Post Views: 139
1. ವಟ ಸಾವಿತ್ರೀ ವ್ರತ (ವಡಾಂಚಿ ಪುನ್ನವ)
- ಜ್ಯೇಷ್ಠ ಮಾಸದ ಹುಣ್ಣಿಮೆ.
- ವಟವೃಕ್ಷದ ಬಳಿಗೆ ಹೋಗಿ ಪೂಜೆಯನ್ನು ಮಾಡಿ ಬಾಗಿನವನ್ನು ಸಮರ್ಪಿಸುವುದು.
- ಅಂದು ಏಕ ಭುಕ್ತ ಉಪವಾಸವನ್ನು ಮಾಡಬೇಕು.
- ಪತಿಯ ಆಯುಷ್ಯ ವೃದ್ಧಿಗಾಗಿ ಈ ವ್ರತವನ್ನು ಮಾಡುವುದರಿಂದ ಪೂಜೆಯ ನಂತರ ಪತಿಯ ಕಾಲಿಗೆರಗುವುದು ಮುಖ್ಯವಾಗಿದೆ.
- ಅದೇ ದಿನದಂದು ಒಂದು ವರ್ಷ ವಡ್ವತ ಎಂಬ ಆಚರಣೆ ಇದೆ. ಅದರಲ್ಲಿ ಮುತ್ತೈದೆಯು ೧೬(16) ಜನ ಸಲುವಾಸಿನಿಯರನ್ನು ಕರೆಸಿ ತವರು ಮನೆಯ ೮(8) ಬಾಗಿನಗಳನ್ನು ಹಾಗೆಯೇ ಗಂಡನ ಮನೆಯ ೮ ಬಾಗಿನಗಳನ್ನು ಒಬ್ಬೊಬ್ಬರಿಗೆ ನೀಡಬೇಕು.
2. ರಂಗಣೆ
- ಕರ್ಕಾಟಕ ಸಂಕ್ರಾಂತಿಯ ದಿನದಂದು, ಹೊಸದಾಗಿ ಮದುವೆಯಾಗಿರುವ ಹೆಣ್ಣುಮಗಳು ಐದು ವರ್ಷ ಐದೈದು ಮನೆಗಳಿಗೆ ಮೌನವಾಗಿ ಹೋಗಿ ಮುಹೂರ್ತ ದ್ವಾರದ ಹೊಸ್ತಿಲಿನ ಪೂಜೆಯನ್ನು ಮಾಡಿ, ತೆಂಗಿನಕಾಯಿಯನ್ನು ಒಳಗೆ ಬಿಡಬೇಕು ಅದನ್ನು ಕುಮಾರಿಕೆಯು ಹಿಡಿಯಬೇಕು.
- ಆ ದಿನ ಒಪ್ಪೊತ್ತು ಊಟ ಮಾಡಿ ಉಪವಾಸ ವ್ರತವನ್ನು ಮಾಡಬೇಕು.
3. ಶಿವಾಮುಷ್ಠಿ (ಶಿವಾಮೂಠಿ)
- ಶ್ರಾವಣ ಮಾಸದ ಎಲ್ಲಾ ಸೋಮವಾರಗಳು ಹೊಸದಾಗಿ ಮದುವೆಯಾಗಿರುವಂತಹ ಹೆಣ್ಣು ತಲೆಗೆಸ್ನಾನ ಮಾಡಿ, ದೇವರ ಪೂಜೆ ಮಾಡಿ ನೈವೇದ್ಯಕ್ಕೆ ಅನ್ನ ಹಾಗೂ ಮೊಸರನ್ನು ಇಡಬೇಕು.
- ಮೊದಲ ಸೋಮವಾರ ಒಂದು ಮುಷ್ಠಿ ಹಾಗೂ ಒಂದು ಚಿಟಿಕೆ ಇಡಿ ಅಕ್ಕಿ, ಎರಡನೇ ಸೋಮವಾರ ಗೋಧಿ, ಮೂರನೇ ಸೋಮವಾರ ಹೆಸರು, ನಾಲ್ಕನೇ ಸೋಮವಾರ ಎಳ್ಳು ಮತ್ತು ಐದನೇ ಸೋಮವಾರ ಸಿಕ್ಕಿದಲ್ಲಿ ಅಕ್ಕಿಯನ್ನು ಒಂದೇ ಪ್ರಮಾಣದಲ್ಲಿ ದೇವರಿಗೆ ಸಮರ್ಪಿಸುವುದು.
4. ಮಂಗಳಾಗೌರಿ
- ಶ್ರಾವಣ ಮಾಸದ ಮಂಗಳವಾರಗಳು ತಲೆಗೆ ಸ್ನಾನ ಮಾಡಿ ಒಪ್ಪೊತ್ತೂಟದ ಉಪವಾಸ ಮಾಡಬೇಕು.
- ಮಂಗಳಗೌರಿಗೆ ಮಂಟಪವನ್ನು ತಳಿರು – ತೋರಣ ಬಾಳೆ ಗಿಡಗಳಿಂದ ಸಿಂಗರಿಸಿ ತಯಾರಿಸಬೇಕು. ಅದರೊಳಗೆ ಎರಡು ತುದಿ ಬಾಳೆಲೆಗಳನ್ನು ಇಟ್ಟು ಅದರಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ದೇವಿಯನ್ನು ಸ್ಥಾಪಿಸಬೇಕು (ಮೂರ್ತಿ ಅಥವಾ ಅಕ್ಕಿ ಹಿಟ್ಟಿನಿಂದ ತಯಾರಿಸಿದ ದೇವಿಯ ರೂಪ). ಆ ಮೂರ್ತಿಗೆ ಮುತ್ತೈದೆಯೊಬ್ಬಳು ಬಳಸುವ ಪ್ರತಿಯೊಂದು ಆಭರಣವನ್ನು ಅಕ್ಕಿಹಿಟ್ಟಿನಿಂದ ತಯಾರಿಸಿ ಸಿಂಗರಿಸಬೇಕು (ತಾಳಿಸರ, ಬಳೆ, ಕಾಲುಂಗುರ, ಕಪ್ಪು ಹಿಟ್ಟಿನಿಂದ ಜಡೆ ಹಾಗೂ ಬಳೆ).
- ಐದು ವರ್ಷಗಳ ಕಾಲವೂ ಉಪವಾಸದ ಜೊತೆಗೆ ಪೂಜಾ ಸಾಮಗ್ರಿಗಳನ್ನು ತಯಾರಿಸಿಕೊಂಡು ಸುವಾಸಿನಿಯನ್ನು ಕರೆಸಿ ಬಾಗಿನವನ್ನು ನೀಡಬೇಕು.
- ಆ ದಿನ ಬಾಗಿನದ ಜೊತೆಗೆ ಯಾವುದಾದರೂ ಭಕ್ಷ್ಯದ ೧೬(16) ತುಂಡುಗಳನ್ನು ಇಡಬೇಕು.
- ಕೊನೆಯ ವರ್ಷ ದಂಪತಿ ಪೂಜೆಯನ್ನು ಮಾಡಬೇಕು.
5. ಗಂಧೇತಯಿ
- ಶ್ರಾವಣ ಮಾಸದ ಶುಕ್ಲಪಕ್ಷ ತದಿಗೆಯಂದು ಏಳುವರ್ಷಗಳ ಕಾಲ ಉಪವಾಸವನ್ನು ಮಾಡಿ ಆರು ವರ್ಷಗಳವರೆಗೆ ಒಬ್ಬ ಬ್ರಾಹ್ಮಣನಿಗೆ ಹೇಳಿ ಅವರಿಗೆ ಬೆಣ್ಣೆಯ ಜೊತೆಗೆ ಸೌಭಾಗ್ಯ ದ್ರವ್ಯಗಳನ್ನು ಇರಿಸಿ ನೀಡಬೇಕು.
- ಕೊನೆಯ ವರ್ಷ ಸಹೋದರನನ್ನು ಕರೆಸಿ ಅವರಿಗೆ ಕಂಚಿನ ಪಾತ್ರೆಯಲ್ಲಿ ಬೆಣ್ಣೆಯ ಜೊತೆಗೆ ಸೌಭಾಗ್ಯ ದ್ರವ್ಯಗಳನ್ನು ಇಟ್ಟು ಬಾಗಿನವನ್ನು ನೀಡಿ ವ್ರತವನ್ನು ಸಂಪೂರ್ಣಗೊಳಿಸುವುದು.
6. ವರ್ಣನ್ ಷಷ್ಠಿ
- ಶ್ರಾವಣ ಮಾಸದ ಶುಕ್ಲಪಕ್ಷ ಷಷ್ಠಿಯ ದಿನದಂದು ಒಪ್ಪೊತ್ತೂಟದ ಉಪವಾಸವನ್ನು ಮಾಡಿ ಪತಿಯ ಆಯುಷ್ಯಕ್ಕಾಗಿ ಹೆಸರು ಬೇಳೆಯ ವರ್ಣ(ತೊವ್ವೆ)ವನ್ನು ಮಾಡಿ ಅನ್ನದೊಂದಿಗೆ ದೇವರ ಬಳಿ ನೀರನ್ನು ಬಿಟ್ಟು ದನಕ್ಕೆ ಕೊಡಬೇಕು. ನಂತರ ಬಾಗಿನವನ್ನು ಸಮರ್ಪಿಸಿ ಬ್ರಾಹ್ಮಣನಿಗೆ ನೀಡಬೇಕು.
7. ಶೀಳಾ ಸಪ್ತಮಿ
- ಶ್ರಾವಣ ಶುಕ್ಲ ಸಪ್ತಮಿಯ ದಿನ ಉಪವಾಸವನ್ನು ಮಾಡಿ, ನೀರಿನ ಮೂಲದಲ್ಲಿ ಪೂಜೆಯನ್ನು ಮಾಡಿ ಮೊಸರನ್ನವನ್ನು ಆ ನೀರಿಗೆ ಬಿಡಬೇಕು.
8. ಶುಕ್ರವಾರ್ಚಿ ವಾಣ
- ಶ್ರಾವಣ ಮಾಸದ ಶುಕ್ರವಾರ ಬಾಗಿನ ನೀಡುವುದು.
- ಐದು ವರ್ಷಗಳ ಕಾಲ ಉಪವಾಸವನ್ನು ಮಾಡಿ ಐದು ಬಾಗಿನಗಳನ್ನು ನೀಡುವುದು.
- ಕೊನೆಯ ವರ್ಷ ದಂಪತಿ ಪೂಜನವನ್ನು ಮಾಡಬೇಕು.
- ಒಂದು ವರ್ಷದ ಬಾಗಿನದಲ್ಲಿ ಒಂದು ಭಕ್ಷ್ಯದ ೨೦(20) ತುಂಡುಗಳಿರಬೇಕು.
- ಐದು ವರ್ಷಗಳ ನಂತರ ಆ ಶುಕ್ರವಾರದ ಉಪವಾಸವನ್ನು ಮುಂದುವರೆಸಬೇಕು.
9. ಹರಿತಾಲಿಕಾ ವ್ರತ
- ಭಾದ್ರಪದ ಶುಕ್ಲ ತದಿಗೆಯ ದಿನ ಉಪವಾಸ ವ್ರತದ ಮೂಲಕ ಕೇವಲ ಹಣ್ಣು – ಹಂಪಲುಗಳ ಸೇವನೆಯನ್ನು ಮಾಡಿ ಬಾಗಿನವನ್ನು ಸಮರ್ಪಿಸಿ ಪಾರ್ವತಿ – ಪರಮೇಶ್ವರರನ್ನು ಪೂಜಿಸುವುದು.
10. ಋಷಿಪಂಚಮಿ
- ಭಾದ್ರಪದ ಶುಕ್ಲ ಪಂಚಮಿಯ ದಿನದಂದು ಉಪವಾಸ ವ್ರತದ ಮೂಲಕ ಅರುಂಧತಿ ಸಹಿತ ಸಪ್ತರ್ಷಿಗಳನ್ನು ಬಾಗಿನದಲ್ಲಿ ೭(7) ಬಗೆಯ ತರಕಾರಿಗಳನ್ನಿಟ್ಟು ಸಮರ್ಪಿಸುವುದು. ನಂತರ ಅದನ್ನು ಬ್ರಾಹ್ಮಣನಿಗೆ ನೀಡುವುದು.
- ಆ ದಿನ ಸೈಂಧವ ಲವಣವನ್ನು ಸೇವಿಸಬೇಕು.
11. ಅದುಖ ನವಮಿ
- ಭಾದ್ರಪದ ಮಾಸದ ಶುಕ್ಲ ಪಕ್ಷದ ನವಮಿಯ ದಿನದಂದು, ಏಕಭುಕ್ತ ಉಪವಾಸವನ್ನು ಮಾಡಿ, ಬ್ರಾಹ್ಮಣನನ್ನು ಕರೆಸಿ ೯(9) ಮುಠ್ಯೆಗಳನ್ನು ತಯಾರಿಸಿ ಬಾಗಿನದಲ್ಲಿ ಎಂಟು ವರ್ಷಗಳ ಕಾಲ ನೀಡಬೇಕು.
- ಕೊನೆಯ ವರ್ಷವಾದ ಒಂಭತ್ತನೇ ವರ್ಷವೂ ಬ್ರಾಹ್ಮಣನನ್ನು ಕರೆಸಿ ೧೦(10) ತೆಂಗಿನಕಾಯಿಗಳನ್ನು ಬಾಗಿನದೊಂದಿಗೆ ಇರಿಸಿ ದೇವರಿಗೆ ಸಮರ್ಪಿಸಿ ಬ್ರಾಹ್ಮಣನಿಗೆ ನೀಡುವುದು.
12. ಮಹಾಲಕ್ಷೀ
- ಆಶ್ವೀಜ ಮಾಸದ ಶುಕ್ಲ ಅಷ್ಟಮಿಯ ದಿನ ಮತ್ತು ಚತುರ್ದಶಿಯ ದಿನ ಹಾಗೂ ಅದೇ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ಹಾಗೂ ಚತುರ್ದಶಿಯ ದಿನಗಳು.
- ತಲೆಗೆ ಸ್ನಾನ ಮಾಡಿ ಏಕಭುಕ್ತ ಉಪವಾಸ ಮಾಡಬೇಕು.
- ಒಂದು ಮಲ್ಲಿಗೆಯ ಹೂವು ಹಾಗೂ ಒಂದು ಅಕ್ಷತೆಯನ್ನು ಮಂತ್ರದ ಮೂಲಕ ೧೭(17) ಬಾರಿ ತುಳಸಿಗಿಡಕ್ಕೆ ಸಮರ್ಪಿಸುವುದು.
- ಐದು ವರ್ಷಗಳ ಕಾಲ ಈ ವೃತವನ್ನು ಮಾಡಬೇಕಿದ್ದು, ವರ್ಷಗಳ ಲೆಕ್ಕದಲ್ಲಿ ಕಂಕಣವನ್ನು ಕಟ್ಟಬೇಕು.
- ಆ ಕಂಕಣವನ್ನು ಕೊನೆಯ ವರ್ಷ ಹಾಲಿನಲ್ಲಿ ಹಾಕಿ ಅದನ್ನು ತುಳಸಿಕಟ್ಟೆಯಲ್ಲಿ ವಿಸರ್ಜನೆ ಮಾಡಬೇಕು.
13. ಸೋಳಾಂಡೆ
- ಮುತ್ತೈದೆಯು ಮಾಡಬೇಕಾದ ಒಂದು ವ್ರತವಾಗಿದ್ದು ಇದರಲ್ಲಿ ೧೬(16) ತುಂಡುಗಳನ್ನು ಇಟ್ಟು ಬಾಗಿನವನ್ನು ದೇವರಿಗೆ ಸಮರ್ಪಿಸಿ, ಬ್ರಾಹ್ಮಣನಿಗೆ ನೀಡುವುದು.
- ಇದನ್ನು ಹೂವು ಹಣ್ಣುಗಳಿಂದ ಮಾಡಬಹುದು. ಆದರೆ ಮೊದಲನೆಯದಾಗಿ ಬಾಳೆಹಣ್ಣುಗಳಿಂದಲೇ ಮಾಡಬೇಕು.
14. ಸೋಮವತೀ ಅಮಾವಾಸ್ಯೆ
- ಸೋಮವಾರ ಅಮಾವಾಸ್ಯೆ ಬಂದ ದಿನ ಆಚರಿಸಲಾಗುವ ಈ ವ್ರತದಂದು ಅಶ್ವತ್ಥ ವೃಕ್ಷದ ಬಳಿಗೆ ಹೋಗಿ ೧೦೮(108) ಅಕ್ಕಿ ಕಾಳು, ಕುಸುಮ ಸಹಿತ ಹೂವು, ನಾಣ್ಯ ಅಥವಾ ಅಡಿಕೆ ಇಲ್ಲವೇ ಯಾವುದೇ ಭಕ್ಷ್ಯಗಳನ್ನು ೧೦೮ ಪ್ರದಕ್ಷಿಣೆಗಳ ಮೂಲಕ ಸಮರ್ಪಿಸಬೇಕು.
- ಜೊತೆಗೆ ಬಾಗಿನವನ್ನು ಕೂಡ ಸಮರ್ಪಣೆ ಮಾಡಿ ಬ್ರಾಹ್ಮಣನಿಗೆ ನೀಡಬೇಕು.
ಕುಮಾರಿಕೆಯರು ಮಾಡುವ ನಾರಂದೇವು, ಮುತ್ತೈದೆಯರ ಅರಸಿನ ಕುಂಕುಮ, ಕಾರ್ತಿಕ ಹುಣ್ಣಿಮೆಯಂದು ಆಚರಿಸುವ ತ್ರಿಪುರ ಹೀಗೆ ಅನೇಕ ವ್ರತಗಳು ನಮ್ಮ ಚಿತ್ಪಾವನರಲ್ಲಿವೆ. ಆದರೆ ಕಾಲ ಕಳೆದಂತೆ ಕೆಲವು ವ್ರತ – ಉಪಾಸನೆಗಳು ಕಾಲನ ಮಡಿಲಿಗೆ ಸೇರಿವೆ.
ಮಾಹಿತಿ: ಚಂಪಾ .ಸಿ. ನಾತು , ಮುಂಢಲ್ಸು















