ಕಾರ್ಗಿಲ್ ಯುದ್ಧದ ಹುತಾತ್ಮ ಯೋಧರ ನೆನಪಿಗಾಗಿ ಪರಿಸರ ಪ್ರೇಮಿಯೊಬ್ಬರು ತಮ್ಮ 5 ಎಕರೆ ಜಾಗದಲ್ಲಿ ಕಾರ್ಗಿಲ್ ವನ ಎಂಬ ಅರಣ್ಯ ಸಂಪತ್ತನ್ನು ನಿರ್ಮಿಸಿದ್ದಾರೆ.
ಮುಂಡಾಜೆಯ ದುಂಬೆಟ್ಟು ನಿವಾಸಿ ಕೃಷಿಕ ಸಚಿನ್ ಭಿಡೆ ಈ ವನದ ರೂವಾರಿ.
2020ರಲ್ಲಿ ಕಾರ್ಗಿಲ್ ವನಕ್ಕೆ ಚಾಲನೆ ನೀಡಿದ್ದು ಇದರಲ್ಲಿ 800ಕ್ಕೂ ಹೆಚ್ಚು ನಾನಾ ಜಾತಿಯ ಹಣ್ಣಿನ, ಅಳಿವಿನಂಚಿನಲ್ಲಿರುವ, ಔಷಧೀಯ ಸಸ್ಯಗಳನ್ನು ಪೋಷಿಸಲಾಗುತ್ತಿದೆ. 527 ಸಸ್ಯಗಳನ್ನು ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ನೆನಪಿಗಾಗಿ ನೆಡಲಾಗಿದೆ. ಈ ವನಕ್ಕೆ ಇದೀಗ 5 ವರ್ಷ ತುಂಬಿದೆ.
ಕಾರ್ಗಿಲ್ ವಿಜಯ್ ದಿವಸದಂದು ಇಲ್ಲಿ ಹಣತೆಗಳನ್ನು ಬೆಳಗುವ ಮೂಲಕ ದೀಪೋತ್ಸವ ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಕುಟುಂಬಸ್ಥರ ಸಹಿತ ಸಾರ್ವಜನಿಕರಿಗೆ ಇಲ್ಲಿ ಮುಕ್ತ ಪ್ರವೇಶವಿದೆ ಪರಿಸರದಲ್ಲಿ ಕಾಡಾನೆಗಳ ಉಪಟಳವು ಸಾಕಷ್ಟು ಇದ್ದು ಈ ಗಿಡಗಳನ್ನು ಸಂರಕ್ಷಿಸಲು ಕಣ್ಣಿನಲ್ಲಿ ಎಣ್ಣೆ ಬಿಟ್ಟು ಕಾಯುವ ಸ್ಥಿತಿ ಇದೆ.
ಗಿಡಗಳನ್ನು ಪೋಷಿಸಿ ಸಂರಕ್ಷಿಸುವ ಕೆಲಸವು ಸುಲಭವಲ್ಲ. ಪ್ರತಿ ವರ್ಷ ಎರಡು ಬಾರಿ ಕಳೆ ತೆಗೆಯುವುದು,ಗೊಬ್ಬರ ಒದಗಿಸುವುದನ್ನು ಸ್ವಂತ ಖರ್ಚಿನಲ್ಲಿ ಮಾಡಲಾಗುತ್ತದೆ. ಸೈನಿಕರಿಗೆ ಸಂಬಂಧಪಟ್ಟ, ವನಮಹೋತ್ಸವ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಇಲ್ಲಿ ಮುಕ್ತ ಅವಕಾಶವಿದೆ. ಇದೊಂದು ದೇಶವೇ ಗುರುತಿಸುವಂತಹ ಸಾಧನೆಯಾಗಿದೆ.ಪರಿಸರ ಪ್ರೇಮದ ಜತೆ ದೇಶ, ಸೈನಿಕರ ಮೇಲಿನ ಗೌರವಕ್ಕೆ ಸಂದ ಕೊಡುಗೆಯಾಗಿದೆ.
-ಪರಿಸರ ಯೋಧ ಸಚಿನ್ ಭಿಡೆ-
ಸೈನ್ಯವನ್ನು ಸೇರುವ ಆಕಾಂಕ್ಷೆ ಹೊಂದಿದ್ದ ಸಚಿನ್ ಭಿಡೆಗೆ ಕಾರಣಾಂತರದಿಂದ ಇದು ಸಾಧ್ಯವಾಗಲಿಲ್ಲ.ಕೃಷಿಯ ಜತೆ ಪರಿಸರ ಪ್ರೇಮ ಹೊಂದಿದ ಇವರು ಗಿಡ, ಮರಗಳ ಪೋಷಣೆ ಜತೆ ಸ್ವಚ್ಛತೆ ಕಾರ್ಯಕ್ರಮದಲ್ಲೂ ಮುಂದಿದ್ದಾರೆ. ಪರಿಸರಕ್ಕೆ ಮಾರಕವಾಗುವ ಯಾವುದೇ ವಿಚಾರಗಳಲ್ಲಿ ಜಾಗೃತಿ ಮೂಡಿಸುವುದು, ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ಒದಗಿಸುವ ಜತೆ ತಾವೇ ಇಳಿದು ಕೆಲಸ ಮಾಡುವವರು.
ಅರಣ್ಯ ಇಲಾಖೆ, ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಗಿಡಗಳನ್ನು ನೆಡುವ ಕಾಯಕಕ್ಕೆ ಕೈಜೋಡಿಸುವ ಇವರು ಅಲ್ಲಿಗೆ ತಮ್ಮ ಕೆಲಸ ನಿಲ್ಲಿಸದೆ ಆ ಗಿಡಗಳ ಬೆಳವಣಿಗೆಯಲ್ಲೂ ಸದಾ ಜಾಗೃತಿ ವಹಿಸುತ್ತಾರೆ. ವನ್ಯಜೀವಿ ಳ,ಉರಗಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು ಊರಗಗಳನ್ನು ಸಂರಕ್ಷಿಸಿ ಅರಣ್ಯಕ್ಕೆ ಬಿಡುವ ಕೆಲಸಗಳಲ್ಲೂ ಉರಗಮಿತ್ರರಿಗೆ ಸಹಾಯಕರಾಗಿದ್ದಾರೆ. ನದಿ,ಕೆರೆ ಮೊದಲಾದ ಜಲಮೂಲಗಳ ಸ್ವಚ್ಛತೆಯಲ್ಲೂ ಇವರು ಮುಂದಿದ್ದಾರೆ. ಜಲಮೂಲಗಳಿಗೆ ತ್ಯಾಜ್ಯ ಸೇರದಂತೆ ಜಾಗೃತಿ ನೀಡುತ್ತಾರೆ. ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರಾಗಿರುವ ಇವರಿಗೆ ಈ ತಂಡ ಪರಿಸರ ಪ್ರೇಮದ ಕೆಲಸಕ್ಕೆ ಇನ್ನಷ್ಟು ಬಲ ಒದಗಿಸಿದೆ.
ಕೋಟ್
ಸಾರ್ವಜನಿಕರಿಗೆ ಕಾರ್ಗಿಲ್ ವನಕ್ಕೆ ಭೇಟಿ ನೀಡಲು ಮುಕ್ತ ಅವಕಾಶವಿದೆ. ಆದರೆ ಪ್ಲಾಸ್ಟಿಕ್ ಬಳಸಲು, ಎಸೆಯಲು ಅವಕಾಶವಿಲ್ಲ.ಮುಂದಿನ ದಿನಗಳಲ್ಲಿ ಇಲ್ಲಿ ವಾಕಿಂಗ್ ಟ್ರ್ಯಾಕ್ ಸೇರಿದಂತೆ ಬೆಂಚುಗಳನ್ನು ಅಳವಡಿಸುವ ಯೋಜನೆ ಇದೆ.
ಸಚಿನ್ ಭಿಡೆ, ಕಾರ್ಗಿಲ್ ವನದ ರೂವಾರಿ

















