು ಪಡಕೊಂಡದ್ದರಲ್ಲಿ ಕಾಣಲು ಸಾಧ್ಯವಾದರೆ ಅಷ್ಟರ ಮಟ್ಟಿಗೆ ಖುಷಿಯ ವಿಚಾರವೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಬರಬರುತ್ತ ಬರಬರುತ್ತ ರಮೇಶನಿಗೆ ಈ ಜಾಗಟೆ, ಶಂಖಗಳ ಶಬ್ದಗಳು ಅಸಹನೀಯವೆಂದೆನಿಸಿದಾಗ ಜಾನಕಿಯ ನಂಬಿಕೆಯನ್ನು ಪೂರ್ತಿ ತಳ್ಳಿಹಾಕುವಂಥದ್ದಲ್ಲವೆಂಬುದು ಕೂಡ ಅರಿವಾಗತೊಡಗಿತ್ತು. ಇದಕ್ಕೆ ಜಾನಕಿಯ ವಾದವೂ ಪುಷ್ಟಿ ಕೊಡುತ್ತಿತ್ತು. ಅದು ಹೇಗೆಂದರೆ ಅಂದು ವಿದ್ಯುತ್ ಆಘಾತವಾದಾಗ ಯಾರೂ ಸಹಾಯಕ್ಕೆ ಬಾರದಿರುವುದಕ್ಕೆ ಈ ಶಂಖ,ಜಾಗಟೆಗಳೇ ಕಾರಣವಾದ್ದರಿಂದ ಮತ್ತು ಭಕ್ತಿ ಭಾವ ಪ್ರದರ್ಶನ ಒಂದು ಜೀವವನ್ನೇ ಬಲಿ ಪಡೆದದ್ದರಿಂದ ಈ ಭೀತಿ ಜನ್ಮಾಂತರದಲ್ಲಿ ರಮೇಶನಲ್ಲಿ ಉಳಿದುಕೊಂಡಿದೆ. ಮಾತ್ರವಲ್ಲ ಆ ಜೀವಕ್ಕೆ ಈ ಮನೆಯ ಮೋಹವೂ ಇದ್ದುದರಿಂದ ಅಂತೆಯೇ ಮಂಗಳಾ ಸೋಮನಾಥರಿಗೆ ತತ್ಕಾಲಿಕವಾದರೂ ನಾಸ್ತಿಕ ಭಾವಗಳು ಆವಿರ್ಭವಿಸಿದ ಕಾಲದಲ್ಲಿ ರಮೇಶನ ಜೀವ ಸೃಷ್ಟಿಯಾಗುವಂತೆ ದೇವರು ಇನ್ನೊಂದು ಅವಕಾಶವನ್ನು ಕೊಟ್ಟಿದ್ದಾನೆ. ಪರಿಣಾಮ ರೂಪವಾಗಿ ದೇವರು, ಪೂಜೆ, ಭಕ್ತಿ ಇದರ ಮೇಲೆ ಜಿಗುಪ್ಸೆ ಉಂಟಾಗಿ ರಮೇಶನು ಸದಾ ಅನ್ಯಮನಸ್ಕನಾಗಿರುತ್ತಾನೆ… ಇಷ್ಟೆಲ್ಲ ಯೋಚನೆಗಳು ಜಾನಕಿಗೆ ಬರಬೇಕಾದರೆ ಅದರಲ್ಲಿ ಒಂದಷ್ಟು ಸತ್ಯವಿದೆ ಎನ್ನುವುದೂ ಸತ್ಯವೆ….
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ















